ಚಾಮರಾಜನಗರ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಹವಾ ಸೃಷ್ಟಿಸಿರುವ ಕರಿಮಣಿ ಮಾಲೀಕ ನೀನಲ್ಲ ರೀಲ್ಸ್ ಸದ್ಯ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದೆ.
ಪತ್ನಿಯು ಕರಿಮಣಿ ಮಾಲೀಕನ ನೀನಲ್ಲ ಎಂದು ಹೇಳಿದ್ದಕ್ಕೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ನಡೆದಿದ್ದು, ಗ್ರಾಮದ ಕುಮಾರ್ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ ಎನ್ನಲಾಗಿದೆ.
ಈ ರೀಲ್ಸ್ ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ಹಲವು ಬಾರಿ ಪತಿ ರೀಲ್ಸ್ ಮಾಡದಂತೆ ಎಚ್ಚರಿಕೆ ಕೂಡ ನೀಡಿದ್ದ. ಆದರೂ ರೂಪ ರೀಲ್ಸ್ ಮಾಡಿದ್ದಾರೆ ಎನ್ನಲಾಗಿದೆ. ರೂಪಾ ರೀಲ್ಸ್ ನೋಡಿದ್ದ ಕುಮಾರ್ ಸ್ನೇಹಿತರು ರೇಗಿಸಿದ್ದರು. ಇದರಿಂದ ಬೇಸರಗೊಂಡಿದ್ದ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಕುಟುಂಬಸ್ಥರು ರೂಪಾ, ಯಶೋದಾ, ಗೋವಿಂದ ಮೇಲೆ ದೂರು ನೀಡಿದ್ದಾರೆ. ಕುಮಾರ್ ಸಾವಿಗೆ ಇವರೇ ಕಾರಣ ಎಂದು ಆರೋಪಿಸಿದ್ದಾರೆ.