ಯಡಿಯೂರಪ್ಪ ಡಕೋಟಾ ಬಸ್ ನಲ್ಲಿ ಕೂತಿದ್ದಾರೆ : ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಕೋಟಾ ಬಸ್ ನಲ್ಲಿ ಕೂತಿದ್ದಾರೆ. ಡಕೋಟಾ ಬಸ್ ನಲ್ಲಿ ಕೂತು ಸ್ವಾಹಾ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇಂದು ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ನ ಸಹ ಸದಸ್ಯತ್ವ ಪಡೆದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ಕಳೆದ ಉಪಚುನಾವಣೆಯಲ್ಲಿ ನಾನು ಶರತ್ ವಿರುದ್ಧ ಪ್ರಚಾರ ಮಾಡಿದ್ದೆ.
ಆದ್ರೂ ಅವರು ಈಗ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. ಅವರ ಬೆಂಬಲವನ್ನು ನಾವು ಒಪ್ಪಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ತಮ್ಮ ಮಾಜಿ ಶಿಷ್ಯ ಎಂಟಿಬಿ ನಾಗರಾಜ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಎಂಟಿಬಿ ನಾಗರಾಜ್ ಸೋತರೂ ಹಿಂಬಾಗಿಲನಿಂದ ಮಂತ್ರಿ ಆಗಿದ್ದಾರೆ.
ಅವರು ಈಗ ಸಚಿವರಾಗಿದ್ದರೂ ಹೊಸಕೋಟೆ ಜನರ ಪ್ರತಿನಿಧಿಯಲ್ಲ. ಶರತ್ ಬಚ್ಚೇಗೌಡ ಆ ಕ್ಷೇತ್ರದ ಪ್ರತಿನಿಧಿ. ಅವರು ಕ್ಷೇತ್ರದಲ್ಲಿ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಅವರಿಗೆ ಬೆಂಬಲಿಸಲಿದೆ ಎಂದು ಹೇಳಿದರು.
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಕೋಟಾ ಬಸ್ ನಲ್ಲಿ ಕೂತಿದ್ದಾರೆ ಎಂದು ಟೀಕಿಸಿದ ಸಿದ್ದರಾಮಯ್ಯ, ಸಿಎಂ ಡಕೋಟಾ ಬಸ್ ನಲ್ಲಿ ಕೂತು ಸ್ವಾಹಾ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವುದು ಅಭಿವೃದ್ಧಿಪರ ಸರ್ಕಾರವಲ್ಲ ಎಂದು ಹರಿಹಾಯ್ದರು.