ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಹಾಗೂ ದಕ್ಷಿಣ ಭಾರತದ ಆರ್ಥಿಕ ಹಿತಾಸಕ್ತಿಗಳ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ.
ಕರ್ನಾಟಕ ಬಲಿಷ್ಠವಾದಾಗ ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದಾಗ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಹೇಳಿದ ಅವರು, ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ಕೊಡುಗೆಯನ್ನು ಗುರುತಿಸಿ, ರಾಜ್ಯಗಳಿಗೆ ನ್ಯಾಯಯುತ ಅನುದಾನ ಹಾಗೂ ನಿಧಿಗಳ ಹಂಚಿಕೆ ಆಗಬೇಕು ಎಂದು ಒತ್ತಾಯಿಸಿದರು.
‘ನಮಗೆ ನಮ್ಮ ನಿಧಿಗಳಲ್ಲಿ ನ್ಯಾಯ ಬೇಕು’
ಕರ್ನಾಟಕ ಭಾರತದ ಅಭಿವೃದ್ಧಿಯ ಪಾಲುದಾರ ರಾಜ್ಯವಾಗಿದ್ದು, ನಿಧಿಗಳ ಹಂಚಿಕೆ ಹಾಗೂ ರಾಜ್ಯದ ಧ್ವನಿಗೆ ನ್ಯಾಯ ದೊರೆಯಬೇಕು ಎಂದು ಡಿಕೆಶಿ ಹೇಳಿದರು.ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ. ನಾವು ಭಾರತದ ಅಭಿವೃದ್ಧಿಯ ಪಾಲುದಾರರು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.ಕರ್ನಾಟಕ ದೂರು ನೀಡಲು ಬಂದಿಲ್ಲ. ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಾಜ್ಯಗಳಿಗೆ ಸಲ್ಲಬೇಕಾದ ಗೌರವ ಮತ್ತು ನ್ಯಾಯಯುತ ಪಾಲಿನ ಕುರಿತು ಚರ್ಚಿಸಲು ಬಂದಿದ್ದೇವೆ ಎಂದು ಅವರು ಹೇಳಿದರು.
‘ಭಾರತದ ಅಭಿವೃದ್ಧಿಯ ಪಯಣ ದಕ್ಷಿಣ ಭಾರತದ ಮೂಲಕ ಸಾಗುತ್ತದೆ’
ತಾವು ಹೆಮ್ಮೆಯ ಭಾರತೀಯನಾಗಿ ಹಾಗೂ 16 ಶತಮಾನಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಮ್ಮೆಯ ಕನ್ನಡಿಗನಾಗಿ ಮಾತನಾಡುತ್ತಿರುವುದಾಗಿ ಡಿಕೆಶಿ ಹೇಳಿದರು.
ತಾವು ಕೇವಲ ಕರ್ನಾಟಕದ ಪರವಾಗಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಪರವಾಗಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.
ಭಾರತದ ಅಭಿವೃದ್ಧಿಯ ತೇರು ದಕ್ಷಿಣ ಭಾರತದ ಮೂಲಕವೇ ಸಾಗುತ್ತಿತ್ತು, ಸಾಗುತ್ತಿದೆ ಮತ್ತು ಮುಂದೆಯೂ ಸಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ದೇಶದ GDPಗೆ ದಕ್ಷಿಣ ಭಾರತದ ದೊಡ್ಡ ಕೊಡುಗೆ
ದಕ್ಷಿಣ ಭಾರತದ ಐದು ರಾಜ್ಯಗಳು ದೇಶದ ಒಟ್ಟು ಜನಸಂಖ್ಯೆಯ ಸುಮಾರು 20% ಹೊಂದಿದ್ದರೂ, ಭಾರತದ ಒಟ್ಟು GDPಗೆ ಸುಮಾರು 33% ಕೊಡುಗೆ ನೀಡುತ್ತಿವೆ ಎಂದು ಡಿಕೆಶಿ ಹೇಳಿದರು.ಅಂದರೆ, ದೇಶದ ಆರ್ಥಿಕತೆಯಲ್ಲಿ ಉತ್ಪತ್ತಿಯಾಗುವ ಪ್ರತಿ ಮೂರು ರೂಪಾಯಿಗಳಲ್ಲಿ ಸುಮಾರು ಒಂದು ರೂಪಾಯಿ ದಕ್ಷಿಣ ಭಾರತದಿಂದ ಬರುತ್ತದೆ ಎಂದು ಅವರು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಗಳಲ್ಲಿ ಕರ್ನಾಟಕವೂ ಅತ್ಯಂತ ಬಲಿಷ್ಠ ರಾಜ್ಯಗಳಲ್ಲಿ ಒಂದಾಗಿದೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.
ಮುಂದಿನ ಚರ್ಚೆಗಳಲ್ಲಿ ಕರ್ನಾಟಕದ ಪರವಾಗಿ ನಿರ್ದಿಷ್ಟ ಸಮಸ್ಯೆಗಳು, ಸಂಬಂಧಿತ ಅಂಕಿ-ಅಂಶಗಳು ಹಾಗೂ ಪರಿಹಾರ ಕ್ರಮಗಳನ್ನು ದಕ್ಷಿಣ ವಲಯ ಮಂಡಳಿಯ ಮುಂದೆ ಮಂಡಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.








