ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ ಆರಂಭಿಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮಹಬೂಬಾ ಮಫ್ತಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಗಡಿಭಾಗದಲ್ಲಿರುವ ನೂರಾರು ಮಕ್ಕಳು ಮತ್ತು ಮಹಿಳೆಯರು ಈ ಕಾರ್ಯಾಚರಣೆಯಿಂದ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
“ಅವರು ಗುಂಡು ಹಾರಿಸುತ್ತಾರೆ, ನಾವೂ ಹಾರಿಸುತ್ತೇವೆ; ಇದರಿಂದ ಯಾವ ಉಪಯೋಗ?” ಎಂಬ ಪ್ರಶ್ನೆ ಎತ್ತಿದ ಮಫ್ತಿ, ಮಿಲಿಟರಿ ದಾಳಿಯಿಂದ ಭಯೋತ್ಪಾದನೆ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. “ಬಾಲಾಕೋಟ್ ಏರ್ಸ್ಟ್ರೈಕ್ನ ಬಳಿಕ ಏನು ಬದಲಾಗಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಜಮ್ಮುಕಾಶ್ಮೀರ ಗಡಿಯ ಜನರ ಬದುಕು ನಿರಂತರ ಭೀತಿಯಲ್ಲಿ ಸಾಗುತ್ತಿದೆ. ಇನ್ನು ಎಷ್ಟು ದಿನ ಈ ಪರಿಸ್ಥಿತಿ ಮುಂದುವರಿಯಬೇಕು ಎಂಬ ನೋವಿನಲ್ಲಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಹಿಂಸೆಗೆ ಅಂತ್ಯ ಹಾಡುವಂತೆ ಮನವಿ ಮಾಡಿದ್ದಾರೆ.