Politics – ಬಿಗಡಾಯಿಸಿದ ವ್ಯವಸ್ಥೆ ಯುವ ನಿಷ್ಟವಂತರಿಗೆ ರಾಜಕೀಯ ಪ್ರವೇಶಕ್ಕೆ ಪ್ರಸಕ್ತ ಕಾಲ
ಭಾರತವು ಅಳವಡಿಸಿಕೊಂಡಿರೋ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿಂದ ಬೇಕಾದರು ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.ತೀರಾ ಸಹಜವಾದ ಅರ್ಹತೆಯನ್ನ ಭಾರತೀಯ ಚುನಾವಣಾ ಆಯೋಗವು ಪಾಲಿಸುತ್ತದೆ.ಇಂತಹ ಸರಳಿಕೃತ ಮತ್ತು ಹೆಚ್ಚು ಲಿಬರಲ್ ಆಗಿರುವ ನೀತಿಗಳನ್ನ ಬಳಸಿಕೊಂಡು ಪ್ರಭಾವಿಗಳು, ಉದ್ಯಮಿಗಳು, ಭೂಮಾಲಿಕರು ಸೇರಿದಂತೆ ಬರಿ ಉಳ್ಳವರ ಪಾಲಾಗಿರುವ ಭಾರತದ ವ್ಯವಸ್ಥೆಯು ಭ್ರಷ್ಟಚಾರ, ಮೋಸ, ಅನೈತಿಕ ಮೈತ್ರಿಗಳಿಂದ ಕೂಡಿದೆ.ಅತ್ಯಂತ ಸಂಕೀರ್ಣ ಮತ್ತು ಸಮಸ್ಯೆಯಾತ್ಮವಾಗಿರೋ ಭಾರತದ ರಾಜಕೀಯ ಅಂದಾಕ್ಷಣ ನಮ್ಮ ಮನದಲ್ಲಿ ಒಂದು ಸಂಚಲನ ಮೂಡುವುದು ಸಹಜ ಜೊತೆಗೆ ಅದೆ ಕ್ಷಣಕ್ಕೆ ಗೊಂದಲವು ಮೂಡುತ್ತದೆ.ಹಾಗೆ ಯಾಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಯುವಕರು ರಾಜಕೀಯ ಪ್ರವೇಶ ಮಾಡಬೇಕೋ.? ಬೇಡವೋ.? ಎನ್ನುವ ಎರಡು ರೀತಿಯ ಆಯ್ಕೆಗಳು ಕಣ್ಣ ಮುಂದೆ ಹಾದು ಹೋಗುವುದು ಖಂಡಿತ.
ಕಾರಣ ಭಾರತದ ರಾಜಕಾರಣವನ್ನ ಒಂದೇ ದೃಷ್ಟಿಯಿಂದ ಜಡ್ಜ್ ಮಾಡವುದು ತುಂಬಾ ಕಠಿಣವಾದ ಕೆಲಸ ಕಾರಣ ತುಂಬಾ ಸಂಕೀರ್ಣತೆಯಿಂದ ಇಲ್ಲಿನ ಸಾಮಾಜಿಕ ವ್ಯವಸ್ಥೆಯು ಕೂಡಿದೆ. ಜಗತ್ತಿನ ಇತರೇ ಹಲವಾರು ದೇಶಗಳ ರಾಜಕಾರಣ ಮತ್ತು ಅಲ್ಲಿನ ವ್ಯವಸ್ಥೆಗಳು ಒಂದೆಡೆಯಾದರೆ, ಭಾರತದ ರಾಜಕಾರಣವೇ ಬೇರೆ ದಿಕ್ಕು-ದಿಸೆ, ರೂಪರೇಶಗಳನ್ನು ಹೊಂದಿದ್ದು ಅದು ಇಲ್ಲಿನ ಬಹುತ್ವದ ಕಾರಣಕ್ಕಾಗಿ ಹಾಗಿದೆ ಎನ್ನುವುದು ಸತ್ಯ. ಭಾರತ ಸ್ವತಂತ್ರವಾದಾಗಿಂದ ಹಲವಾರು ರೀತಿಯ ಮನಸ್ಥಿತಿಯುಳ್ಳ ರಾಜಕಾರಣಿಗಳನ್ನ ನೋಡಿರುವ ನಮಗೆ ಪ್ರಮುಖವಾಗಿ ಎರಡು ರೀತಿಯ ರಾಜಕಾರಣಿಗಳು ಸಾಮಾನ್ಯವಾಗಿ ಕಂಡು ಬರುತ್ತಾರೆ.ಒಂದು ಪ್ರಮಾಣಿಕತೆ ಮತ್ತು ದಕ್ಷ ಆಡಳಿತದಿಂದ ರಾಜಕೀಯ ಮಾಡುವವರಿದ್ದಾರೆ ಇವರು ಜನಗಳಿಗೆ ಏನಾದಾರು ಮಾಡುವ ತುಡಿತ ಹೊಂದಿರುತ್ತಾರೆ, ಇನ್ನೊಂದು ರೀತಿಯವರು ಎಂದರೆ ಅತಿ ಭ್ರಷ್ಟರು, ಒಡೆದಾಳುವರು ಇದ್ದಾರೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ರೌಡಿಗಳು, ಗೂಂಡಾಗಳು ಕೂಡ ರಾಜಕೀಯಕ್ಕೆ ಲಗ್ಗೆ ಇಟ್ಟಿರುವುದು ನಮ್ಮ ಕಣ್ಣ ಮುಂದಿದೆ ಇವರಿಗೆ ಪ್ರಜ್ಞಾವಂತರೇ ಬೆಂಬಲವಾಗಿ ನಿಂತಿರೋದು ದುರಂತ.

ಪ್ರಮಾಣಿಕರೆಲ್ಲ ಮೂಲೆಗುಂಪಾಗಿ ಅಪ್ರಾಮಾಣಿಕರೇ ತುಂಬಿ ತುಳುಕುತ್ತಿರುವ ಇಂತಹ ರಾಜಕಾರಣಕ್ಕೆ ಇಂದಿನ ಯುವ ಸಮೂಹ ಬರಲು ಹಿಂದೇಟು ಹಾಕುತ್ತಿರುವುದಕ್ಕೆ ಜಾತಿ ವ್ಯವಸ್ಥೆ, ಹಣದ ಕೊರತೆ, ರಾಜಕೀಯ ಜ್ಞಾನದ ಕೊರತೆ, ಎದುರಾಳಿಯ ಪ್ರಭಾವ ಸೇರಿದಂತೆ ಹಲವಾರು ಕಾರಣಗಳಿವೆ. ಆದರೆ ದೇಶದ ಕೆಟ್ಟ ಪರಿಸ್ಥಿತಿ ಮತ್ತು ಅಭಿವೃದ್ಧಿ ಬಗ್ಗೆ ಪ್ರಮಾಣಿಕವಾಗಿ ಕನಸು ಕಾಣುವ ಮತ್ತು ಅವುಗಳನ್ನು ಕಾರ್ಯಗತಗೊಳಿಸುವ ಯುವಪಡೆಯ ರಾಜಕೀಯ ಪ್ರವೇಶಕ್ಕೆ ತುಂಬಾ ಸೂಕ್ತವಾದ ಕಾಲವಿದು. ಯಾಕೆಂದರೆ ಭಾರತ ರಾಷ್ಟ್ರ ನಿರ್ಮಾಣದಲ್ಲಿ ರಾಜಕೀಯ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ ನಮ್ಮ ನಗರದಲ್ಲಿ ಒಂದು ಸಣ್ಣ ಗ್ರಂಥಾಲಯದಿಂದ ಹಿಡಿದು ದೊಡ್ಡ ದೊಡ್ಡ ಕಾಮಗಾರಿಗಳಿಗೆ ಅಲ್ಲಿನ ಸ್ಥಳೀಯ ರಾಜಕೀಯ ನಾಯಕರ ಪಾತ್ರ, ಪ್ರಭಾವ & ಸತತ ಪ್ರಯತ್ನ ಬಹಳ ಅತ್ಯವಶ್ಯಕವಾಗಿರುತ್ತದೆ. ಒಂದು ಸಣ್ಣ ಹುಲ್ಲುಕಡ್ಡಿಯು ಅಲ್ಲಾಡೋದಕ್ಕೆ ರಾಜಕೀಯ ಕಮಾಂಡ್ ಬೇಕಾಗಿರುತ್ತದೆ. ಆದ್ದರಿಂದ ವ್ಯವಸ್ಥೆಯ ಬದಲಾವಣೆಯಲ್ಲಿ ರಾಜಕೀಯದ ಅನಿವಾರ್ಯ ಮತ್ತು ಮಹತ್ವವನ್ನು ನಮ್ಮ ಯುವಕರು ಅರಿತು ರಾಜಕೀಯ ರಂಗಕ್ಕೆ ಭಯಭೀತರಾಗದೆ ಪ್ರವೇಶ ಮಾಡುವ ಮೂಲಕ ಭಾರತದ ಸಮಗ್ರ ಏಳಿಗೆಗಾಗಿ ಕಂಕಣ ತೊಡಬೇಕು.

ಭಾರತದ ಭಾಗ್ಯವಿಧಾತ ಡಾ.ಬಿ.ಆರ್ ಅಂಬೇಡ್ಕರ್ ವರು ನೀಡಿದ ಸಂವಿಧಾನ ಭಾರತದ ಪ್ರತಿಪ್ರಜೆಗಳಿಗೂ ಹಣವಂತರು ಸ್ಥಿತಿವಂತರು ಅಲ್ಲದ ಸಾಮನ್ಯ ವ್ಯಕ್ತಿಯು ಕೂಡ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುವ ಅವಕಾಶ ನೀಡಿದೆ. ಆದ ಕಾರಣ ಯುವಕರು ರಾಜಕೀಯ ಪ್ರವೇಶಿಸಿ ಗಾಂಧಿ-ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣ ಮಾಡುವಲ್ಲಿ ಆಸಕ್ತಿ ವಹಿಸಬೇಕು. ವಿವಿಧತೆಯಲ್ಲಿ ಏಕತೆಯನ್ನ ಕಂಡುಕೊಂಡ ಭಾರತವೂ ಸಂವಿಧಾನದಲ್ಲು ಕೂಡ ಹಲವಾರು ವಿಶೇಷವಾದ ಕಾನೂನುಗಳಿಂದ ಇತರೆ ದೇಶಗಳಿಗಿಂತ ಭಿನ್ನವಾಗಿದೆ.ಇಂತಹ ಪ್ರಜಾಪ್ರಭುತ್ವದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನ ಅಳವಡಿಸಿಕೊಂಡ ಭಾರತದಲ್ಲಿ ಯುವಕರ ಸಂಖ್ಯೆ ಇಡಿ ಏಷ್ಯಾ ಖಂಡಲ್ಲಿಯೇ ಹೆಚ್ಚಾಗಿದೆ. ಭಾರತೀಯ ರಾಜಕಾರಣವೂ ಮುಕ್ತ ಮತದಾನದ ಮೂಲಕ ತನ್ನನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡುವ ವಿಧಾನವನ್ನ ಅಳವಡಿಸಿಕೊಂಡಿದೆ. ಇಂತಹ ದೇಶದಲ್ಲಿ ಇವತ್ತು ಪರಿಸ್ಥಿತಿ ಹಲವಾರು ರೀತಿಯಲ್ಲಿ ಹದಗೆಟ್ಟು ಹೋಗಿದ್ದು ನಿಂತ ನೀರಾಗಿ ಕೆಟ್ಟು ವಾಸನೆ ಹೊಡೆಯುತ್ತಿದೆ. ಶಾಸಕಾಂಗ, ಕಾರ್ಯಾಂಗ, ಭ್ರಷ್ಟರಿಂದ ತುಂಬಿ ತುಳುಕುತ್ತಿದೆ. ಭಾರತೀಯ ರಾಜಕಾರಣಕ್ಕೆ ಪ್ರಮಾಣಿಕ ಯುವಜನತೆ ಬಂದು ಹೊಸ ಸುಧಾರಣಾ ನೀತಿ ಮಾರ್ಗ ಕಂಡುಕೊಂಡರೆ ಉಳಿದ ಮೂರರಲ್ಲಿ ಭ್ರಷ್ಟತೆಯನ್ನ ನಿಯಂತ್ರಣ ಮಾಡಬಹುದು.
ಶೈಲಜಾ.ಸಿ
ಪತ್ರಿಕೋದ್ಯಮ ವಿಧ್ಯಾರ್ಥಿನಿ
ಬೆಂಗಳೂರು ವಿಶ್ವವಿದ್ಯಾಲಯ








