Bangalore | ಮಳೆ ಅವಾಂತರ | ಬೆಂಗಳೂರಲ್ಲಿ ಮಹಿಳೆ ಸಾವು
ಬೆಂಗಳೂರು : ಕಳೆದೆರಡು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಅಬ್ಬರಿಸುತ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಠಿ ಮಾಡುತ್ತಿದ್ದಾನೆ.
ರಾತ್ರಿ ಹೊತ್ತು ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ.
ಈ ನಡುವೆ ನಿನ್ನೆ ರಾತ್ರಿ ಸುರಿದ ಮಳೆ ಮಹಿಳೆಯೊಬ್ಬರನ್ನು ಬಲಿ ಪಡೆದುಕೊಂಡಿದೆ.
ಶುಕ್ರವಾರ ತಡ ರಾತ್ರಿ ಮಹದೇವಪುರ ವಲಯದಲ್ಲಿ 90 ರಿಂದ 180 ಮಿಲಿಮೀಟರ್ವರೆಗೆ ಮಳೆಯಾಗಿದೆ.
ಈ ವೇಳೆ 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಇತ್ತ ಭಾರಿ ಮಳೆಗೆ ಕಾವೇರಿ ನಗರದಲ್ಲಿ ಗೋಡೆ ಕುಸಿದು ಮುನಿಯಮ್ಮ(55) ಎಂಬವರು ಸಾವನ್ನಪ್ಪಿದ್ದಾರೆ.
ಇದೇ ವೇಳೆ ಮನೆಯಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಮಹದೇವಪುರ ವಲಯ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಚಲಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.