ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್, ಇಡೀ ತಂಡದ ಪ್ರೀತಿಯ ಹ್ಯಾಕರ್..! ಹಿಮದ ನಾಡಿನ ಐಸ್ಮೆನ್..ಟೀಮ್ ಇಂಡಿಯಾದ ಹೊಸ ಸ್ಪೀಡ್ ಗನ್. ಅವನ ಹೆಸರು..!
————-
ಅವನು ಕಂಪ್ಯೂಟರ್ ಪಂಡಿತನಲ್ಲ..!
ಆದ್ರೆ ಇಡೀ ತಂಡದ ಆಟಗಾರರಿಗೆ ಪ್ರೀತಿಯ “ಹ್ಯಾಕರ್”
ಹಾಗಾದ್ರೆ ಈ ಹೆಸರು ಹೇಗೆ ಬಂತು..? ಯಾರಿಗೂ ಸರಿಯಾಗಿ ನೆನಪಿಲ್ಲ.
ಈ ಹೆಸರಿನ ಹಿಂದೆ ವಿಚಿತ್ರವಾದ ರಹ್ಯಸ್ಯ ಇದೆ. ನಿಜ, ಆತ ಸೈಬರ್ ಜಗತ್ತಿನ ಖಿಲಾಡಿಯಲ್ಲ. ಬದಲಾಗಿ ರೋಬೋಟ್ನಂತೆ ಬೌಲಿಂಗ್ ಮಾಡುವ ಹ್ಯೂಮನ್. ಒಂದೇ ಜಾಗಕ್ಕೆ ಮತ್ತೆ ಮತ್ತೆ ಚೆಂಡು ಎಸೆಯುವ ಎಐ ಬೌಲಿಂಗ್ ಮೆಷಿನ್.
ಒಂದೇ ಲೆಂಗ್ತ್, ಒಂದೇ ಲೈನ್, ಒಂದೇ ಗುರಿ. ಈ ಮೂರು ಸೂತ್ರಗಳೇ ಆತನ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳು. ಎದುರಾಳಿ ಬ್ಯಾಟರ್ನ ತಾಳ್ಮೆ ಪರೀಕ್ಷೆ ಮಾಡುವುದೇ ಅವನ ಮುಖ್ಯ ಉದ್ದೇಶವೂ ಹೌದು. ಕಾಯಕವೂ ಹೌದು.
ಅದಕ್ಕಾಗಿ ಅವನು ಹೆಚ್ಚು ಯೋಚನೆ ಮಾಡುವುದಿಲ್ಲ. ಅನಗತ್ಯ ಪ್ರಯೋಗ ನಡೆಸುವುದಿಲ್ಲ. ಆದ್ರೆ ನಿರಂತರವಾಗಿ ಒಂದೇ ರೀತಿ, ಒಂದೇ ದಾಟಿ, ಒಂದೇ ಲಯದಲ್ಲಿ ಬೌಲಿಂಗ್ ಮಾಡುತ್ತಾನೆ. ಎಷ್ಟರ ಮಟ್ಟಿಗೆ ಅಂದ್ರೆ ಎದುರಾಳಿ ಬ್ಯಾಟರ್ ತಾಳ್ಮೆ ಕಳೆದುಕೊಳ್ಳುವ ತನಕ ತನ್ನ ನಿಖರತೆಯನ್ನು ಬಿಟ್ಟುಕೊಡಲ್ಲ.
ಹೀಗಾಗಿಯೇ “ನಮ್ಮ ವರ್ಕ್ ಹಾರ್ಸ್”(ನಮ್ಮ ತಂಡದ ದಣಿವರಿಯದ ಕುದುರೆ) ಎಂದು ಹೆಮ್ಮೆಯಿಂದ ಕರೆಯುತ್ತಾರೆ ಕೋಚ್ ಅಜೇಯ್ ಶರ್ಮಾ. ಯಾಕಂದ್ರೆ, ಅವನು ಎಷ್ಟು ಓವರ್ ಬೇಕಾದ್ರೂ ಮಾಡ್ತಾನೆ. ಎಷ್ಟೇ ಬಿಸಿಲಿದ್ರೂ ಕಂಗೆಡುವುದಿಲ್ಲ. ಎಷ್ಟೇ ದಣಿದಿದ್ರೂ ದಮ್ಮು ಕಳೆದುಕೊಳ್ಳುವುದಿಲ್ಲ. ಸೋಲಿನ ದವಡೆಗೆ ಸಿಲುಕಿದ್ರೂ ಎದೆಗುಂದುವುದಿಲ್ಲ. ತಂಡದ ಗೆಲುವಿಗಾಗಿ ಕೊನೆ ಕ್ಷಣದವರೆಗೆ ಧೈರ್ಯವಾಗಿ ಹೋರಾಡುವುದೇ ಆತನ ಜಾಯಮಾನ. ಸಂಕಟ ಬಂದಾಗ ವೆಂಕಟರಮಣ ಅನ್ನುವಂತೆ ಅವನು ತಂಡದ ಅಪತ್ಬಾಂಧವ.
ಹೌದು, ಅವನು ಹೆಚ್ಚು ಮಾತನಾಡುವುದಿಲ್ಲ. ಆದ್ರೆ ಅವನ ಎಸೆತಗಳು ಮಾತನಾಡುತ್ತವೆ. ಪಡೆಯುವ ವಿಕೆಟ್ಗಳು ಸಾಕ್ಷಿಯಾಗುತ್ತಿವೆ. ದೇಸಿ ಕ್ರಿಕೆಟ್ನ ಸಾಧನೆಗಳೇ ಭವಿಷ್ಯವನ್ನು ರೂಪಿಸಿವೆ. ಹಾಗಾಗಿಯೇ ಟೀಮ್ ಇಂಡಿಯಾ ಟೆಸ್ಟ್ ತಂಡದ ಗರ್ಭಗುಡಿಗೆ ಪ್ರವೇಶ ಮಾಡಿದ್ದಾನೆ.
ಅಪ್ಪನಿಗೆ ಆಸೆ ಡಾಕ್ಟರ್.. ಮಗನ ಕನಸು ಕ್ರಿಕೆಟ್..!
ಅಂದ ಹಾಗೇ ಅವನು ಸರ್ಕಾರಿ ಶಾಲೆಯ ಶಿಕ್ಷಕನ ಮಗ. ತಂದೆಯ ಹೆಸರು ಗುಲಾಮ್ ನಬಿದಾರ್. ಬಾರಾಮುಲ್ಲಾ ಜಿಲ್ಲೆಯ ಶೀರಿ ಗ್ರಾಮ ಇವನ ಹುಟ್ಟೂರು. ಮೊದಲು ಓದು. ಆಮೇಲೆ ಕ್ರಿಕೆಟ್. ಇದು ತಂದೆಯ ಎಚ್ಚರಿಕೆಯ ಮಾತು. ಪಾಠದ ಶಿಸ್ತಿನ ಜೊತೆಗೆ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ. ತಂದೆಗೆ ಮಗ ವೈದನಾಗಬೇಕು ಎಂಬ ಆಸೆ. ಆದ್ರೆ ಇವನಿಗೆ ಭಾರತದ ಪರ ಕ್ರಿಕೆಟ್ ಆಡುವ ಕನಸು.
ನಿಮ್ಮ ಕ್ಲಬ್ ಪರ ಆಡಲು ಹಣ ನೀಡಬೇಕಾ..?
ಶಾಲೆಯಿಂದ ಬಂದ ತಕ್ಷಣ ಬ್ಯಾಟ್ ಬಾಲ್ ಹಿಡಿದುಕೊಂಡು ಮೈದಾನಕ್ಕೆ ಓಡುತ್ತಿದ್ದ. ಅಲ್ಲಿ ಸ್ನೇಹಿತರ ಜೊತೆ ಆಡುತ್ತಿದ್ದ ಸ್ಥಳಿಯ ಪಂದ್ಯಗಳೇ ಆತನ ಮೊದಲ ಕ್ರಿಕೆಟ್ ಶಾಲೆ. ಬಳಿಕ ಬಾರಾಮುಲ್ಲಾ ಕ್ಲಬ್ ಪರ ಆಡುವಾಗ ಆತನ ಪ್ರತಿಭೆ ಬೆಳಕಿಗೆ ಬಂದಿತ್ತು. ವೇಗ, ನಿಖರತೆ ಮತ್ತು ಬೌನ್ಸ್ ಎಸೆತಗಳಿಂದ ಎಲ್ಲರ ಗಮನ ಸೆಳೆದಿದ್ದ.
ಅಷ್ಟಕ್ಕೂ ಬಾರಾಮುಲ್ಲಾ ಕ್ಲಬ್ ಅನ್ನು ಸೇರಿಕೊಂಡಿದ್ದು ಕೂಡ ಆಕಸ್ಮಿಕ ಘಟನೆಯಿಂದ. ಸ್ಥಳೀಯ ಪಂದ್ಯದಲ್ಲಿ ಈ ಹುಡುಗ, ಬಾರಾಮುಲ್ಲಾ ಕ್ಲಬ್ ವಿರುದ್ಧವಾಗಿ ಆಡುತ್ತಿದ್ದ. ಆಗ ಅವನಿಗೆ 14 ವರ್ಷ. ಅಮೋಘ ಬೌಲಿಂಗ್ ಜೊತೆ ಅರ್ಧಶತಕ ಕೂಡ ಸಿಡಿಸಿದ್ದ. ಆಗ ಬಾರಾಮುಲ್ಲಾ ಕ್ಲಬ್ ತಂಡದ ನಾಯಕ ಜುಬೈರ್ದಾರ್, ತಮ್ಮ ಕ್ಲಬ್ ಪರ ಆಡುವಂತೆ ಆಹ್ವಾನ ನೀಡುತ್ತಾನೆ. ಆಗ ಭ್ಯಯ್ಯಾ.. ನಿಮ್ಮ ಕ್ಲಬ್ ಪರ ಆಡಲು ಹಣ ನೀಡಬೇಕಾ ಎಂದು ಮುಗ್ದವಾಗಿ ಕೇಳಿದ್ದ. ಈ ಘಟನೆಯನ್ನು ಜುಬೈರ್ದಾರ್ ಈಗಲೂ ನೆನಪಿಸಿಕೊಂಡು ನಗುತ್ತಾನೆ.
ಕ್ರಿಕೆಟ್ ಬದುಕಿಗೆ ತಿರುವು ನೀಡಿದ ಮೆಕ್ಗ್ರಾಥ್..!
2013ರಲ್ಲಿ ಬಿಸಿಸಿಐ ವೇಗದ ಬೌಲಿಂಗ್ ಶಿಬಿರವನ್ನು ಆಯೋಜಿಸಿತ್ತು. ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೇನ್ ಮೆಕ್ಗ್ರಾಥ್ ತರಬೇತುದಾರನಾಗಿದ್ದರು. ಇದೇ ಸಮಯದಲ್ಲಿ ಅವನು ಸೆಕೆಂಡು ಪಿಯೂಸಿ ಪರೀಕ್ಷೆ ಬರೆದು ಮುಗಿಸಿದ್ದ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಅಪ್ಪನ ಒತ್ತಡ.
ಇವನಿಗೆ ತರಬೇತಿ ಶಿಬಿರಕ್ಕೆ ಹೋಗಲೇಬೇಕು ಎಂಬ ಹಠ. ಕೊನೆಗೆ ಜುಬೈರ್ದಾರ್ ಆತನ ತಂದೆಯನ್ನು ಮನವೋಲಿಸಲು ಯಶಸ್ವಿಯಾಗಿದ್ದ. ಆದ್ರೆ ಮಗನನ್ನು ಟ್ರೈನ್ನಲ್ಲಿ ಚೆನ್ನೈಗೆ ಕಳುಹಿಸಲು ಮನಸು ಒಪ್ಪಲಿಲ್ಲ. ಹತ್ತು ಸಾವಿರ ಕೊಟ್ಟು ಫ್ಲೈಟ್ ನಲ್ಲಿ ಕಳುಹಿಸಿದ್ದರು. ಬಹುಶಃ ಮಗನ ಭವಿಷ್ಯ ಕ್ರಿಕೆಟ್ನಲ್ಲೇ ಅರಳುತ್ತದೆ ಎಂಬ ಸಣ್ಣ ಭರವಸೆ ಅವರಲ್ಲಿ ಆಗಲೇ ಮೂಡಿತ್ತು ಅನ್ಸುತ್ತೆ.
ಪಿಚ್ನಲ್ಲಿ ಜಾರಿ ಬಿದ್ದು ಎದ್ದವನು ಮತ್ತೆ ತಿರುಗಿ ನೋಡಲಿಲ್ಲ..!
ಆಗ ಜಮ್ಮು ಕಾಶ್ಮೀರದಲ್ಲಿ ಒಂದೇ ಒಂದು ಟರ್ಫ್ ಪಿಚ್ ಇತ್ತು. ಈ ಹುಡುಗನಿಗೆ ಶ್ರೀನಗರದ ಶೇರ್ ಇ ಕಾಶ್ಮೀರ್ ಮೈದಾನದಲ್ಲಿ ಮೊದಲ ಬಾರಿ ಆಡುವ ಅವಕಾಶ ಸಿಕ್ಕಿತ್ತು. ಒತ್ತಡವೋ ಏನೋ, ಹಿಂದಿನ ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಮೈದಾನಕ್ಕೆ ಸ್ಪೈಕ್ ಹಾಕುವ ಬದಲು ಸ್ನೀಕರ್ಸ್ ಹಾಕೊಂಡು ಬೌಲಿಂಗ್ ಮಾಡಿದ್ದ. ಮೊದಲ ಎಸೆತದಲ್ಲೇ ಜಾರಿ ಬಿದ್ದಿದ್ದ. ನಂತರ ಸ್ಪೈಕ್ ಹಾಕೊಂಡು ಬೌಲಿಂಗ್ ಮುಂದುವರಿಸಿದ್ದ. ಅವತ್ತು ಪಿಚ್ನಲ್ಲಿ ಬಿದ್ದವನು ಮತ್ತೆ ಜಾರಿ ಬೀಳಲಿಲ್ಲ. ಕನಸನ್ನು ಬೆನ್ನಟ್ಟಿಕೊಂಡು ಹೊರಟವನು, ಇದೀಗ ನನಸು ಮಾಡುವ ಹಾದಿಯಲ್ಲಿ ನಿಂತಿದ್ದಾನೆ.
ಜಮ್ಮು ಕಾಶ್ಮೀರ ಕ್ರಿಕೆಟ್ಗೆ ಆತನೇ ಗುರುತು..!
ಅವನಿಗೆ ಪಿಚ್ ಯಾವುದೇ ಇರಲಿ, ಹೇಗೆ ಬೇಕಾದ್ರೂ ವರ್ತಿಸಲಿ.. ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವುದೇ ಆತನ ಕಾಯಕ. ರಣಜಿ ಟ್ರೋಫಿಯ ಪ್ರತಿ ಪಂದ್ಯಗಳಲ್ಲೂ ಲಾಂಗ್ ಸ್ಪೇಲ್ ಮಾಡಿ ಎದುರಾಳಿ ಬ್ಯಾಟರ್ಗಳನ್ನು ನಿದ್ದೆಗೇಡಿಸಿದ್ದಾನೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ವಿಕೆಟ್ ಉರುಳಿಸಿ ಅಚ್ಚರಿಗೊಳ್ಳಿಸಿದ್ದ. ಅಲ್ಲದೆ ಚೊಚ್ಚಲ ಬಾರಿ ಜಮ್ಮುಕಾಶ್ಮೀರಕ್ಕೆ ರಣಜಿ ಟ್ರೋಫಿ ಗೆಲ್ಲುವಲ್ಲಿ ಇವನು ಮಹತ್ತರವಾದ ಪಾತ್ರ ವಹಿಸಿದ್ದ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇಲ್ಲಿಯ ತನಕ 5952 ಎಸೆತಗಳನ್ನು ಎಸೆದು 156 ವಿಕೆಟ್ ಪಡೆದಿದ್ದಾನೆ. 16 ಬಾರಿ ಐದು ವಿಕೆಟ್ ಹಾಗೂ ನಾಲ್ಕು ಬಾರಿ ಹತ್ತು ವಿಕೆಟ್ಗಳ ಗೊಂಚಲು ಪಡೆದಿದ್ದಾನೆ. ಇನ್ನು ಲಿಸ್ಟ್ ಎ ಕ್ರಿಕೆಟ್ನಲ್ಲಿ 1767 ಎಸೆತಗಳಲ್ಲಿ 56 ವಿಕೆಟ್ ಉರುಳಿಸಿದ್ದಾನೆ. ಟಿ-20 ಕ್ರಿಕೆಟ್ನಲ್ಲಿ 727 ಎಸೆತಗಳಲ್ಲಿ 43 ವಿಕೆಟ್ ಕಬಳಿಸಿದ್ದಾನೆ.
ಈತನ ಬೌಲಿಂಗ್ ಅಸ್ತ್ರಕ್ಕೆ ಲಂಕಾ ದಹನವಾಗುತ್ತಾ..?
ಜಸ್ಪ್ರಿತ್ ಬೂಮ್ರಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಇವನಿಗೆ ಅವಕಾಶದ ಬಾಗಿಲು ಬಡಿಯಿತ್ತು. ಆಗಸ್ಟ್ 15ರಿಂದ ಆರಂಭವಾಗಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾನೆ. ಪರ್ವೆಜ್ ರಸೂಲ್, ಉಮ್ರನ್ ಮಲ್ಲಿಕ್ ನಂತರ ಟೀಮ್ ಇಂಡಿಯಾಗೆ ಆಯ್ಕೆಯಾದ ಜಮ್ಮುಕಾಶ್ಮೀರದ ಮೂರನೇ ಬೌಲರ್ ಆಗಿದ್ದಾನೆ.
ಸಾಮಾನ್ಯವಾಗಿ ಲಂಕಾದ ಪಿಚ್ಗಳು ಒಣ ಮತ್ತು ನಿಧಾನಗತಿಯಾಗಿರುತ್ತವೆ. ಮೇಲ್ನೋಟಕ್ಕೆ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುತ್ತದೆ. ಆದ್ರೆ ಲಯಬದ್ಧವಾಗಿ ಬೌಲಿಂಗ್ ಮಾಡಿದ್ರೆ ಇಲ್ಲಿ ವೇಗಿಗಳು ಯಶ ಸಾಧಿಸುತ್ತಾರೆ. ಈ ಹಿಂದೆ ಜಹೀರ್, ಇಶಾಂತ್, ಉಮೇಶ್ ಯಾದವ್, ಮಹಮ್ಮದ್ ಶಮಿ ಲಂಕಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಮುಖ್ಯವಾಗಿ ಗಾಲೆ ಮೈದಾನಕ್ಕೆ ಬೀಸುವ ಸಮುದ್ರದ ಅಡ್ಡಗಾಳಿ ಮತ್ತು ಎಸ್ಎಸ್ಸಿ ಮೈದಾನದ ಒರಟಾದ ಔಟ್ ಫೀಲ್ಡ್ ರಿವರ್ಸ್ ಸ್ವಿಂಗ್ಗೆ ಸಹಾಯವಾಗುತ್ತದೆ. ಹೀಗಾಗಿ ಒಂದೇ ಜಾಗಕ್ಕೆ ಚೆಂಡನ್ನು ನಿರಂತರವಾಗಿ ಎಸೆಯುವುದರಿಂದ ಇವನು ಯಶಸ್ವಿಯಾಗಬಹುದು ಎಂಬುದು ಕ್ರಿಕೆಟ್ ಪಂಡಿತರ ವಿಶ್ಲೇಷಣೆ.
ಓದಿದ್ರೆ ವೈದ್ಯನಾಗುತ್ತಿದ್ದ…ಆಗಿದ್ದು ಟೀಮ್ ಇಂಡಿಯಾ ಆಟಗಾರ..!
ಇನ್ನು ವೈದ್ಯನಾಗಬೇಕು ಎಂದು ಕನಸು ಕಂಡಿದ್ದ ತಂದೆ ಗುಲಾಮ್ ನಬಿ ದಾರ್ ಈಗ ಭಾವುಕರಾಗಿದ್ದಾರೆ. ಆದ್ರೆ ಅವರ ಶಿಸ್ತು ಎಷ್ಟು ಇತ್ತು ಅಂದ್ರೆ ಶಾಲೆಯ ಕೆಲಸ ಮುಗಿಯುವ ತನಕ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
“ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನೂ ರೂಪಿಸಬೇಕಲ್ವಾ ಎಂದು ಹೇಳುತ್ತಲೇ ಮಾತಿಗಿಳಿದ ಗುಲಾಮ್ ನಬಿದಾರ್,. ಭಾರತಕ್ಕೆ ಆಡುವುದೇ ಅವನ ದೊಡ್ಡ ಕನಸು. ಅದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾನೆ. ಅಲ್ಲಾಹನಿಗೆ ಧನ್ಯವಾದಗಳು. ಈ ಅವಕಾಶಕ್ಕಾಗಿ ನಾವು ಬಹಳ ವರ್ಷ ಕಾಯಬೇಕಾಯ್ತು. ಆದ್ರೆ ಕನಸುಗಳು ಈಡೇರಲು ಸಮಯಬೇಕು. ಹಾಗಾಗಿ ನಾವು ಎಂದಿಗೂ ಭರವಸೆ ಕಳೆದುಕೊಂಡಿರಲಿಲ್ಲ” ಎಂದು ಖುಷಿಯಿಂದಲೇ ಹೇಳ್ತಾರೆ.
ಗುರುವಿನ ಹಿತವಚನ..!
“ಯಾವುದಕ್ಕೂ ರೆಡಿಯಾಗಿರು. ನೀನು ನಿನ್ನ ಆಟವನ್ನು ಆಡು. ಆದ್ರೆ ನಿನ್ನ ಭವಿಷ್ಯ ರೂಪಿಸಿದವರನ್ನು ಮರೆಯಬೇಡ. ಮೈದಾನದ ಸಿಬ್ಬಂದಿ, ಸಹ ಆಟಗಾರರು, ಕೋಚ್ಗಳನ್ನು ಸದಾ ನೆನಪಿಟ್ಟುಕೊಂಡಿರು. ಎಲ್ಲೇ ಹೋದ್ರೂ ನೀನು ನೀನಾಗಿರು ಅಷ್ಟೇ ಎಂದು ಆತನ ಬೌಲಿಂಗ್ ಕೋಚ್ ಪಿ.ಕೃಷ್ಣ ಕುಮಾರ್ ಆಗಾಗ ಹಿತವಚನ ಹೇಳುತ್ತಿದ್ದರು
ಅಂದು ಕ್ಲಬ್ ಪರ ಆಡಲು ಎಷ್ಟು ದುಡ್ಡು ಕೊಡಬೇಕು ಎಂದು ಮುಗ್ಡವಾಗಿ ಕೇಳಿದ್ದ ಹುಡುಗ, ಇಂದು ಟೀಮ್ ಇಂಡಿಯಾದಲ್ಲಿ ಆಡುವ ಗೌರವ ಪಡೆದಿದ್ದಾನೆ. ಹಿಮದ ನಾಡಿನಲ್ಲಿ ಹುಟ್ಟಿ ಬೆಳೆದ ಆತನ ಕನಸುಗಳು ಹಿಮದಂತೆ ಕರಗಲಿಲ್ಲ. ಬದಲಾಗಿ ಹಿಮಗಾಳಿಯಂತೆ ವೇಗ ಪಡೆದುಕೊಂಡಿತು. ಇದೀಗ ಭಾರತ ತಂಡದ ಸ್ಪೀಡ್ ಗನ್ ಬೌಲರ್ ಆಗಿದ್ದಾನೆ. ತಾಳ್ಮೆಯೇ ಅವನ ಬಲ. ನಿಖರತೆಯೇ ಅವನ ಆಯುಧ. ಶಿಸ್ತೇ ಆತನ ಗುರುತು. ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಹೊಸ ಭರವಸೆ..!
ಈ ಹೆಸರನ್ನು ನೆನಪಿಟ್ಟುಕೊಳ್ಳಿ.
ಔಕಿಬ್ ನಬಿ..!
ಸನತ್ ರೈ
saakshatv.com
#AuqibNabi #TeamIndia #IndianCricket #RanjiTrophy #DelhiCapitals #FastBowler #CricketNews #Kannada #sanathrai #saakshatv
.








