ಕೊಪ್ಪಳ : ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸದಂತೆ ಗೃಹ ಸಚಿವರ ಬಗ್ಗೆ ಏಕವಚನದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದ್ದು, ಸರ್ಕಾರಕ್ಕೆ ಧಮ್ಕಿ ಹಾಕೋಕೆ ಡಿ.ಕೆ.ಶಿವಕುಮಾರ್ ಯಾರು ಎಂದು ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಗೃಹ ಸಚಿವರ ಬಗ್ಗೆ ಡಿ.ಕೆ.ಶಿವಕುಮಾರ್ ಏಕವಚನದಲ್ಲಿ ಮಾತನಾಡುತ್ತಾರೆ ಎಂದರೆ ಅವರ ಸಂಸ್ಕೃತಿ ಎಂತಹದ್ದು ಎಂದು ಗೊತ್ತಾಗುತ್ತದೆ. ಒಬ್ಬ ಮನುಷ್ಯನ ಸಂಸ್ಕೃತಿಯನ್ನು ಅವನ ನಾಲಿಗೆ ಮೇಲೆ ಅಳೆಯುತ್ತಾರೆ. ಡಿ.ಕೆ.ಶಿವಕುಮಾರ್ ಅವರ ಸಂಸ್ಕೃತಿ ಎಂತಹದ್ದು ಎಂಬುದು ನೀವೇ ಅರ್ಥ ಮಾಡಿಕೊಳ್ಳಬೇಕು. ಡಿ.ಕೆ. ಶಿವಕುಮಾರ್ ಹೇಳಿದ್ದೆಲ್ಲಾ ವೇದ ವಾಕ್ಯವಲ್ಲ. ಸರ್ಕಾರಕ್ಕೆ ಧಮ್ಕಿ ಹಾಕೋಕೆ ಡಿ.ಕೆ.ಶಿವಕುಮಾರ್ ಯಾರು ಎಂದು ಪ್ರಶ್ನಿಸಿದರು.
ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಬಂಧಿತ ಯುವಕ ತಾನು ಅಪ್ಪಟ ಕಾಂಗ್ರೆಸ್ಸಿಗ ಎಂದ ಪಾಟೀಲ್, ಅಲ್ಲಿನ ಶಾಸಕರ ಅಕ್ಕನ ಮಗ ಎಂದು ಹೇಳಿದ್ದಾನೆ. ಅವನು ಕಾಂಗ್ರೆಸ್ ನಲ್ಲಿದ್ದರೂ ಹಿಂದೂ ಪರವಾಗಿದ್ದೇನೆ ಎಂದು ಹೇಳಿದ್ದಾನೆ. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪೂರ್ವನಿಯೋಜಿತ. ಆ. 5ರಂದು ಪ್ರಧಾನಿ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅದನ್ನು ಸಹಿಸಲಾಗದವರು ಮನಸ್ಸಿನಲ್ಲಿಟ್ಟುಕೊಂಡು ಪ್ರಧಾನಿ ಮೋದಿ, ದೇಶಕ್ಕೆ ಮತ್ತು ನಮ್ಮ ರಾಜ್ಯದ ಸಿಎಂ ಹಾಗೂ ರಾಜ್ಯಕ್ಕೆ ಅವರೇ ಕೆಟ್ಟ ಹೆಸರು ತರಲು ಪೂರ್ವನಿಯೋಜಿತ ಗಲಭೆ ಮಾಡಿದ್ದಾರೆ ಎಂದು ಆರೋಪಿಸಿದರು.
ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್ ನವರು ಬರಲಿಲ್ಲ. ಅವರು ವೋಟ್ ಬ್ಯಾಂಕ್ ಸಲುವಾಗಿ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿ ಪಾಟೀಲ್, ಅಖಂಡ ಶ್ರೀನಿವಾಸ ಮೂರ್ತಿ ಅವರ ಜಾಗದಲ್ಲಿ ಬೇರೆ ಯಾವುದೇ ಪಕ್ಷದವರು ಇದ್ದಿದ್ದರೆ ಇಷ್ಟೊತ್ತಿಗೆ ರಾಜ್ಯಾದ್ಯಂತ ಬೆಂಕಿ ಹತ್ತಿಕೊಳ್ಳುತ್ತಿತ್ತು. ಆದರೆ ಕಾಂಗ್ರೆಸ್ ನವರು ತಮ್ಮದೇ ಪಕ್ಷದ ಶಾಸಕನ ರಕ್ಷಣೆಗೆ ಧ್ವನಿ ಎತ್ತಲಿಲ್ಲ ಎಂದು ಹೇಳಿದ್ದಾರೆ.