Bengaluru : ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ ಪ್ರಶಸ್ತಿಗೆ ಸುರೇಶ ಪಾಟೀಲ್ , ಎಲ್.ವಿ. ಶಾಂತಕುಮಾರಿ ಆಯ್ಕೆ..!!
ಬೆಂಗಳೂರು- ಸಾಹಿತ್ಯ ಕ್ಷೇತ್ರದಲ್ಲಿ ಅಗಣಿತ ಸಾಧನೆ ಗೈದು ತೆರೆಯ ಮರೆಯಲ್ಲಿ ಉಳಿದ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡಲಾಗುವ 2021 ಹಾಗೂ 2022 ನೇ ಸಾಲಿನ ʻಶ್ರೀ ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ ಪ್ರಶಸ್ತಿಗೆ ಡಾ. ಸುರೇಶ ಪಾಟೀಲ್ ಹಾಗೂ ಪ್ರೊ|| ಎಲ್.ವಿ. ಶಾಂತಕುಮಾರಿ ಅವರು ಆಯ್ಕೆಯಾಗಿದ್ದಾರೆ.
ಡಾ. ವರದಾ ಶ್ರೀನಿವಾಸ ಅವರು ದಿ. ಟಿ. ಶ್ರೀನಿವಾಸ ಸ್ಮರಣಾರ್ಥ
ಪಿ.ಕೆ. ನಾರಾಯಣ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಇಡಲಾಗಿದ್ದು ಒಂದು ವರ್ಷ ಪುರುಷ ಸಾಹಿತಿಗೆ ಮತ್ತೊಂದು ವರ್ಷ ಮಹಿಳಾ ಸಾಹಿತಿಗೆ ಈ ಪ್ರಶಸ್ತಿ ನೀಡಬೇಕು ಹಾಗೂ ಈ ಪ್ರಶಸ್ತಿಯನ್ನು ಪ್ರಸಿದ್ಧ ಸಾಹಿತಿಗಳಾಗಿದ್ದೂ ಇದುವರೆಗೆ ಯಾವುದೇ ಪ್ರಶಸ್ತಿ ಭಾಜನರಾಗದೆ ಎಲೆಮರೆ ಕಾಯಿಯಂತಿರುವ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಕನಿಷ್ಠ ಐದು ಕೃತಿಗಳನ್ನಾದರೂ ಬರೆದಿರಬೇಕು ಎನ್ನುವುದು ದತ್ತಿಯ ಮೂಲ ಆಶಯವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ೨೦೨೧ನೇ ಸಾಲಿನ ಪ್ರಸ್ತುತ ಪ್ರಶಸ್ತಿಗೆ ಡಾ. ಸುರೇಶ ಪಾಟೀಲ್ ಹಾಗೂ ೨೦೨೨ನೇ ಸಾಲಿನ ಪ್ರಶಸ್ತಿಗೆ ಪ್ರೊ|| ಎಲ್.ವಿ. ಶಾಂತಕುಮಾರಿ ಅವರನ್ನು ಆಯ್ಕೆಮಾಡಲಾಗಿದೆ.
ಡಿಸೆಂಬರ್ ೧೭ ರಂದು ಸಂಜೆ ೪.೦೦ ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಇರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಮಾಡಲಾಗುವುದು. ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ ಪ್ರಶಸ್ತಿ ಮೊತ್ತ ನಗದು ರೂ.೧೦,೦೦೦/- ಜೊತೆಯಲ್ಲಿ ಪ್ರಶಸ್ತಿ, ಫಲಕ, ಶಾಲು, ತಾಂಬೂಲಗಳನ್ನು ನೀಡಿ ಸನ್ಮಾನಿಸಲಾಗುವದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ. ನೇ.ಭ.ರಾಮಲಿಂಗ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.