ಕಡಿಮೆ ಅವಧಿಯಲ್ಲಿ ಅಕ್ಕಿ ಕಾಳುಗಳ ಮೇಲೆ ನಾಡಗೀತೆ ಬರೆದ ಸಾಧಕ Saaksha Tv
ಸುಬ್ರಹ್ಮಣ್ಯ: ಉದ್ಯಮಿ ಮೈಕ್ರೋ ಪರಮೇಶ್ ಚಿಕ್ಕ ಅಕ್ಕಿ ಕಾಳುಗಳ ಮೇಲೆ ನಮ್ಮ ನಾಡಗೀತೆಯಾದ ‘ಜೈ ಭಾರತ ಜನನಿಯ ತನುಜಾತೆ’ ಗೀತೆಯನ್ನು ಬರೆದು ದಾಖಲೆ ಸೃಷ್ಟಿಸಿದ್ದಾರೆ.
ಈ ದಾಖಲೆ ಮಾಡಿದ ವ್ಯಕ್ತಿ ಮೂಲತಃ ಹಾವೇರಿಯವರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಇವರು 80 ನಿಮಿಷದಲ್ಲಿ 136 ಅಕ್ಕಿ ಕಾಳುಗಳ ಮೇಲೆ ನಾಡಗೀತೆ ಪದ್ಯ ಬರೆದು ಸಾಧನೆ ಮಾಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಮತ್ತು ಕನಿಷ್ಠ ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದ ದಾಖಲೆ ಸೃಷ್ಟಿಸಿದ್ದಾರೆ. ಅಕ್ಕಿ ಕಾಳಿನ ಮೇಲೆ ಸಂಪೂರ್ಣ ನಾಡಗೀತೆಯನ್ನು ಬರೆದು ಅದಕ್ಕೆ ಫ್ರೇಮ್ ಅಳವಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ.
ಇವರ ಈ ಸಾಧನೆಗಾಗಿ ವಂಡರ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ನವರು ಪರಮೇಶ್ರನ್ನು ಸಂಪರ್ಕಿಸಿದ್ದಾರೆ. ಅವರ ಮುಂದೆ ಶೀಘ್ರವೇ ತಮ್ಮ ಸಾಧನೆಯನ್ನು ಪ್ರದರ್ಶಿಸಲಿದ್ದಾರೆ. ಮುಂದೆ ಈ ಸೂಕ್ಷ್ಮ ಕಲೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ಲಿಮ್ಕಾ ಮತ್ತು ಗಿನ್ನಿಸ್ ವಿಶ್ವದಾಖಲೆ ಮಾಡುವ ಹಂಬಲ ಪರಮೇಶ್ ಹೊಂದಿದ್ದಾರೆ.
ಅಲ್ಲದೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನು 10 ಸಾವಿರಕ್ಕೂ ಅಧಿಕ ಅಕ್ಕಿ ಕಾಳಿನ ಮೇಲೆ ಕನಿಷ್ಠ ಅವಧಿಯಲ್ಲಿ ಬರೆದು ಗಿನ್ನಿಸ್ ರೆಕಾರ್ಡ್ ಮಾಡುವತ್ತ ಅಭ್ಯಾಸ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಅಕ್ಕಿ ಕಾಳಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮಹಾತ್ಮ, ಚರಿತ್ರೆ ಮತ್ತು ಇತಿಹಾಸ ಬರೆಯುವ ಹಂಬಲವೂ ಇದೆಯಂತೆ.









