ಈಕೆಯ ಸಾಧನೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದು ಅಪ್ಪ ಎಂಬ ಸಾಹುಕಾರ. ಪ್ರತಿದಿನ ಮಗಳ ತರಬೇತಿಗೆ ಒಂಚೂರು ತೊಂದರೆಯಾಗದಂತೆ ನೋಡಿಕೊಂಡಿದ್ದ ಕಾವಲುಗಾರ. ಯಾರು ಏನೇ ಅಂದ್ರೂ, ಮಗಳ ಪ್ರತಿಭೆ, ಸಾಮಥ್ರ್ಯವನ್ನು ನಂಬಿ ಕೈ ಹಿಡಿದು ಮುನ್ನಡೆಸಿದ್ದ ಸೂತ್ರಧಾರ. ಮಗಳ ಕ್ರೀಡಾಬದುಕಿನ ಪ್ರತಿ ಹೆಜ್ಜೆಯಲ್ಲೂ ದಾರಿ ತೋರಿಸಿದ್ದ ಸಲಹೆಗಾರ. ಹಗಲು ರಾತ್ರಿ ದುಡಿದು ಮಗಳ ಏಳಿಗೆಯನ್ನೇ ಬಯಸಿದ್ದ ಒಬ್ಬ ಕೂಲಿಗಾರ. ಆದ್ರೆ ಸಾಧನೆಯ ಉತ್ತುಂಗದಲ್ಲಿದ್ದಾಗಲೇ ಸಿಂಧೂ ಬಾಳಿನಿಂದ ದೂರವಾದ ಆ ಚೌಕಿದಾರ..! ಹೌದು, ರಾಜ್ಯ ಕ್ರೀಡಾ ಅವ್ಯವಸ್ಥೆಯ ನಡುವೆಯೂ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಹಳ್ಳಿ ಹುಡುಗಿ..! ಇದೀಗ ಧೂಳು ತುಂಬಿರುವ ಕ್ರೀಡಾ ಅವ್ಯವಸ್ಥೆಯ ಕಡತವನ್ನು ಓಪನ್ ಮಾಡಿದಾಗ ಮತ್ತೊಮ್ಮೆ ನೆನಪು ಮಾಡಿಸಿದ್ದು ಮಲೆನಾಡಿನ ಈ ತರುಣಿ..!
ನಮ್ಮ ರಾಜ್ಯದ ಕ್ರೀಡಾಪಟುಗಳ ಕಥೆ-ವ್ಯಥೆಯೊಂದನ್ನು ಬರೆದಿರುವೆ.. ಓದುವೀರಾ..!
ಇದು ನಮ್ಮ ರಾಜ್ಯದ ದುರಂತ..! ನಮ್ಮ ಕ್ರೀಡಾಪಟುಗಳ ಪ್ರತಿಭೆ, ಸಾಮಥ್ರ್ಯ, ಸಾಧನೆ ಗೊತ್ತಾಗೋದು ಯಶಸ್ಸಿನ ಉತ್ತುಂಗಕ್ಕೇರಿದಾಗ ಮಾತ್ರ. ಅಲ್ಲಿಯ ತನಕ ನಮ್ಮ ಕ್ರೀಡಾ ವ್ಯವಸ್ಥೆ ಗಾಢ ನಿದ್ರೆಯಲ್ಲಿರುತ್ತದೆ. ಆದ್ರೆ ಒಂದು ಅಪ್ರತಿಮ ಯಶಸ್ಸಿನ ಸದ್ದು ಕೇಳಿದ ತಕ್ಷಣ ಎಚ್ಚರವಾಗುತ್ತದೆ. ಆಗ ಕೇಳಬೇಕು.. ಆ ಬಣ್ಣದ ಮಾತುಗಳನ್ನು. ಒಂದು ಕ್ಷಣ ಆ ದೇವರೇ ಪ್ರತ್ಯಕ್ಷರಾಗಿ ವರ ನೀಡಿದ ಅನುಭೂತಿ..!
ಇದು ನಮ್ಮ ರಾಜ್ಯದ ಕ್ರೀಡಾಪಟುಗಳ ಕಥೆ -ವ್ಯಥೆ..! ಈ ಕಥೆಯ ಮುನ್ನುಡಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕ್ರೀಡಾ ಯೋಜನೆಯ ಘೋಷಣೆಗಳ ಪುಸ್ತಕಗಳಲ್ಲಿ ಪದಪುಂಜಗಳ ಅಕ್ಷರ ಮಾಲೆಗಳಿವೆ. ಆದ್ರೆ ಕ್ರೀಡಾಪಟುಗಳ ಬೆವರಿನ ಹನಿಯ ಒಂದೊಂದು ಅಧ್ಯಾಯಗಳಲ್ಲಿ ಅಳಿಸಿ ಹೋಗದ ಕಣ್ಣೀರಿನ ಪುಟಗಳಿವೆ. ಅದು ಎಷ್ಟು ಬರೆದ್ರೂ ಮುಗಿಯದ ಅವ್ಯವಸ್ಥೆಯ “ಮಹಾ” ಪುರಾಣ.
ರಾಜ್ಯ ಕ್ರೀಡಾ ರಂಗದಲ್ಲಿ ಆಗುತ್ತಿರುವುದೇನು..? ನಡೆಯುತ್ತಿರುವುದೇನು..?
ಈ ಪ್ರಶ್ನೆಗಳು ಇಂದು ನಿನ್ನೆಯದಲ್ಲ. ರಾಜ್ಯದ ಬಹುತೇಕ ಕ್ರೀಡಾಸಂಸ್ಥೆಗಳ ಚುಕ್ಕಾಣಿ ಪ್ರಭಾವಿಗಳ ಕೈಯಲ್ಲಿದೆ. ಪ್ರತಿ ದಿನ ಕಷ್ಟಪಟ್ಟು ಪದಕ ಗೆದ್ದ ಕ್ರೀಡಾಪಟುಗಳ ಸಂತಸಕ್ಕಿಂತ ಪದಾಧಿಕಾರಿಗಳ ಆಡಳಿತದ ಸಂಭ್ರಮವೇ ಹೆಚ್ಚಾಗಿರುತ್ತದೆ. ಅಂಟಿನ ಉಂಡೆಯಂತೆ ತನ್ನ ಪ್ರತಿಷ್ಠೆ, ಗೌರವಕ್ಕಾಗಿ ಕ್ರೀಡಾಸಂಸ್ಥೆಗಳನ್ನು ಅಂಟಿಕೊಂಡಿರುವ ಮಹಾನುಭಾವರು ಇರುವ ತನಕ ದೇವರಾಣೆ ನಮ್ಮ ದೇಶ, ನಮ್ಮ ರಾಜ್ಯದ ಕ್ರೀಡಾ ಸಂಸ್ಥೆಗಳು ಉದ್ದಾರ ಆಗಲ್ಲ.
ಹೌದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರತಿ ವರ್ಷ ಬಜೆಟ್ನಲ್ಲಿ ಕ್ರೀಡೆಯ ಉದ್ದಾರಕ್ಕೆ ಪ್ರತ್ಯೇಕವಾಗಿ ಕೋಟಿ ಕೋಟಿ ಹಣವನ್ನು ಮೀಸಲಿಡುತ್ತದೆ. ಹಾಗೇ ಈ ಕೋಟಿ ಹಣ ಎಷ್ಟು ವಿನಿಯೋಗ ಆಗಿದೆ ಎಂಬುದರ ಲೆಕ್ಕಾಚಾರ ಕಾಗದದ ಮೇಲೆ ಮಾತ್ರ ಇರುತ್ತದೆ. ಆದ್ರೆ, ಎಲ್ಲಿ ಕಾರ್ಯರೂಪಕ್ಕೆ ಬಂದಿದೆ ಎಂಬುದು ನಿಗೂಢ ರಹಸ್ಯ..!
ಅಂದ ಹಾಗೇ, ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದಿಂದ ಎಷ್ಟು ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳನ್ನು ತಯಾರು ಮಾಡಿದ್ದೇವೆ..? ಸರ್ಕಾರದ ಪ್ರೋತ್ಸಾಹದಿಂದಲೇ ಎಷ್ಟು ಮಂದಿ ಕ್ರೀಡಾಪಟುಗಳು ಬೆಳೆದಿದ್ದಾರೆ..? ಉಚಿತ ಹಾಸ್ಟೆಲ್, ಉಚಿತ ಊಟ -ತಿಂಡಿ, ಉಚಿತ ತರಬೇತಿ ಕೊಟ್ರೆ ಸಾಕಾಗುವುದಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ನೀಡಬೇಕು. ಇದು ನಮ್ಮ ರಾಜ್ಯದ ಕ್ರೀಡಾ ವ್ಯವಸ್ಥೆಯಲ್ಲಿ ಇದೆಯಾ..? ಆಶ್ಚರ್ಯ ಅಂದ್ರೆ ಪ್ರತಿಷ್ಠಿತ ಕ್ರೀಡಾಕೂಟಗಳಿಗೆ ಉಚಿತವಾಗಿ ನಮ್ಮ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವಂತಹ ಭಾಗ್ಯ ಇದೆ.
ಪದಕ ಗೆದ್ದ ನಂತರ ಪ್ರೋತ್ಸಾಹ ಧನ..!
ನಮ್ಮ ರಾಜ್ಯದಲ್ಲಿ ಒಂದು ಪದ್ಧತಿ ಇದೆ. ಪದಕ ಗೆದ್ದು ಬಂದ ನಂತರ ಸಿಎಂ ಎದುರು ಫೋಟೋಗೆ ಪೋಸ್ ಕೊಡುವುದು. ನಂತರ ನಗದು ಬಹುಮಾನ ಘೋಷಣೆ ಮಾಡುವುದು. ಸಿಎಂ ಸನ್ಮಾನ ಮಾಡಿದ ಫೋಟೋ ಏನೋ ಮಾಧ್ಯಮಗಳಲ್ಲಿ ಬರುತ್ತದೆ. ಆದ್ರೆ ಘೋಷಣೆ ಮಾಡಿದ ಹಣ ಪಡೆಯಲು ಹರಸಾಹಸ ಪಡಬೇಕು. ನಗದು ಬಹುಮಾನ ಪಡೆದ ಕ್ರೀಡಾಪಟು ಮೈದಾನದಲ್ಲಿ ದಿನ ನಿತ್ಯ ಬೆವರು ಸುರಿಸುತ್ತಾನೆ. ಜೊತೆಗೆ ಪ್ರತಿ ದಿನ ಇಲಾಖೆ ಹಾಗೂ ಪದಾಧಿಕಾರಿಗಳ ಹಿಂದೆ ಅಲೆದಾಡುವುದು ಕೂಡ ರೂಢಿಯಾಗಿರುತ್ತದೆ.
ಅಷ್ಟಕ್ಕೂ ಈ ಬರಹ ಕೆಲವರಿಗೆ ಕಹಿಯಾಗಬಹುದು. ಆದ್ರೆ ಇದು ವಾಸ್ತವ. ಕೆಲವು ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳ ಹೆಸರಿನಲ್ಲೇ ದೇವರ ನಾಮಸ್ಮರಣೆಗಳಿವೆ. ಮನಸ್ಸಿಗೆ ನೆಮ್ಮದಿ, ಕಷ್ಟ ಬಂದಾಗ ಧೈರ್ಯ ತುಂಬುವ ಹಾಗೂ ಕೃತಜ್ಞತೆ ಸಲ್ಲಿಸುವÀ ನಾಮಧೇಯಗಳಿವೆ. ಆದ್ರೆ ಇವರು ಕ್ರೀಡಾ ವ್ಯವಸ್ಥೆಯ ನೆಮ್ಮದಿಯನ್ನೇ ಹಾಳು ಮಾಡ್ತಾರೆ. ಕಷ್ಟದ ಸಮಯದಲ್ಲೂ ಕೈ ಹಿಡಿದು ಮುನ್ನಡೆಸುವುದು ಅಪರೂಪ. ಆದ್ರೂ ಕಾಟಚಾರಕ್ಕೆ ಕೃತಜ್ಞತೆಯೊಂದನ್ನು ಸಲ್ಲಿಸುತ್ತಾರೆ.
ನಿಜ, ಸರ್ಕಾರಗಳು, ಕ್ರೀಡಾ ಸಂಸ್ಥೆಗಳು, ತಳಮಟ್ಟದಲ್ಲಿ ಪ್ರತಿಭೆಗಳನ್ನು ಅನ್ವೇಷಣೆ ಮಾಡಬೇಕು. ಅವರಿಗೆÀ ಆರ್ಥಿಕ ಸಹಾಯ, ಆಧುನಿಕ ಸೌಲಭ್ಯಗಳೊಂದಿಗೆ ತರಬೇತಿ ನೀಡಬೇಕು. ಆದ್ರೆ ನಮ್ಮಲ್ಲಿ ಪ್ರಶಸ್ತಿ, ಪದಕ ಸಿಕ್ಕಿದ ನಂತರ ಪ್ರೋತ್ಸಾಹ, ನಗದು ಹಣ ನೀಡುವುದು ಸಂಪ್ರದಾಯವಾಗಿದೆ. ಇನ್ನೊಂದೆಡೆ, ಕ್ರಿಕೆಟ್ ಬಿಟ್ಟು ಇನ್ನುಳಿದ ಕ್ರೀಡೆಗಳಿಗೆ ಪ್ರಾಯೋಜಕರ ಹಾಗೂ ಪ್ರೋತ್ಸಾಹಕರ ಕೊರತೆ ಇದ್ದೇ ಇದೆ. ಇದಕ್ಕೆ ಕಾರಣ, ಕ್ರೀಡಾ ಸಂಸ್ಥೆಗಳ ದೂರದೃಷ್ಟಿ ಇಲ್ಲದ ಯೋಜನೆಗಳು. ಈ ಕಾರಣದಿಂದಲೇ ಕಾರ್ಪೋರೇಟ್ ಸಂಸ್ಥೆಗಳು ಮುಂದೆ ಬರುತ್ತಿಲ್ಲ. ಇನ್ನು ಕ್ರೀಡಾಕೋಟಾದಡಿ ಉದ್ಯೋಗ ಪಡೆದ ನಂತರ ಕೆಲವು ಕ್ರೀಡಾಪಟುಗಳು ವೃತ್ತಿ ಬದುಕನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವೂ ಇದೆ.
ಯಾರು ಏನೇ ಹೇಳಲಿ.. ಈ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ಇದು ಗೊತ್ತಿರುವ ವಿಚಾರವೂ ಹೌದು. ಯಾಕಂದ್ರೆ ಇದು ರಾಜ್ಯ ಕ್ರೀಡಾ ಅವ್ಯವಸ್ಥೆಯ ಹಳೆಯ ಕಡತ. ಧೂಳು ತುಂಬಿರುವ ಈ ಕಡತವನ್ನು ಓಪನ್ ಮಾಡಿದಾಗ ಕೆಮ್ಮುವವರು ನಾವೇ ಅಲ್ವಾ..? ಅವರಂತೂ ಅಲ್ಲ..!
ಆದ್ರೂ ಈ ಬಗ್ಗೆ ಮತ್ತೊಮ್ಮೆ ನೆನಪು ಮಾಡಿಸಿದ್ದು ಮಲೆನಾಡಿನ ಈ ತರುಣಿ..!
ಹೆಸರು- ಸಿಂಧೂಶ್ರೀ ಗಣೇಶ್.
2026ರ ಸೆಪ್ಟಂಬರ್ 19ರಿಂದ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ. ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಅಪ್ರತಿಮ ಸಾಧನೆ ಮಾಡಿದ್ದಾಳೆ. ತನ್ನ ಸ್ನೇಹಿತ ಉಡುಗೊರೆಯಾಗಿ ನೀಡಿದ್ದ ಪೋಲ್ ನಲ್ಲಿ 4.25 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ಬರೆದಿದ್ದಾಳೆ.
ಈಕೆ ಅಪ್ಪಟ ಗ್ರಾಮೀಣ ಪ್ರತಿಭೆ. ಕಲ್ಲು ಮುಲ್ಲಿನ ಹಾದಿಯಲ್ಲಿ ಬೆಳೆದು ಬಂದಿರುವ ಹುಡುಗಿ. ವಿಪರ್ಯಾಸ ಅಂದ್ರೆ, ಇದುವೇ ನೋಡಿ. ಕಳೆದ ಏಳೆಂಟು ವರ್ಷಗಳಿಂದ ಸಿಂಧೂ, ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಈಗಾಗಲೇ ಹಲವಾರು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲೂ ಭಾಗವಹಿಸಿ ದಾಖಲೆ ಮೇಲೆ ದಾಖಲೆ ಸೃಷ್ಟಿಸಿದ್ದಾಳೆ.
ಆದ್ರೂ ಆಕೆಯ ಬಳಿ ಒಂದು ಆತ್ಯಾಧುನಿಕ ಗುಣಮಟ್ಟದ ಪೋಲ್ ಇಲ್ಲ. ಹಳೆಯ ಪೋಲ್ ನಲ್ಲೇಯೇ ಅಭ್ಯಾಸ.. ಅದರಲ್ಲೇ ಸ್ಪರ್ಧೆ. ಇದು ಗೊತ್ತಿದ್ರೂ ಯಾರು ಕೂಡ ಈಕೆಗೆ ಸಹಾಯ ಮಾಡಲಿಲ್ಲ. ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ, ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ, ಕರ್ನಾಟಕ ಕ್ರೀಡಾಪ್ರಾಧಿಕಾರ, ಭಾರತೀಯ ಕ್ರೀಡಾಪ್ರಾಧಿಕಾರ, ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆಗೆ ಗತಿಯೇ ಇರಲಿಲ್ವಾ..? ಅಬ್ಬಾಬ್ಬಾ ಅಂದ್ರೆ ಒಂದಷ್ಟು ಸಾವಿರ, ಲಕ್ಷ ಖರ್ಚು ಆಗುತ್ತಿತ್ತು. ಆದ್ರೂ ಯಾರು ಕೊಡಿಸಿಲ್ಲ. ಕೊಡಿಸುವ ಮನಸ್ಸು ಕೂಡ ನಿನ್ನೆಯ ತನಕ ಮಾಡಿಲ್ಲ.
ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಿಗೆ ಥ್ಯಾಂಕ್ಸ್..!
ಆದ್ರೆ ಈಗ ಏಷ್ಯಾನ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಸಿಂಧೂಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮೂರು ಪೋಲ್ಗಳನ್ನು ನೀಡಿರುವುದು ದೊಡ್ಡ ಸುದ್ದಿ. ಆದ್ರೆ ಇದು ಪರಮೇಶ್ವರ್ ಅವರ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ. ಯಾಕಂದ್ರೆ ಅವರು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರು. ಇನ್ನು, ಅಥ್ಲೆಟಿಕ್ಸ್ ಸಂಸ್ಥೆಯ ಸಭೆಗೆ ಎಷ್ಟು ಬಾರಿ ಬಂದಿದ್ದಾರೆ ಅನ್ನೋದು ಗೊತ್ತಿಲ್ಲ. ಆದ್ರೆ ಸಿಂಧೂ ಶ್ರೀಯ ಆರ್ಥಿಕ ಸಮಸ್ಯೆ ಗೊತ್ತಾದ ತಕ್ಷಣವೇ ಸ್ಪಂದಿಸಿರುವುದಕ್ಕೆ ಥ್ಯಾಂಕ್ಸ್. ಆದ್ರೂ ಈ ಸ್ಪಂದನೆ ಐದಾರು ವರ್ಷಗಳ ಹಿಂದೆಯೇ ಇರುತ್ತಿದ್ರೆ, ಈ ಯುವತಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಬಹುದಿತ್ತೇನೋ..!
ಪ್ರಶ್ನೆ ಅದಲ್ಲ. ಸಿಂಧೂ ಸಾಧನೆ, ಪ್ರತಿಭೆಯ ಬಗ್ಗೆ ನಮ್ಮ ಕ್ರೀಡಾ ಅಧಿಕಾರಿಗಳು, ಸಂಸ್ಥೆಗಳ ಪದಾಧಿಕಾರಿಗಳಿಗೆ ಗೊತ್ತೇ ಇರಲಿಲ್ವಾ..? ಹಾಗಾದ್ರೆ ಕ್ರೀಡಾಪಟುಗಳಿಗೆ ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಬಜೆಟ್ಗಳಲ್ಲಿ ಮೀಸಲಿಡುವ ಅನುದಾನ ಎಲ್ಲಿ ಯಾರ ಜೇಬು ಸೇರಿಕೊಳ್ಳುತ್ತೆ.? ತಮ್ಮ ಕಣ್ಣೇದುರೇ ಹಳೆಯ ಪೋಲ್ ನಲ್ಲಿ ಸ್ಪರ್ಧೆ ಮಾಡಿ, ಪದಕ ಗೆದ್ದಿರುವುದನ್ನು ಕಣ್ಣುಮುಚ್ಚಿಕೊಂಡು ನೋಡ್ತಾ ಇದ್ರಾ..?
ಬಾಣದಂತೆ ಚಿಮ್ಮುವ ಈ ತರುಣಿ ಯಾರು..?
ಊರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ. ತಂದೆಯ ಹೆಸರು ಗಣೇಶ್. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್. ತಾಯಿಗೆ ಟೈಲರಿಂಗ್ ಕೆಲಸ. ಸಿಂಧೂ ಸದ್ಯ ಸೌತ್ ವೆಸ್ಟ್ರ್ನ್ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ಪಡೆದುಕೊಂಡಿದ್ದಾಳೆ. ಜೊತೆಗೆ ಪೋಲ್ ವಾಲ್ಟ್ ಅಭ್ಯಾಸದಲ್ಲಿ ನಿರತಳಾಗಿದ್ದಾಳೆ. ಆದ್ರೆ ಆತ್ಯಾಧುನಿಕ ಗುಣಮಟ್ಟದ ಪೋಲ್ ಪಡೆಯಲು ಕೈಗೆ ದುಡ್ಡು ಸೇರುತ್ತಿರಲಿಲ್ಲ. ಆದ್ರೂ ಹಠ, ಛಲ ಬಿಟ್ಟಿಲ್ಲ. ಕಷ್ಟದ ದಿನಗಳನ್ನು ಆತ್ಮವಿಶ್ವಾಸದಿಂದಲೇ ಮೆಟ್ಟಿ ನಿಂತಿದ್ದಾಳೆ.
ಬಡತನದಲ್ಲಿ ಅರಳಿದ ಪ್ರತಿಭೆ..ರಾಷ್ಟ್ರೀಯ ದಾಖಲೆ ಬರೆದ ಹಳ್ಳಿ ಹುಡುಗಿ..!
ಎಳವೆಯಲ್ಲೇ ವೇಗವಾಗಿ ಓಡುವುದು ಅಂದ್ರೆ ಸಿಂಧೂಗೆ ತುಂಬಾನೇ ಖುಷಿ. ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು 400 ಮೀಟರ್ ಓಟವನ್ನು. ಅಥ್ಲೆಟಿಕ್ಸ್ನಲ್ಲಿ 400 ಮೀಟರ್ ಓಟ ಅಂದ್ರೆ ಅದು ಅಲ್ಟಿಮೆಟ್ ಸ್ಪ್ರಿಂಟ್. ಶಕ್ತಿ ಮತ್ತು ಯುಕ್ತಿಯಿಂದ ಓಡಿದ್ರೆ ಮಾತ್ರ ಯಶ ಸಾಧಿಸಲು ಸಾಧ್ಯ. ಹೀಗಾಗಿ ಸ್ಥಳೀಯ ಮೈದಾನದಲ್ಲಿ ಪ್ರತಿ ದಿನ ಸಿಂಧೂ ಅಭ್ಯಾಸ ಮಾಡುತ್ತಿದ್ದಳು. ಆಗ ಆಕೆಯ ಭವಿಷ್ಯದ ಮುಂದೆ, ತಂದೆ ಗಣೇಶ್ ನೆರಳಿನಂತೆ ಹಿಂಬಾಳಿಸುತ್ತಿದ್ದರು.
ನಂತರ ಕುಟುಂಬದವರ ಹೀಯಾಳಿಕೆಯ ಮಾತಿನ ನಡುವೆಯೂ ಸಿಂಧೂ ಬೆಂಗಳೂರಿನ ಭಾರತೀಯ ಕ್ರೀಡಾಪ್ರಾಧಿಕಾರವನ್ನು ಸೇರಿಕೊಂಡಿದ್ದಳು. ಅಲ್ಲಿ ತರಬೇತುದಾರ ಎಂ.ಎಂ. ವಿಜೇಶ್, 400 ಮೀಟರ್ ಓಟದ ಬದಲು ಪೋಲ್ ವಾಲ್ಟ್ ಅಭ್ಯಾಸÀ ಮಾಡುವಂತೆ ಸಲಹೆ ಮಾರ್ಗದರ್ಶ ನೀಡಿದ್ದರು. ವೇಗವಾಗಿ ಓಡುತ್ತಿದ್ದ ಸಿಂಧೂಗೆÉ ಪೋಲ್ ವಾಲ್ಟ್ನ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವುದು ಕಷ್ಟವೇನೂ ಆಗಲಿಲ್ಲ.
2021ರಲ್ಲಿ 3.30 ಎತ್ತರ ಜಿಗಿಯುತ್ತಿದ್ದ ಸಿಂಧೂ, ಹಂತ ಹಂತವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಳು. 2024ರಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 4.25 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಳು. ಈ ಆಧಾರದ ಮೇಲೆಯೇ ಇದೀಗ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಸಾಧನೆಯ ಹಾದಿಯಲ್ಲೇ ಮಾಯವಾದ ನಂಬಿಕೆಯ ನೆರಳು..!
ಸಿಂಧೂ ಸಾಧನೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದು ಅಪ್ಪ ಎಂಬ ಸಾಹುಕಾರ. ಪ್ರತಿದಿನ ಮಗಳ ತರಬೇತಿಗೆ ಒಂಚೂರು ತೊಂದರೆಯಾಗದಂತೆ ನೋಡಿಕೊಂಡಿದ್ದ ಕಾವಲುಗಾರ. ಯಾರು ಏನೇ ಅಂದ್ರೂ, ಮಗಳ ಪ್ರತಿಭೆ, ಸಾಮಥ್ರ್ಯವನ್ನು ನಂಬಿ ಕೈ ಹಿಡಿದು ಮುನ್ನಡೆಸಿದ್ದ ಸೂತ್ರಧಾರ. ಮಗಳ ಕ್ರೀಡಾಬದುಕಿನ ಪ್ರತಿ ಹೆಜ್ಜೆಯಲ್ಲೂ ದಾರಿ ತೋರಿಸಿದ್ದ ಸಲಹೆಗಾರ. ಹಗಲು ರಾತ್ರಿ ದುಡಿದು ಮಗಳ ಏಳಿಗೆಯನ್ನೇ ಬಯಸಿದ್ದ ಒಬ್ಬ ಕೂಲಿಗಾರ. ಆದ್ರೆ ಸಾಧನೆಯ ಉತ್ತುಂಗದಲ್ಲಿದ್ದಾಗಲೇ ಸಿಂಧೂ ಬಾಳಿನಿಂದ ದೂರವಾದ ಆ ಚೌಕಿದಾರ..!
2022ರಲ್ಲಿ ಗಣೇಶ್ ಹೃದಯಾಘಾತದಿಂದ ನಿಧನರಾದ್ರು. ಈ ಆಘಾತದಿಂದ ಸಿಂಧೂ ಇನ್ನೂ ಚೇತರಿಸಿಕೊಂಡಿಲ್ಲ. ಅಪ್ಪ ಅನ್ನೋ ಬದುಕಿನ ಹೆಮ್ಮೆರವನ್ನು ಇಂದಿಗೂ ಸಿಂಧೂ ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ಆದ್ರೆ ಪ್ರತಿ ಬಾರಿ ಪದಕ ಗೆದ್ದಾಗಲೂ ಪಾಸ್ಪೋರ್ಟ್ ಸೈಜ್ನ ಫೋಟೋ ತೋರಿಸಿ ಜನ್ಮಾದಾತನನ್ನು ನೆನಪಿಸಿಕೊಳ್ಳುತ್ತಾಳೆ. ತಂದೆಯ ನಿಧನದ ನಂತರ ಕುಟುಂಬ ಸಾಗಿಸುವುದು ಆಕೆಯ ತಾಯಿಗೆ ಕಷ್ಟವಾಗಿತ್ತು. ಆಗ ತಂದೆಯ ಕನಸನ್ನು ನನಸು ಮಾಡಲು ಸಿಂಧೂಗೆ ಆರ್ಥಿಕ ಸಹಾಯ ಮಾಡಿದ್ದು ಅಜ್ಜ. ಹೀಗೆ ಕಷ್ಟದ ಹಾದಿಯಲ್ಲಿ ನಡೆದ ಬಂದ ಸಿಂಧೂ ಇವತ್ತು ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿದ್ದಾಳೆ. ಆಲ್ ದಿ ಬೆಸ್ಟ್ ಸಿಂಧೂ ಶ್ರೀ..!
ನಿಜ, ಸಿಂಧೂ ಸಾಧನೆ.. ಅದ್ಭುತವಾದ ಪ್ರೇರಣೆ. ಆದ್ರೆ ನಮ್ಮ ಕ್ರೀಡಾ ವ್ಯವಸ್ಥೆಯಲ್ಲಿ ಮಾತ್ರ ಆಗಲೇಬೇಕಿದೆ ಕಟ್ಟು ನಿಟ್ಟಿನ ಸಂಸ್ಕರಣೆ. ಯಾಕಂದ್ರೆ ನಮ್ಮ ರಾಜ್ಯದ ಕ್ರೀಡಾ ವ್ಯವಸ್ಥೆಯೇ ಅವ್ಯವಸ್ಥೆಯ ಅಗರ. ಕಳೆದ ಎರಡು ಮೂರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಪ್ರತ್ಯೇಕ ಕ್ರೀಡಾಮಂತ್ರಿಯೇ ಇಲ್ಲ. ಈಗಲೂ ಕೂಡ ಹೆಚ್ಚುವರಿ ಮಂತ್ರಿಯೇ ಇರುವುದು. ಒಮ್ಮೆ ಯೋಚಿಸಿ, ರಾಜ್ಯದ ಬಹುತೇಕ ಮಾಜಿ ಕ್ರೀಡಾಪಟುಗಳ ಹೆಸರು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತವೆ. ಆದ್ರೆ ಈಗಿನ ಕ್ರೀಡಾಪಟುಗಳ ಹೆಸರುಗಳನ್ನು ಗೂಗಲ್ನಲ್ಲಿ ಸರ್ಚ್ ಮಾಡಿದ್ರೂ ಸಿಗಲ್ಲ.
ಯಾಕಂದ್ರೆ ಅವರು ಸಾಧನೆ ಮಾಡಿದ್ರೂ, ಪದಕ ಗೆದ್ರೂ ಆ ಕ್ಷಣದ ಬ್ರೆಕಿಂಗ್ ಸುದ್ದಿಯಷ್ಟೇ. ಟಿವಿ ಮೀಡಿಯಾಗೆ ಟಿಆರ್ಪಿ ಬರಲ್ಲ. ಪತ್ರಿಕೆಯವರಿಗೆ ಜಾಗ ಇರಲ್ಲ. ಹೀಗಾಗಿ ಹೊರ ಜಗತ್ತಿಗೆ ಗೊತ್ತಾಗೋದೇ ಇಲ್ಲ. ಮತ್ತೊಂದೆಡೆ ಕ್ರೀಡಾ ಸಂಸ್ಥೆಗಳ ವೆಬ್ ಪೋರ್ಟಲ್ನಲ್ಲಿ ಕ್ರೀಡಾಪಟುಗಳ ಸಾಧನೆಗಿಂತ ಪದಾಧಿಕಾರಿಗಳ ಮಾಹಿತಿಯೇ ಹೆಚ್ಚಾಗಿರುತ್ತದೆ.
ಏನೇ ಇರಲಿ, ನಮ್ಮ ರಾಜ್ಯದ ಕ್ರೀಡಾ ಸಂಸ್ಥೆಗಳು ಮರಣಶಯ್ಯೆಯಲ್ಲಿ ಮಲಗಿದ್ದಾವೆ. ಕುಂಭಕರ್ಣನಂತೆ ಗಾಢ ನಿದ್ದೆಯಲ್ಲಿರುವ ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು ರಾವಣನಂತಹ ಅಹಂಕಾರಿಗಳ ಕೈಗೊಂಬೆಯಾಗಿದ್ದಾರೆ. ಯಾರಿಗೆ ಹೇಳೋಣ.. ನಮ್ಮ ಪ್ರಾಬ್ಲಮ್..! ಉತ್ತರ ಕೊಡುವವರು ಯಾರು..?
#ಸನತ್ ರೈ
@saakshatv.com
#SindhuShreeGanesh #PoleVault #AsianGames2026 #KarnatakaSports #SportsNews #Inspiration #SportsInjustice #IndianAthletics #sanathrai #saakshatv







