ಯೋಗ ಗುರು ಸ್ವಾಮಿ ಶಿವಾನಂದರ 125 ವರ್ಷ ದೀರ್ಘಾಯುಷ್ಯದ ಗುಟ್ಟು….
ನಾವು ಕೂಡ ನಿಮ್ಮಂತೆ 123 ವರ್ಷಗಳವರೆಗೆ ಬದುಕಬಹುದೇ? ಎರಡು ವರ್ಷಗಳ ಹಿಂದೆ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಸ್ವಾಮಿ ಶಿವಾನಂದರನ್ನ ಬೇಟಿಯಾದಾಗ ಕೇಳಲಾದ ಪ್ರಶ್ನೆಯಿದು. “ಇಲ್ಲ, ಎಂದಿಗೂ ಇಲ್ಲ “ಇದು ಕಲಿಯುಗ್ … ಎಲ್ಲಾ ದುರಾಸೆಗಳು!” ಎಂದು ಸಮಚಿತ್ತದಿಂದ ಪ್ರತಿಕ್ರಿಯಿಸಿದರು. 125 ವರ್ಷ ವಯಸ್ಸಿನಲ್ಲಿ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನ ಪಡೆದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ… ಸ್ವಾಮಿ ಶಿವಾನಂದರು.
125 ವರ್ಷ ವಯಸ್ಸಿನ ಸ್ವಾಮಿ ಶಿವಾನಂದ ಅವರು ಪದ್ಮಶ್ರೀಯನ್ನು ಸ್ವೀಕರಿಸಲು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನೊಳಗೆ ಬರಿಗಾಲಿನಲ್ಲಿ ಬಂದಾಗ ಸಭಾಂಗಣ ಚಪ್ಪಾಳೆ ಮೂಲಕ ಕರಾಡತನ ಮಾಡಿತು. ಪ್ರಶಸ್ತಿ ಸ್ವೀಕರಿಸುವ ಮುನ್ನ ಅವರು ಪ್ರಧಾನಿ ಮತ್ತು ರಾಷ್ಟ್ರಪತಿಗಳ ಮುಂದೆ ಮಂಡಿಯೂರಿ ನಮಸ್ಕರಿಸಿದರು. 125 ವರ್ಷ ವಯಸ್ಸಿನಲ್ಲಿ ಅವರ ಈ ನಡುವಳಿಕೆ ನೆರದಿದ್ದವರ ಹೃದಯವನ್ನ ಬೆಚ್ಚಗಾಗಿಸಿತು. ಈ ನಡೆಗೆ ಪ್ರತ್ಯುತ್ತರವಾಗಿ, ಪ್ರಧಾನಿ ಮೋದಿ ಕೂಡ ನೆಲವನ್ನು ಮುಟ್ಟಿ ನಮಸ್ಕರಿಸಿದರು. ಈ ವೀಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
125 ವರ್ಷ ವಯಸ್ಸಿನ ಯೋಗ ಗುರು ಸ್ವಾಮಿ ಶಿವಾನಂದರ ದೀರ್ಘಾಯುಷ್ಯದ ಸೀಕ್ರೇಟ್ ಏನು ಎನ್ನುವ ಕುತೂಹಲ ನಿಮಗೆಲ್ಲ ಕಾಡಿರುತ್ತೆ ಅದಕ್ಕೆ ಉತ್ತರವನ್ನ ನಾವು ಕೊಡ್ತೀವಿ.
ನೋ ಸೆಕ್ಸ್ ನೋ ಸ್ಪೈಸಿ ಫುಡ್
ಸ್ವಾಮಿ ಶಿವಾನಂದ ಜೀವನ ಶೈಲಿಯೇ ಕಠಿಣಕರವಾದದ್ದು. ಅವರೇ ಹೇಳಿಕೊಂಡಿರುವ ಪ್ರಕಾರ ಅವರ ದೀರ್ಘ ಜೀವನದ ಪ್ರಮುಖ ಗುಟ್ಟು “ ಲೈಂಗಿಕತೆ ಇಲ್ಲದ ನಿಷ್ಕಲ್ಮಶ ಜೀವನ ಮಸಾಲೆ ಇಲ್ಲದ ಆಹಾರ ಮತ್ತು ದಿನನಿತ್ಯ ಯೋಗಾಭ್ಯಾಸ. ತನ್ನ ಸುದೀರ್ಘ ಜೀವನಕ್ಕಾಗಿ, ಸನ್ಯಾಸಿ ಮೂರು ವಿಷಯಗಳಿಗೆ ಮನ್ನಣೆ ನೀಡುತ್ತಾನೆ – ಯೋಗ, ಶಿಸ್ತು ಮತ್ತು ಬ್ರಹ್ಮಚರ್ಯ.
ಸ್ವಾಮಿ ಶಿವಾನಂದರು 8 ಆಗಸ್ಟ್ 1896 ರಂದು ಬ್ರಿಟಿಷ್ ಇಂಡಿಯಾದ ಬಂಗಾಳ ಪ್ರೆಸಿಡೆನ್ಸಿಯ ಸಿಲ್ಹೆಟ್ ಜಿಲ್ಲೆಯಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) ತೀವ್ರ ಬಡತನದ ಕುಟುಂಬದಲ್ಲಿ ಜನಿಸಿದರು. ಅವರ ಜೀವನವು ಸುಮಾರು 3 ಶತಮಾನಗಳನ್ನು ವ್ಯಾಪಿಸಿದೆ.
ಅವರು ಆರು ವರ್ಷದವರಿದ್ದಾಗ ಅವರ ತಂದೆ, ತಾಯಿ ಮತ್ತು ಸಹೋದರಿ ಮೂರು ತಿಂಗಳೊಳಗೆ ಸಾವನ್ನಪ್ಪಿಬಿಡುತ್ತಾರೆ. ಒಬ್ಬಂಟಿಯಾದ ಶಿವಾನಂದರು ಕಾಶಿಗೆ ಪ್ರಯಾಣ ಬೆಳೆಸುತ್ತಾರೆ. ಗುರು ಓಂಕಾರಾನಂದರ ಬಳಿ ತರಬೇತಿಯನ್ನು ಪಡೆದು ಯೋಗವನ್ನು ಕರಗತ ಮಾಡಿಕೊಳ್ತಾರೆ. ಕಾಶಿಯ ಘಾಟ್ಗಳಲ್ಲಿ ಸೇವೆ ಸಲ್ಲಿಸಲು ಶುರು ಮಾಡ್ತಾರೆ. ಇಂದಿಗೂ, ಅವರು ನಿಯಮಿತ ವ್ಯಾಯಾಮ ಮತ್ತು ಯೋಗಾಸನಗಳಿಂದ ಉತ್ತಮ ಆರೋಗ್ಯವನ್ನ ಕಾಪಾಡಿಕೊಂಡಿದ್ದಾರೆ.
“ನಾನು ಅತ್ಯಂತ ಸರಳ ಮತ್ತು ಶಿಸ್ತಿನ ಜೀವನವನ್ನು ನಡೆಸುತ್ತೇನೆ. ನಾನು ಎಣ್ಣೆ ಮತ್ತು ಮಸಾಲೆಗಳಿಲ್ಲದೆ ಬೇಯಿಸಿದ ಆಹಾರವನ್ನು ಮಾತ್ರ ತಿನ್ನುತ್ತೇನೆ. ಅಕ್ಕಿ ಮತ್ತು ಬೇಯಿಸಿದ ದಾಲ್ ಅನ್ನು ಒಂದೆರಡು ಹಸಿರು ಮೆಣಸಿನಕಾಯಿಗಳೊಂದಿಗೆ ತಿನ್ನುತ್ತೇನೆ, ”ಎಂದು ಮಾಧ್ಯಮಗಳೊಡನೆ ಮಾತನಾಡುವಾಗ ತಿಳಿಸಿದರು.
ವಸಾಹತುಶಾಹಿ ಯುಗದಲ್ಲಿ ಜನಿಸಿದ ಗುರುಗಳು ಸರಳ ಜೀವನವನ್ನೆ ಮುಂದುವರೆಸುತ್ತಿದ್ದಾರೆ. ಆಧುನಿಕ ಜೀವನದ ಬದಲಾವಣೆ ಕುರಿತು ಯಾವುದೇ ಒಲವು ಬೆಳಸಿಕೊಂಡಿಲ್ಲ.
ಶಿವಾನಂದರು ನೆಲದ ಮೇಲೆ ಚಾಪೆಯ ಮೇಲೆ ಮಲಗುತ್ತಾರೆ, ಮರದ ಚಪ್ಪಡಿಯನ್ನು ತಲೆದಿಂಬಾಗಿ ಬಳಸುತ್ತಾರೆ. “ನಾನು ಹಾಲು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುತ್ತೇನೆ ಏಕೆಂದರೆ ಇವು ಅಲಂಕಾರಿಕ ಆಹಾರಗಳು ಎಂದು ಅವರು ಹೇಳಿದ್ದಾರೆ.
ಕಡು ಬಡತನವನ್ನು ಅನುಭವಿಸಿದ ಶಿವಾನಂದರು ಮಾನವೀಯತೆಯ ಸೇವೆಯನ್ನ ಧ್ಯೇಯವಾಗಿ ತೆಗೆದುಕೊಂಡಿದ್ದಾರೆ. ಅವರು ವಾರಣಾಶಿಯ ಘಾಟ್ಗಳಲ್ಲಿ ಯೋಗವನ್ನು ಕಲಿಸುತ್ತಾರೆ. ಬಡವರು ಮತ್ತು ನಿರ್ಗತಿಕರಿಗೆ ಆಹಾರ ನೀಡುತ್ತಾರೆ. ಮತ್ತು ಕುಷ್ಠರೋಗದಿಂದ ಬಳಲುತ್ತಿರುವ ಸುಮಾರು 600 ಭಿಕ್ಷುಕರಿಗೆ ಊಟ ಮತ್ತು ಇತರ ವಸ್ತುಗಳನ್ನು ವ್ಯವಸ್ಥೆ ಮಾಡುವ ಮೂಲಕ ಅವರ ಉಳಿವಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Who is Swami Sivananda, the oldest Padma Shri recipient?