KRS ಕೆಆರ್ ಎಸ್ ನಲ್ಲಿ ಈಜಲು ಹೋದ ಯುವಕರು ನೀರುಪಾಲು
ಮಂಡ್ಯ: ನದಿಯಲ್ಲಿ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನ ನಾರ್ಥ್ ಬ್ಯಾಂಕ್ ಬಳಿಯ ವಿಸಿ ನಾಲೆಯಲ್ಲಿ ಜರುಗಿದೆ.
ಹುಣಸೂರು ತಾಲೂಕಿನ ಮಲ್ಲಿನಾಥಪುರ ಗ್ರಾಮದ 26 ವರ್ಷದ ಬಸವೇಗೌಡ, 34 ವರ್ಷದ ಜವರೇಗೌಡ ಮೃತ ದುರ್ದೈವಿಗಳಾಗಿದ್ದಾರೆ.
ಇವರು ಕೆಆರ್ಎಸ್ ಬಳಿ ಇರುವ ಕಾಳಮ್ಮನ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿದ್ದರು. ಈ ವೇಳೆ ಇಬ್ಬರು ಯುವಕರು ಪಕ್ಕದಲ್ಲಿ ಹರಿಯುತ್ತಿದ್ದ ವಿಸಿ ನಾಲೆಯಲ್ಲಿ ಈಜಲು ಹೋಗಿದ್ದಾರೆ.
ಈ ವೇಳೆ ವಿಸಿ ನಾಲೆಯಲ್ಲಿ 2500 ಕ್ಯೂಸೆಕ್ ನೀರು ಬಿಟ್ಟಿದ್ದ ಪರಿಣಾಮ ಬಸವೇಗೌಡ ಹಾಗೂ ಜವರೇಗೌಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಸದ್ಯ ಓರ್ವ ಯುವಕನ ಶವ ಪತ್ತೆಯಾಗಿದ್ದು, ಇನ್ನೋರ್ವ ಯುವಕನ ಶವವನ್ನು ಶೋಧ ಮಾಡಲಾಗುತ್ತಿದೆ.