ಸ್ವಾರ್ಥಿ ಮನುಷ್ಯ ನೀಚ ಕ್ರಿಮಿ ವಿಷ ಜಂತು ಅನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಲೇ ಇದ್ದಾನೆ. ಮೊನ್ನೆ ಕೇರಳದ ಮಲ್ಲಪುರಂನಲ್ಲಿ ವಿನಾಕಾರಣ ಗರ್ಭಿಣಿ ಹೆಣ್ಣಾನೆಯೊಂದಕ್ಕೆ ಪಟಾಕಿ ತುಂಬಿದ ಅನಾನಸ್ ತಿನ್ನಿಸಿ ಕೊಲ್ಲಲಾಗಿದೆ. ಯಾರಿಗೂ ಹಾನಿ ಉಂಟುಮಾಡದ ಪಾಪದ ಆ ಹೆಣ್ಣಾನೆ ಆಹಾರ ಅರಸಿ ಊರ ಕಡೆಗೆ ಬಂದಿತ್ತು. ತಿಂದ ಅನಾನಸ್ ಬಾಯೊಳಗೆ ಸ್ಪೋಟಿಸಿದ ಪರಿಣಾಮ ಆನೆ ಸಂಕಟ ತಡೆಯಲಾರದೆ ನೀರೊಳಗೆ ನಿಂತಿತ್ತು. ಕೊನೆಗೂ ಮೊನ್ನೆ ಪಾಪಿ ಮನುಷ್ಯನ ಸಹವಾಸವೇ ಬೇಡವೆಂದು ಹೊಟ್ಟೆಯೊಳಗಿನ ಪುಟ್ಟ ಕಂದನ ಜೊತೆ ಸಾವಿಗೆ ಶರಣಾಯ್ತು. ಮನುಷ್ಯನೊಳಗಿನ ರಾಕ್ಷಸ ಪ್ರವೃತ್ತಿ ವಿಜೃಂಭಿಸಿದಾಗ ಈ ರೀತಿಯ ಪರಮ ನೀಚ ಕೃತ್ಯಗಳು ಜರುಗುತ್ತವೆ. ಅಲ್ಲೆಲ್ಲೋ ದೂರದ ಆಫ್ರಿಕಾದ ಬೋತ್ಸಾವನಾದಲ್ಲಿ ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೆ ಒಂದು ವರ್ಷದಲ್ಲಿ ಬರೋಬ್ಬರಿ 110 ಕಾಡಾನೆಗಳು ನಿಗೂಡವಾಗಿ ಸಾವನ್ನಪ್ಪಿವೆ. ಆನೆಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳದೇ ಹೋದರೆ ನಮ್ಮ ಕಾಡಿನ ಸಂಪತ್ತನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗೇ ಕಾಡಾನೆಗಳ ಬಗ್ಗೆ ಪ್ರೇಮ ಮೂಡಲಿ ಎನ್ನುವ ಕಾರಣದಿಂದ ಹಳೆಯ ಲೇಖನವೊಂದನ್ನು ಇಲ್ಲಿ ಮತ್ತೆ ಹಂಚಿಕೊಳ್ಳುತ್ತಿದ್ದೇನೆ.
ಆನೆಗಳ ಪಾಲಿಗೆ ಸಂಕಟ ತಂದೊಡ್ಡುತ್ತಿರುವುದು ಕ್ರೂರಿ ಮಾನವ ಮಾತ್ರ. ಎರಡು ಮೂರು ವರ್ಷಗಳ ಹಿಂದೆ ತನ್ನ ಪಾಡಿಗೆ ತಾನು ಸ್ವಚ್ಛಂದವಾಗಿ ವಲಸೆ ಮಾಡುತ್ತಿದ್ದ ಮುದ್ದೆ ಪ್ರಿಯ ಸಿದ್ದ ಅನ್ನುವ ಆನೆ ಕಾಲಿಗೆ ಏಟು ಮಾಡಿಕೊಂಡು ಮಂಚನಬೆಲೆ ಜಲಾಶಯದಲ್ಲಿ ತಿಂಗಳುಗಳ ಕಾಲ ನಿಂತು ಕೊನೆಗೂ ಸಾವನ್ನಪ್ಪಿದ್ದ ಘಟನೆ ನಿಮಗೆ ನೆನಪಿರಬಹುದು. ಈ ಸಿದ್ದ ಅನ್ನುವ ಹೆಸರಿನ ಆನೆಯೂ ಯಾರಿಗೂ ಹಾನಿ ಮಾಡಿರಲಿಲ್ಲ. ಬನ್ನೇರುಘಟ್ಟ ಸಾವನದುರ್ಗಾ ಎಲಿಫೆಂಟ್ ಕಾರಿಡಾರ್ ಈ ಸಿದ್ಧನ ಟ್ರೆಡಿಷನಲ್ ವಾಕ್ ಪಾಥ್ ಆಗಿತ್ತು. ಹಳ್ಳಿಗರು ಸಹ ತಮ್ಮ ಮನೆಗೆ ಬರುತ್ತಿದ್ದ ಸಿದ್ದನಿಗೆ ಪ್ರೀತಿಯಿಂದ ಮುದ್ದೆ ಕೊಡುತ್ತಿದ್ದರು. ಇಂತಿಪ್ಪ ಸಿದ್ದ ಕಾಲಿಗೆ ಏಟು ಮಾಡಿಕೊಂಡಿದ್ದರ ಕಾರಣ ಕಾಲುವೆಗೆ ಬಿದ್ದಿದ್ದು ಅನ್ನಲಾಯ್ತು ಆದರೆ ಒಬ್ಬ ಅವಿವೇಕಿ ಫಾರೆಸ್ಟ್ ವಾಚರ್ ಇದರ ಕಾಲಿಗೆ ಶೂಟ್ ಮಾಡಿದ್ದ ಅನ್ನುಬ ಗುಸುಗುಸು ಕೇಳಿಯೂ ಕೇಳದಂತೆ ಮುಚ್ಚಿಹೋಯಿತು. ಈ ಸಿದ್ಧನ ಗೆಳೆಯ ರಂಗ ಅನ್ನುವ ಇನ್ನೊಂದು ಬನ್ನೇರುಘಟ್ಟದ ಕಾಡಾನೆಯನ್ನು ಅರಣ್ಯ ಇಲಾಖೆ ಹಿಡಿದು ಕೊಡಗಿನ ಆನೇಚೌಕೂರಿಗೆ ಸಾಗಿಸಿತ್ತು. ಅಲ್ಲಿ ಖಾಸಗಿ ಬಸ್ ರಂಗನಿಗೆ ಬಡಿದು ಕೊಂದಿತು. ವೀರನಹೊಸಳ್ಳಿ ರೇಂಜ್ ನಲ್ಲಿ ಕಳೆದ ವರ್ಷ ರೈಲ್ವೇ ಕಂಬಿ ತಡೆಗೋಡೆ ದಾಟುವ ಸಾಹಸದಲ್ಲಿ ಗಂಡಾನೆಯೊಂದು ಪ್ರಾಣಬಿಟ್ಟಿತ್ತು. ನಾಗರಹೊಳೆ, ಬಂಡೀಪುರ, ಸತ್ಯಮಂಗಲ, ಗೋಪಾಲಸ್ವಾಮಿ ಬೆಟ್ಟ, ಕುಶಾಲನಗರದ ಕಾಡುಗಳಲ್ಲಿ ಪ್ರತೀ ವರ್ಷ ನಿಗೂಡವಾಗಿ ಸಾಯುವ ಆನೆಗಳ ಸಂಖ್ಯೆಯೇನೂ ಕಮ್ಮಿ ಇಲ್ಲ. ಕೊಡಗಿನ ಕಾಫಿ ಬೆಳೆಗಳಿಗೆ ಆನೆಗಳಿಂದ ಹಾನಿಯಾಗುತ್ತಿದೆ ಹಾಗಾಗಿ ಆನೆಗಳನ್ನೂ ಶೂಟ್ ಮಾಡಲು ಅನುಮತಿ ನೀಡಬೇಕು ಅಂತೊಬ್ಬ ಜನಪ್ರತಿನಿಧಿ ಹಿಂದೆ ಮಾತಾಡಿ ವಿವಾದ ಸೃಷ್ಟಿಸಿದ್ದ. ನಮಗೆ ಆನೆಗಳ ಮೇಲೆ ಯಾಕಿಷ್ಟು ದ್ವೇಷ. ಅವುಗಳ ಕಾರಿಡಾರ್ ನಾಶ ಮಾಡಿ ರಸ್ತೆ, ಬ್ರಿಡ್ಜ್, ನಗರಗಳನ್ನು ಕಟ್ಟಿದ್ದು ನಮ್ಮ ಅಪರಾಧ. ಹಾಗಿದ್ದರೂ ಸಾಯುತ್ತಿರುವುದು ಮಾತ್ರ ನಿಷ್ಪಾಪಿ ಗಜಪಡೆ.
ಜೀವಸಂಕುಲದಲ್ಲೇ ಈಗ ಉಳಿದಿರುವ ಜೀವಿಗಳಲ್ಲಿ ಅತ್ಯಂತ ದೈತ್ಯ ಜೀವಿಗಳಾದ ಆನೆಗಳು ಅತ್ಯಂತ ಬುದ್ದಿವಂತ ಪ್ರಾಣಿಗಳೂ ಹೌದು. ಒಮ್ಮೆ ಆನೆಯ ಬಿಹೇವಿಯರ್ ಅರ್ಥ ಮಾಡಿಕೊಂಡರೆ ನಾಯಿ ಬೆಕ್ಕು ಮುಂತಾದ ಪೆಟ್ ಪ್ರಾಣಿಗಳಿಗಿಂತ ಇಷ್ಟವಾಗಿಬಿಡುತ್ತೆ. ಆನೆಗಳು ಮನುಷ್ಯರನ್ನು ಹಚ್ಚಿಕೊಂಡರೆ ಪ್ರಾಣದ ಗೆಳಯರಾಗಿಬಿಡುತ್ತವೆ. ಸತ್ತ ಆನೆಗಾಗಿ ಕೊರಗಿ ಸೊರಗಿದ ಮಾವುತ ಕಾವಡಿಗಳನ್ನು ನೋಡಿದ್ದೇನೆ. ಮಾವುತ ಸತ್ತನೆಂದು ಆಹಾರ ಬಿಟ್ಟು ಸತ್ತ ಆನೆಯೊಂದರ ಕಥೆಯನ್ನೂ ಕೇಳಿದ್ದೇನೆ. ಕಾಡೆಂಬ ನಿಗೂಢ ಸ್ವಚ್ಛಂದ ಅನೂಹ್ಯ ಲೋಕದ ನಿಜವಾದ ಬುದ್ದಿವಂತ ಪ್ರಾಣಿ ಆನೆ.
ಪಾರಂಪರಿಕ ವಲಸೆ ಮಾರ್ಗ ಸೃಷ್ಟಿಸಿಕೊಂಡು ತಲೆತಲೆಮಾರುಗಳು ಅದೇ ಗಜಮಾರ್ಗದಲ್ಲಿ ಸಂಚರಿಸುತ್ತವೆ ಆನೆಗಳು. ಆನೆಗಳಿಗೆ ತಮ್ಮ ವಾಕ್ ಪಾಥ್ ಯಾವುದು ಅನ್ನುವುದು ಅನುವಂಶೀಯವಾಗಿ ತಿಳಿಯುತ್ತದೆ. ಅಜ್ಜ ಸಂಚರಿಸಿದ ಮಾರ್ಗದಲ್ಲಿ ಮೊಮ್ಮಗ ಆನೆಯೂ ಸಂಚರಿಸುತ್ತದೆ. ಆ ಮಾರ್ಗದ ಪ್ರತಿ ಗುರುತನ್ನೂ ಆನೆ ನೆನಪಿಟ್ಟುಕೊಳ್ಳುತ್ತದೆ. ಒಂದು ಪಳಗಿದ ಆನೆ ಎಂತದ್ದೇ ಅಸಾಧ್ಯದ ಕೆಲಸವನ್ನೂ ಸಾಧ್ಯವಾಗಿಸುತ್ತದೆ. ಮನುಷ್ಯನ ಕಮಾಂಡ್ ಅರ್ಥ ಮಾಡಿಕೊಂಡು ಅಕ್ಯೂರೇಟ್ ಆಗಿ ಸ್ಪಂದಿಸುವ ಅಪರೂಪದ ದೈತ್ಯ ಜೀವಿ ಆನೆ.
ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ಪಾಲಿಸಿಕೊಂಡು ಬರುತ್ತವೆ ಆನೆಗಳು. ಹೆಣ್ಣಾನೆ ತನ್ನ ಮರಿಗಳನ್ನು ಗುಂಪಿನ ಮಧ್ಯ ಇಟ್ಟುಕೊಂಡು ಪ್ರೊಟೆಕ್ಟ್ ಮಾಡುತ್ತವೆ. ಒಂದು ಆರೋಗ್ಯವಂತ ಆನೆ ಪ್ರತೀ ದಿನ ಕನಿಷ್ಟ 40 ಕಿಲೋಮೀಟರ್ ವಲಸೆ ಮಾಡುತ್ತದೆ. ಆನೆಗಳು ಅತ್ಯುತ್ತಮ ಈಜುಪಟುಗಳು. ನೀರಿನಲ್ಲಿ ಲೀಲಾಜಾಲವಾಗಿ ಸಲೀಸಾಗಿ ದಣಿವಿಲ್ಲದೆ ಈಜುತ್ತವೆ. ನೀರಿನಲ್ಲಿ ಜಲಕ್ರೀಡೆಯಾಡಿದ ನಂತರ ಮಣ್ಣಿನ ಸ್ನಾನ ಮಾಡುವ ಆನೆಗಳು ಪ್ರಕೃತಿಯ ಸನ್ಹೆ ಸೂಚನೆಗಳನ್ನೂ ಸ್ಪಷ್ಟವಾಗಿ ಗ್ರಹಿಸುತ್ತವೆ.
ಆನೆಗಳಿಗೆ ಎಳೆಬಿದಿರು, ಬಾಳೆ ಕಬ್ಬು ಹಾಗೂ ಜೊಂಡು ಹುಲ್ಲು ಅತಿ ಅಚ್ಚುಮೆಚ್ಚಿನ ಆಹಾರ. ಅದೆಷ್ಟೆ ಎತ್ತರದ ಗುಡ್ಡವನ್ನಾದರೂ ಗಜಪಡೆ ಸುಲಭವಾಗಿ ಆರೋಹಣ ಹಾಗೂ ಅವರೋಹಣ ಮಾಡುತ್ತವೆ. ಮದ ಬಂದ ಗಂಡು ಆನೆಯನ್ನು ಸೇರಲು ಹೆಣ್ಣು ಆನೆಗಳು ನಿರಾಕರಿಸುತ್ತವೆ ಆದರೆ ಅದೇ ಮದಗಜ ಒಂದು ಅವಧಿಯಲ್ಲಿ ನಾಲ್ಕು ಹೆಣ್ಣುಗಳನ್ನು ಗರ್ಭವತಿಯನ್ನಾಗಿಸುತ್ತವೆ ಅನ್ನುತ್ತಾರೆ ಆನೆ ತಜ್ಞರು. ಅದೆಷ್ಟೇ ಧೈರ್ಯವಂತ ಮನುಷ್ಯನನ್ನೂ ಕಂಗೆಡುವಂತೆ ಮಾಡುತ್ತದೆ ಆನೆಯ ಒಂದು ಘೀಳು. ಆನೆ ತನ್ನ ಸೊಂಡಲಿನ ತುದಿಯಿಂದ ಮರದ ತೊಗಟೆಯ ತೆಳ್ಳನೆಯ ಸೀಳು ಸುಲಿಯುತ್ತವೆ. ಅದೆಂತದ್ದೇ ಎಲೆಕ್ಟ್ರಕ್ ಫೆನ್ಸಿಂಗ್ ತಮ್ಮ ವಲಸೆ ಮಾರ್ಗದಲ್ಲಿದ್ದರೂ ಚಾಣಾಕ್ಷತನದಿಂದ ದಾಟಿ ಪಾರಾಗುತ್ತವೆ ಆನೆಗಳು. ಗಜ-ಮಾನವ ಸಂಘರ್ಷ ಶತಶತಮಾನಗಳಿಂದ ನಡೆದು ಬಂದಿದೆ. ಅರಣ್ಯ ಇಲಾಖೆಗೆ ಸದಾ ತಲೆನೋವು ತಂದೊಡ್ಡುವುದು ಆನೆಗಳ ಬುದ್ದಿವಂತಿಕೆ.
ಆನೆಗಳಿಗೆ ಪ್ರೈವೆಸಿ ಬೇಕು ಪ್ರಶಾಂತತೆ ಬೇಕು. ಗದ್ದಲಗಳಿಂದ ದೂರವಿದ್ದು ತಮ್ಮ ನೆಲೆಯನ್ನು ಹುಡುಕಿಕೊಳ್ಳುತ್ತವೆ ಕರಿವಂಶ. ನಮ್ಮ ಪಶ್ಚಿಮ ಘಟ್ಟ ಏಷ್ಯಾದ ಅತಿ ದೊಡ್ಡ ಎಲಿಫೆಂಟ್ ಕಾರಿಡಾರ್. ಏಷ್ಯನ್ ಎಲಿಫೆಂಟ್ ಅತಿ ಹೆಚ್ಚಿರುವುದು ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ. ಭಾರತದಲ್ಲಿ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚಿನ ಏಷ್ಯನ್ ಆನೆಗಳಿವೆ. ನಮ್ಮ ರಾಜ್ಯದ ಕಾಡುಗಳಲ್ಲ ಹತ್ತಿರ ಹತ್ತಿರ 7 ಸಾವಿರ ಆನೆಗಳಿವೆ ಅನ್ನುತ್ತದೆ ಇತ್ತೀಚೆಗೆ ನಡೆಸಲಾದ ಗಜಗಣತಿಯ ವರದಿಗಳು. ನಡೆಯಲಾರದ ಆನೆ ಹೆಚ್ಚು ದಿನ ಬದುಕುವುದಿಲ್ಲ..
ಇಂತದ್ದೇ ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದರೆ ತನ್ನ ಕುಟುಂಬದ ಸದಸ್ಯ ಆನೆಯೊಂದು ಪ್ರಾಣಬಿಟ್ಟ ಸ್ಥಳವನ್ನೂ ಆ ಕುಟುಂಬದ ಎಲ್ಲಾ ಆನೆಗಳು ನೆನಪಿನಲ್ಲಿಟ್ಟುಕೊಂಡಿರುತ್ತವೆ. ಪ್ರತೀ ಸಲ ವಲಸೆ ಸಮಯದಲ್ಲಿ ಆ ಸ್ಥಳಕ್ಕೆ ಬಂದಾಗ ಆ ಜಾಗದಲ್ಲಿ ನಿಂತು ಶ್ರದ್ಧಾಂಜಲಿ ಸಲ್ಲಿಸುತ್ತವೆ. ಇವೆಲ್ಲವೂ ಮಿಥ್ ಅಲ್ಲ; ಸತ್ಯ. ಆನೆಗಳು ಕಾಡಿನ ರಕ್ಷಕರು, ನಮ್ಮ ಅರಣ್ಯದ ನಿಜವಾದ ಸಂಪತ್ತು. ಆನೆ ಮತ್ತು ಹುಲಿ ಉಳಿಯಲು ಹೇಗ ಕಾಡು ಕಾರಣವೋ ಹಾಗೆಯೇ ಕಾಡು ಉಳಿಯಲು ಹುಲಿ ಮತ್ತು ಆನೆಗಳು ಕಾರಣ ಅನ್ನುವುದು ನಮಗೆ ಅರಿವಾದರೆ ಮುಂದಾದರೂ ವಿನಾಕಾರಣ ಅಮಾಯಕ ಪ್ರಾಣಿಗಳ ಹತ್ಯೆ ನಿಲ್ಲಬಹುದೇನೋ!
-ವಿಭಾ (ವಿಶ್ವಾಸ್ ಭಾರದ್ವಾಜ್)