ಗ್ಯಾಸ್ ಕಟರ್ (Gas Cutter) ನಿಂದ ಎಟಿಎಂನಲ್ಲಿದ್ದ (ATM) ಲಕ್ಷಾಂತರ ರೂ. ಹಣವನ್ನು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್ನ ಕೆನರಾ ಬ್ಯಾಂಕ್ ಎಟಿಎಂನ ಮಿಷನ್ ಅನ್ನು ಗ್ಯಾಸ್ ಕಟರ್ನಿಂದ ಕೊರೆದ ಖದೀಮರು, ಹಣ ದೋಚಿ ಪರಾರಿಯಾಗಿದ್ದಾರೆ. ಸುಮಾರು 15 ಲಕ್ಷ ರೂ. ಹಣ ಎಗರಿಸಿರುವ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿ ನೀಡಿದ್ದು, ಸ್ಥಳಕ್ಕೆ ಕೆಜಿಎಫ್ ಡಿವೈಎಸ್ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳಿಗೆ ಕಟ್ಟಡದಲ್ಲಿ ಸಿಸಿಟಿವಿ ಇಲ್ಲದ್ದನ್ನು ಕಂಡು ಮಾಲೀಕರಿಗೆ ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿ ನೋಟಿಸ್ ನೀಡುವಂತೆ ಬಂಗಾರಪೇಟೆ ಪೊಲೀಸರಿಗೆ ಡಿವೈಎಸ್ಪಿ ರಮೇಶ್ ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಇದೇ ಜಾಗದಲ್ಲಿ ಹಣ ಡ್ರಾ ಮಾಡಿಕೊಂಡು ಹೊರಗೆ ಬರುತ್ತಿದ್ದ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ 5 ಸಾವಿರ ರೂ. ದೋಚಿದ್ದ ಘಟನೆ ಕೂಡ ವರದಿಯಾಗಿತ್ತು. ಈಗ ಎಟಿಎಂ ಕಳ್ಳತನವಾಗಿರುವ ಕುರಿತು ವರದಿಯಾಗಿದೆ.