ಹೊಸದಿಲ್ಲಿ, ಜೂನ್ 4: ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಬ್ರಿಟನ್ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ ಗಡಿಪಾರು ಯಾವುದೇ ಸಮಯದಲ್ಲಿ ಆಗಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಬುಧವಾರ ತಿಳಿಸಿವೆ. ತನ್ನನ್ನು ಭಾರತಕ್ಕೆ ಗಡಿಪಾರು ಮಾಡದಂತೆ ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯನ್ನು ಬ್ರಿಟನ್ ಕೋರ್ಟ್ ತಿರಸ್ಕರಿಸಿದ್ದು, ಗಡಿಪಾರಿಗೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದೆ ಎಂದು ತಿಳಿಸಿದೆ.

ವಿಜಯ್ ಮಲ್ಯ ಅವರ ಕಾನೂನಾತ್ಮಕ ಹೋರಾಟದ ಎಲ್ಲಾ ದಾರಿಗಳು ಮುಚ್ಚಿದ್ದು, ಭಾರತಕ್ಕೆ ತನ್ನನ್ನು ಗಡಿಪಾರು ಮಾಡದಂತೆ ಮಲ್ಯ ಮಾಡಿದ್ದ ಮನವಿಯನ್ನು ಸಹ ಬ್ರಿಟನ್ ನ ಕೋರ್ಟ್ ಮೇ 14ರಂದು ತಿರಸ್ಕರಿಸಿದೆ. ಇಷ್ಟರಲ್ಲೇ ಅವರ ಗಡಿಪಾರು ಆಗಲಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಮಾಡಿದೆ. ವಿಜಯ್ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಮೇ 14ರಂದು ತಿರಸ್ಕೃತ ಗೊಂಡ ಸಮಯದಲ್ಲಿ ಮುಂದಿನ 28 ದಿನಗಳೊಳಗೆ ಗಡಿಪಾರು ನಡೆಯಲಿದೆ ಎಂದು ಹೇಳಲಾಗಿದ್ದು, ಈಗಾಗಲೇ 20 ದಿನಗಳು ಕಳೆದಿದೆ. ಹಾಗಾಗಿ ಇಷ್ಟರಲ್ಲೇ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರುವುದನ್ನು ನಿರೀಕ್ಷಿಸಲಾಗುತ್ತಿದೆ. ಗಡಿಪಾರಿನ ಕುರಿತಾಗಿ ಯಾವುದೇ ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲವಾದರೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತಂಡ ಈ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಮಲ್ಯರನ್ನು ವಶಕ್ಕೆ ತೆಗೆದುಕೊಳ್ಳಲು ಸಿಬಿಐ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ