ಪ್ರಧಾನಿ ಭೇಟಿ ಹಿನ್ನೆಲೆ- ಸ್ಥಳ ಪರಿಶೀಲನೆ ನಡೆಸಿದ ವಸತಿ ಸಚಿವ ವಿ.ಸೋಮಣ್ಣ Narendra modi saaksha tv
ಬೆಂಗಳೂರು: ಗೋವಿಂದರಾಜನಗರದ ನಾಗರಭಾವಿಯಲ್ಲಿರುವ ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸಲಾಗಿರುವ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ನೂತನ ಕ್ಯಾಂಪಸ್ ಉದ್ಘಾಟನೆಗೆ ಇದೇ ಡಿಸೆಂಬರ್ 6ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
ಈ ಕುರಿತಂತೆ ವಸತಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ವಿ ಸೋಮಣ್ಣ ಅವರು ಸ್ಥಳ ಪರಿಶೀಲನೆ ನಡೆಸಿದರು.
ಪ್ರಧಾನಿ ಭೇಟಿಗೆ ಹಿನ್ನೆಲೆಯಲ್ಲಿ ಸೂಕ್ತ ತಯಾರಿಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, ಈ ಕೂಡಲೇ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಸೂಚಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸುಮಾರು 43 ಎಕರೆ ಪ್ರದೇಶದಲ್ಲಿ ಹರಡಿರುವ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಹೆಸರಿನ ಈ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ ಸೌಲಭ್ಯಗಳು ಲಭ್ಯವಿವೆ.
ಹವಾನಿಯಂತ್ರಿತ ಸ್ಮಾರ್ಟ್ ತರಗತಿಗಳು, ಹೊರಾಂಗಣ ಹಾಗೂ ಒಳಾಂಗಣ ಸಭಾಂಗಣ, ಕಲಿಕಾ ಸಂಪನ್ಮೂಲ ಕೇಂದ್ರ ಇಲ್ಲಿ ಲಭ್ಯವಿವೆ.
ಶಿಕ್ಷಣ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಮುನಿರತ್ನ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಬಿಬಿಎಂಪಿ ಪಶ್ಚಿಮ ವಿಭಾಗದ ಆಯುಕ್ತ ದೀಪಕ್ ಅವರು ಸೇರಿ ಹಲವರು ಉಪಸ್ಥಿತರಿದ್ದರು.