ತಪ್ಪಾದ ಆಧಾರ್ ಸಂಖ್ಯೆ, ನಿಷ್ಕ್ರಿಯ ಬ್ಯಾಂಕ್ ಖಾತೆ, ತಪ್ಪಾದ ಆಧಾರ್ ಸಂಖ್ಯೆ ಹಾಗೂ ಇ-ಕೆವೈಸಿ ಸೇರಿದಂತೆ ಇನ್ನಿತರ ಕಾರಣಗಳಿಂದ ರಾಜ್ಯದ 15 ಲಕ್ಷಕ್ಕೂ ಅಧಿಕ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರ ಕುಟುಂಬಗಳಿಗೆ ಅನ್ಯಭಾಗ್ಯದ ಹಣ ಸಿಗುತ್ತಿಲ್ಲ.
ಪ್ರತಿಯೊಬ್ಬರಿಗೆ ಈಗಾಗಲೆ 5 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇನ್ನುಳಿದ 5 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ 170 ರೂಗಳನ್ನು ಸೋಮವಾರದಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪಡಿತರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ. ಹೀಗೆ ರಾಜ್ಯದಲ್ಲಿ ಒಟ್ಟು 1.53 ಕೋಟಿಗೂ ಅಧಿಕ ಪಡಿತರ ಚೀಟಿಗಳಿವೆ. 10 ಲಕ್ಷ ಅಂತ್ಯೋದಯ, 1.72 ಕೋಟಿಗೂ ಅಧಿಕ ಆದ್ಯತಾ (ಬಿಪಿಎಲ್) ಪಡಿತರ, 2.48 ಕೋಟಿ ಎಪಿಎಲ್ ಪಡಿತರ ಚೀಟಿಗಳಿವೆ. ಅರ್ಹ 1.37 ಕೋಟಿ ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಜೋಡಣೆಯಾಗಿದ್ದು, ಇವು ಅನ್ನಭಾಗ್ಯದ ಹಣ ಪಡೆಯುತ್ತಿವೆ.
ಅಕ್ಕಿಯ ಹಣ ಸಂದಾಯ ಮಾಡಲು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಅರ್ಜಿ ಕರೆದಿಲ್ಲ. ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ ಇ-ಕೆವೈಸಿ ಪೂರ್ಣಗೊಳಿಸಿದವರ ಮಾಹಿತಿ ಪಡೆದಿದ್ದು, ಆ ದಾಖಲೆಗಳ ಮೂಲಕವೇ ಹಣ ಸಂದಾಯ ಮಾಡುತ್ತಿದೆ. ಆದರೆ ಅರ್ಹರು ಮಾಸಾಂತ್ಯದೊಳಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಸಬೇಕು. ಜೂನ್ ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದವರು ಮಾತ್ರವೇ ಜುಲೈನಲ್ಲಿ ಹಣ ಪಡೆಯಲು ಅರ್ಹರು ಎಂದು ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.