ಬಿಜೆಪಿ ಅಭ್ಯರ್ಥಿಯನ್ನು ಕೂಡಲೇ ಸ್ಪರ್ಧೆಯಿಂದ ಅನರ್ಹಗೊಳಿಸಿ : ಡಿಕೆಶಿ ಆಗ್ರಹ
ಬೆಂಗಳೂರು : ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಅಧಿಕಾರದ ದುರುಪಯೋಗ ಆಗುತ್ತಿದ್ದು, ಬಿಜೆಪಿ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಉಪಚುನಾವಣೆಯಲ್ಲಿ ಅಧಿಕಾರ ದುರುಪಯೋಗವಾಗಿದೆ.
ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನಮ್ಮ ಮನವಿಗೆ ಚುನಾವಣಾ ಆಯೋಗ ಸ್ಪಂದಿಸಿದೆ. ಇದಕ್ಕೆ ಧನ್ಯವಾದಗಳು ಎಂದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ ಆಪ್ತರ ಬಳಿ ಮಾತನಾಡುವಾಗ 34 ಸಾವಿರ ಸೆಟ್ ಅಪ್ ಬಾಕ್ಸ್ ನೀಡಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಭೀರ ತನಿಖೆ ನಡೆಸುತ್ತಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಸಾವಿರ ರೂ. ಬೆಲೆಯ ಬಾಕ್ಸ್ ನೀಡಿದ್ದು, 3.4 ಕೋಟಿ ರೂ. ವ್ಯಯಿಸಿದ್ದಾರೆ. 150 ರೂ. ಮಾಸಿಕ ಬಾಡಿಗೆ ಮನ್ನಾ ಮಾಡಿದ್ದು, 50 ಲಕ್ಷ ರೂ. ಮೊತ್ತ ಆಗಲಿದೆ. ನಿತ್ಯದ ಲೆಕ್ಕಾಚಾರ ಹಾಕುತ್ತಿರುವ ಚುನಾವಣಾ ಆಯೋಗ, ಇದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕು.
ಕಲಂ 173 ಹಾಗೂ 171ರ ಅಡಿ ಕಾನೂನು ಪ್ರಕಾರ ಇದು ಅಪರಾಧ. ಇದರಿಂದ ಅಭ್ಯರ್ಥಿ ಸ್ಪರ್ಧೆಯನ್ನು ಇಂದು ರಾತ್ರಿಯೇ ಅನರ್ಹಗೊಳಿಸಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ನಾಳೆ ಮತದಾನ : ಪೊಲೀಸ್ ಚಕ್ರವ್ಯೂಹದಲ್ಲಿ ರಾರಾ ಕ್ಷೇತ್ರ
ಚುನಾವಣಾ ಆಯೋಗ ಈ ಸಂಬಂಧ ಕೂಡಲೇ ತನಿಖೆ ನಡೆಸಬೇಕು. ಸಿಎಂ ಯಡಿಯೂರಪ್ಪ ನನ್ನ ವಿರುದ್ಧ ದೂರು ನೀಡಿದಂತೆ ಇವರ ಮೇಲೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ ಡಿಕೆಶಿ, ನಮಗೆ ಅಚ್ಚರಿ ಮೂಡಿಸುವ ಅಂಶವೆಂದರೆ 42 ಸಾವಿರ ಮತಗಳು ಮನೆಯೇ ಇಲ್ಲದೆ ಖಾಲಿ ನಿವೇಶನ ಇರುವಲ್ಲಿ ಮತದಾರರ ಪಟ್ಟಿಗೆ ಸೇರಿಸಿದ್ದಾರೆ. ಇಬ್ಬರು ಮೂರು ಮಂದಿ ಮನೆಯಲ್ಲಿದ್ದರೆ 5-7 ಮತದಾರರು ಅಂತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ದೂರಿದರು.
ಈ ಬಗ್ಗೆ ನಮ್ಮ ಕಾರ್ಯಕರ್ತರು ಸರ್ವೆ ಮಾಡಿದ್ದಾರೆ. ನನ್ನ ಬಳಿಯೂ ದಾಖಲೆ ಇದೆ. ಕೊಟ್ಟಿಗೆಪಾಳ್ಯದ ಭಾಗ 293, ನಾಗರಬಾವಿ ಎರಡನೇ ಹಂತ, ರಾಜರಾಜೇಶ್ವರಿ ವಾರ್ಡ್ 160ರ ನಂ.130ರಿಂದ 239ರವರೆಗಿನ 56 ಮತಗಳು ಒಂದೇ ವಿಳಾಸದಲ್ಲಿವೆ.
ಇನ್ನೊಂದೆಡೆ ಒಂದೇ ಮನೆಯಲ್ಲಿ 15 ಮತ, ಮತ್ತೊಂದೆಡೆ 10 ಮತಗಳಿವೆ ಎಂದು ಹೇಳಲಾಗಿದೆ. ಆದರೆ, ಅಷ್ಟು ಸಂಖ್ಯೆಯ ಜನ ಅಲ್ಲಿಲ್ಲ ಎಂದು ತಿಳಿಸಿದರು.
ನ್ಯೂ ಹೊರೈಜನ್ ಶಾಲೆಯ ಬೂತ್ ನಂ. 162ರ ಎರಡನೇ ಸಂಖ್ಯೆಯ ಮನೆಯಲ್ಲಿ 10 ಮತ ಇದೆ ಎಂದು ನಕಲಿ ಗುರುತಿನ ಚೀಟಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದ ಶಿವಕುಮಾರ್, ಬಾಲ್ಡ್ವಿನ್ ಕಿರಿಯ ಪ್ರಾಥಮಿಕ ಶಾಲೆಯ ವ್ಯಾಪ್ತಿಯಲ್ಲಿ 9 ಮತ ಸೇರಿಸಲಾಗಿದೆ. ಬೆಮೆಲ್ ಬಡಾವಣೆಯ ಖಾಲಿ ನಿವೇಶನದಲ್ಲಿ ಜನ ಇದ್ದಾರೆಂದು ಗುರುತಿನ ಚೀಟಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ನಾನು ಉಪೇಂದ್ರ `ಎ’ ಸಿನಿಮಾಹಾಗೆ ಸಸ್ಪೆನ್ಸ್ ಉಳ್ಳವನು : ಹೆಚ್.ನಾಗೇಶ್
ನಾನು ರಿಟನಿರ್ಂಗ್ ಅಧಿಕಾರಿ ಹಾಗೂ ಜನರಲ್ಲಿ ಮನವಿ ಮಾಡುತ್ತೇನೆ. ಮತದಾನಕ್ಕೆ ತೆರಳಿದ ಸಂದರ್ಭ ಚೆಕ್ ಮಾಡಿ, ನಮ್ಮ ಮನೆಯಲ್ಲಿ ಇಷ್ಟು ಜನ ಇಲ್ಲ ಎಂದು ತಿಳಿಸಿ.
ಚುನಾವಣಾ ಆಯೋಗಕ್ಕೂ ಮನವಿ ಮಾಡುತ್ತೇನೆ. ನಕಲಿ ಮತದಾರರನ್ನು ಕೂಡಲೇ ಬಂಧಿಸಬೇಕೆಂದು ಟ್ರಬಲ್ ಶೂಟರ್ ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel