ಚಿಕ್ಕಬಳ್ಳಾಪುರ: ಭೀಕರ ಅಪಘಾತದಲ್ಲಿ 13 ಜನ ಸಾವನ್ನಪ್ಪಿದ್ದು, ರಾತ್ರಿ ಒಂದು ಟ್ರಿಪ್ ಗೊರೆಂಟ್ಲಾಗೆ (Accident In Chikkaballapur) ಹೋಗಿ, ಬೆಂಗಳೂರಿಗೆ ಬಂದು, ಮತ್ತೆ ಮತ್ತೊಂದು ಟ್ರಿಪ್ ಬೆಳಗ್ಗಿನ ಜಾವ ಬೆಂಗಳೂರಿನಿಂದ ಗೊರಾಂಟ್ಲಾಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೀಗಾಗಿ ಚಾಲಕನ ನಿದ್ದೆ ಮಂಪರು ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ತಾಲೂಕಿನ ಚಿತ್ರಾವತಿ ಹತ್ತಿರ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಗೆ ಕಾರು ಡಿಕ್ಕಿಯಾಗಿ ಚಾಲಕ ಸೇರಿದಂತೆ 13 ಜನ ಸಾವನ್ನಪ್ಪಿದ್ದರು. ದೊಡ್ಡಬಳ್ಳಾಪುರ ನಗರದ ಅರುಣಾ, ನವೀನ್ ಕುಮಾರ್ (32), ಕಾವಲಬೈರಸಂದ್ರದ ನರಸಿಂಹ ಮೂರ್ತಿ ಹಾಗೂ ಇವರ ತಂದೆ ಕೃಷ್ಣಪ್ಪ (37), ಕಲಿಗೆರೆ ಗ್ರಾಮದ ನರಸಿಂಹಪ್ಪ (40), ದೊಡ್ಡಬಳ್ಳಾಪುರ ನಗರದ ಹೃತ್ವಿಕ್ (6), ಈತನ ತಾಯಿ ಅರುಣ, ತಂದೆ ನವೀನ್ ಕುಮಾರ್, ಪೆರಿಮಿಳಿ ಪವನ್ ಕುಮಾರ್ (32), ತಂದೆ ಪೆರಿಮಿಳಿ ನಾಗಭೂಷಣ್, ಬೆಂಗಳೂರಿನ ಸುಬ್ಬಮ್ಮ, ಪತಿ ವೆಂಕಟನಾರಾಯಣ, ಬೆಂಗಳೂರಿನ ಶಾಂತಮ್ಮ, ಪತಿ ಶಂಕರಪ್ಪ (37), ಬೆಂಗಳೂರಿನ ರಾಜವರ್ಧನ್ ಮೃತ ಶಾಂತಮ್ಮ ಪುತ್ರ (15), ಶಂಕರಪ್ಪ, ಆಂಧ್ರಪ್ರದೇಶದ ಮರಕೋರಪಲ್ಲಿಯ ನಾರಾಯಣಪ್ಪ (50), ಬೆಲ್ಲಾಲ ವೆಂಕಟಾದ್ರಿ(32), ಪತ್ನಿ ಬೆಲ್ಲಾಲ ಲಕ್ಷ್ಮಿ, ಆಂಧ್ರಪ್ರದೇಶದ ಗಣೇಶ್ (17), ತಂದೆ ಮುನಿಕೃಷ್ಣ ಸಾವನ್ನಪ್ಪಿದವರು ಎನ್ನಲಾಗಿದೆ.
13 ಜನರ ಸಾವಿಗೆ ಚಾಲಕನೇ ಕಾರಣ ಎನ್ನಲಾಗುತ್ತಿದ್ದು, ಗೋರೆಂಟ್ಲಾದಿಂದ ಬೆಂಗಳೂರಿಗೆ ಪ್ಯಾಸೆಂಜರ್ಸ್ ಪಿಕ್ ಅಪ್ ಮಾಡುವ ಚಾಲಕ ನರಸಿಂಹಪ್ಪ, ಕಳೆದ ರಾತ್ರಿ ಪ್ರಯಾಣಿಕರನ್ನು ತುಂಬಿಕೊಂಡು ಬೆಂಗಳೂರಿಗೆ ಬಂದು ಹೋಗಿದ್ದ. ಬೆಳಗ್ಗೆ ಹಾಗೆಯೇ ಮರಳಿ ಪ್ರಯಾಣಿಕರನ್ನು ತುಂಬಿಕೊಂಡು ಬೆಂಗಳೂರಿಗೆ ಬಂದಿದ್ದ. ಹೀಗಾಗಿ ಸರಿಯಾದ ನಿದ್ದೆ ಇಲ್ಲದ್ದಕ್ಕೆ ಈ ಘಟನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.