ರುತುರಾಜ್ ಗಾಯಕ್ವಾಡ್… ಟೀಮ್ ಇಂಡಿಯಾದ ಭರವಸೆಯ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಐರ್ಲೆಂಡ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಗಾಯಕ್ವಾಡ್ ಮಾಜಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅಂದ ಹಾಗೇ ಹೊಗಳಿಕೆ, ತೆಗಳಿಕೆ ಆಟದಲ್ಲಿರೋದು ಸಹಜ. ಆದ್ರೆ ರುತುರಾಜ್ ಗಾಯಕ್ವಾಡ್ ಈಗಾಗಲೇ ತನ್ನ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿಕೊಂಡಿದ್ದಾರೆ. ಹೀಗಾಗಿ ರುತುರಾಜ್ ಗಾಯಕ್ವಾಡ್ ಬಗ್ಗೆ ಕ್ರಿಕೆಟ್ ಪಂಡಿತರಿಗೆ ಒಂದು ಥರಾ ನಂಬಿಕೆ ಇದೆ.
ಅಂದ ಹಾಗೇ ರುತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಶೈಲಿಯನ್ನು ಆರ್. ಅಶ್ವಿನ್ ಅವರು ಡ್ಯಾನ್ಸ್ ಕಿಂಗ್ ಪ್ರಭುದೇವ್ ಅವರ ನೃತ್ಯಕ್ಕೆ ಹೋಲಿಸಿದ್ದಾರೆ. 22 ಯಾರ್ಡ್ ಅಂಗಣದಲ್ಲಿ ಗಾಯಕ್ವಾಡ್ ಅವರ ಬ್ಯಾಟಿಂಗ್ ರುದ್ರ ನರ್ತನ ಪ್ರಭುದೇವ್ ಡಾನ್ಸ್ ಸ್ಟೇಪ್ಸ್ನಂತಿದೆ ಎಂದು ಅಶ್ವಿನ್ ಕೊಂಡಾಡಿದ್ದಾರೆ. ಇನ್ನು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಅವರು, ರುತುರಾಜ್ ಗಾಯಕ್ವಾಡ್ ಅವರು ಟೀಮ್ ಇಂಡಿಯಾದ ಭವಿಷ್ಯ ನಾಯಕ ಎಂದು ಹೇಳಿದ್ದಾರೆ.
ಆದ್ರೆ ರುತುರಾಜ್ ಗಾಯಕ್ವಾಡ್ ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಪಂದ್ಯಗಳಲ್ಲಿ ಹೈಪ್ ಸಿಗೋದು ಮಾಮೂಲಿ. ಅದೇ ಕೆಟ್ಟ ಪ್ರದರ್ಶನ ನೀಡಿದಾಗ ಟೀಕೆಗಳು ಕೇಳಿಬರುತ್ತೆ ಎಂಬುದು ಗಾಯಕ್ವಾಡ್ಗೆ ಗೊತ್ತಿಲ್ಲದ ವಿಚಾರವೇನು ಅಲ್ಲ. ಹೀಗಾಗಿ ರುತುರಾಜ್ ತನ್ನ ಆಟದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ನಡುವೆ, ರುತುರಾಜ್ ಗಾಯಕ್ವಾಡ್ ಯಾವಾಗಲೂ ಧೋನಿಯವರನ್ನು ನೆನಪು ಮಾಡಿಕೊಳ್ಳುತ್ತಾರೆ. ಸಿಎಸ್ಕೆ ತಂಡದ ಪರ ಆಡ್ತಿರೋ ಗಾಯಕ್ವಾಡ್ ಧೋನಿ ಗರಡಿಯಲ್ಲಿ ಪಳಗಿದ ಆಟಗಾರ. ಹಾಗಾಗಿ ಗಾಯಕ್ವಾಡ್ ಧೋನಿ ಸೂತ್ರವನ್ನೇ ಪರಿಪಾಲಿಸುತ್ತಿದ್ದಾರೆ.
ನನಗೆ ಧೋನಿ ಭಾಯ್ ನೀಡುತ್ತಿದ್ದ ಸಲಹೆಯನ್ನು ಪಾಲಿಸುತ್ತಿದ್ದೇನೆ. ಪ್ರತಿ ಪಂದ್ಯದ ಮೇಲೆ ಮೊದಲು ಗಮನಹರಿಸಬೇಕು. ಪ್ರತಿ ಪಂದ್ಯದ ಅವಕಾಶವನ್ನು ಬಾಚಿಕೊಳ್ಳಬೇಕು. ಭವಿಷ್ಯದ ಬಗ್ಗೆ ಯೋಚಿಸಬಾರದು ಎಂದು ಹೇಳಿದ್ದರು. ಅದನ್ನೆ ನಾನು ಮೈದಾನದಲ್ಲಿ ರೂಢಿಸಿಕೊಳ್ಳುತ್ತಿದ್ದೇನೆ ಎಂದು ರುತುರಾಜ್ ಗಾಯಕ್ವಾಡ್ ಕ್ಯಾಪ್ಟನ್ ಧೋನಿ ಬಗ್ಗೆ ಹೇಳಿಕೊಂಡಿದ್ದಾರೆ.
ನಾಯಕತ್ವದ ಬಗ್ಗೆಯೂ ಮಾತನಾಡಿದ ಗಾಯಕ್ವಾಡ್, ನಾಯಕನಾದವನು ಹತ್ತು ಆಟಗಾರರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಿಕೊಳ್ಳಬೇಕು.
ಆಟಗಾರರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕು. ಅತೀಯಾದ ಸಲಹೆಗಳನ್ನು ಕೊಟ್ಟಾಗ ಸಾಕಷ್ಟು ಗೊಂದಲಗಳಿಗೆ ಎಡೆಮಾಡಿಕೊಡುತ್ತವೆ. ಹೀಗಾಗಿ ಪಂದ್ಯ ಮುಗಿದ ನಂತರ ತಪ್ಪು ಸರಿಗಳನ್ನು ಮನವರಿಕೆ ಮಾಡಿಕೊಡಬೇಕು. ಇದನ್ನು ನಾಯಕನಾದವನು ಅರಿತುಕೊಂಡಿರಬೇಕು ಅಂತಾರೆ ಗಾಯಕ್ವಾಡ್. ಒಟ್ಟಿನಲ್ಲಿ ರುತುರಾಜ್ ಗಾಯಕ್ವಾಡ್ ತನ್ನ ಕ್ರಿಕೆಟ್ ಬದುಕಿನಲ್ಲಿ ಧೋನಿ ಸೂತ್ರವನ್ನು ಅಳವಡಿಸಿಕೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶ ಸಿಗುತ್ತೆ ಎಂಬುದನ್ನು ಕಾದು ನೋಡಬೇಕು.