ಮಂಡ್ಯ: ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಿಸಲಾಗಿದ್ದು, ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸದ್ಯ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 99 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.
ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಬೆನ್ನಲ್ಲಿಯೇ ಪೊಲೀಸರು ಅಲರ್ಟ್ ಆಗಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕಲು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. 99 ಲಕ್ಷ ರೂ. ಹಣವನ್ನು ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ಪೋಸ್ಟ್ ಹತ್ತಿರ ವಶಕ್ಕೆ ಪಡೆಯಲಾಗಿದೆ.
ಕೆ.ಆರ್.ಪೇಟೆ ಮೂಲದ ಅಡಕೆ ವ್ಯಾಪಾರಿಗೆ ಸೇರಿದ ಹಣವಾಗಿದ್ದು, ಬೆಂಗಳೂರಿನಿಂದ ಮಂಡ್ಯದತ್ತ ತೆರಳುತ್ತಿದ್ದ ಕಾರಿನಲ್ಲಿ 99 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದಾಯ ತೆರಿಗೆ ಇಲಾಖೆಗೆ ಕೇಸ್ ವರ್ಗಾಯಿಸಲಿದ್ದಾರೆ.