ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯಲ್ಲಿ (BMICP) ಯಾವುದೇ ನಿಯಮಾವಳಿಗಳಿಲ್ಲದೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ 7 ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ನೈಸ್ ಸಂಸ್ಥೆಯ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನೈಸ್ ಸಂಸ್ಥೆಯು ಬಿಎಂಐಸಿಪಿ ಯೋಜನೆಯ ಮೂಲ ಒಪ್ಪಂದದ (FWA & PTA) ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಶಾಸನವೊಂದನ್ನು ರಚಿಸುವ ಮೂಲಕ ಸಂಪೂರ್ಣ ಬಿಎಂಐಸಿಪಿ ಯೋಜನೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳು ಹಾಗೂ ಶಾಸನಸಭಾ ಸದನ ಸಮಿತಿಯ ಶಿಫಾರಸುಗಳಂತೆ ನೈಸ್ ಸಂಸ್ಥೆಯು ಒಪ್ಪಂದದ ಒಂದೂ ನಿಯಮವನ್ನು ಸರಿಯಾಗಿ ಪಾಲಿಸಿಲ್ಲ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
23 ವರ್ಷಗಳಿಂದ ಪರಿಹಾರವಿಲ್ಲದೆ ಬೀದಿಗೆ ಬಿದ್ದ ರೈತರು
ಯೋಜನೆಗಾಗಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 23 ವರ್ಷಗಳು ಕಳೆದಿದ್ದರೂ, ಭೂಮಿ ಕಳೆದುಕೊಂಡ ಬಡ ರೈತರಿಗೆ ಮತ್ತು ಮಾಲೀಕರಿಗೆ ಇದುವರೆಗೂ ಸೂಕ್ತ ಪರಿಹಾರ ನೀಡಲಾಗಿಲ್ಲ. ಇದರಿಂದಾಗಿ ನೂರಾರು ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ. 30 ವರ್ಷಗಳಾದರೂ ಈ ಯೋಜನೆಯನ್ನು ಪೂರ್ಣಗೊಳಿಸಲು ನೈಸ್ ಸಂಸ್ಥೆಗೆ ಸಾಧ್ಯವಾಗಿಲ್ಲ. ಮೂಲ ಯೋಜನೆಯಂತೆ 2012 ಹಾಗೂ 2014ರೊಳಗೆ ಪೂರ್ಣಗೊಳ್ಳಬೇಕಿದ್ದ ಎಕ್ಸ್ಪ್ರೆಸ್ ರಸ್ತೆ ಹಾಗೂ 12 ವರ್ಷಗಳಲ್ಲಿ ಮುಗಿಯಬೇಕಿದ್ದ ನಗರ ಸಮುಚ್ಛಯಗಳನ್ನು ನೈಸ್ ಕಂಪನಿ ಇಂದಿಗೂ ಪೂರ್ಣಗೊಳಿಸಿಲ್ಲ ಎಂದು ದೂರಿದ್ದಾರೆ.
ಜುಲೈ 29 ರಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ಪತ್ರದಲ್ಲಿ ನೆನಪಿಸಿರುವ ಕುಮಾರಸ್ವಾಮಿ, ಈ ಯೋಜನೆಯನ್ನು ರದ್ದುಪಡಿಸಲು ನ್ಯಾಯಾಲಯ ಸೂಚಿಸಿದೆ. ಸಂಸ್ಥೆಗೆ ನೀಡಲಾಗಿರುವ ಜಮೀನನ್ನು ವಾಪಸ್ ಪಡೆಯಬೇಕು, ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ನಿಲ್ಲಿಸಬೇಕು ಹಾಗೂ ಮೂಲ ಒಪ್ಪಂದದಿಂದ ಹೊರಗುಳಿದಿರುವ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಡಬೇಕು. ಹೆಚ್ಚುವರಿಯಾಗಿ ನೀಡಲಾಗಿರುವ 554 ಎಕರೆ ಭೂಮಿಯನ್ನು ಸರ್ಕಾರ ತಕ್ಷಣವೇ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅಂಜುಂ ಪರ್ವೇಜ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ, 111 ಕಿಮೀ ಉದ್ದದ ಎಕ್ಸ್ಪ್ರೆಸ್ ರಸ್ತೆ ಪೈಕಿ ನೈಸ್ ಸಂಸ್ಥೆ ನಿರ್ಮಿಸಿದ್ದು ಕೇವಲ 5 ಕಿಮೀ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಸುಮಾರು 20 ಸಾವಿರ ಎಕರೆ ಭೂಮಿಯನ್ನು ನೈಸ್ ಸಂಸ್ಥೆಗೆ ನೀಡಿರುವುದು ಒಂದು ದೊಡ್ಡ ಹಗರಣ ಎಂದು ಕೋರ್ಟ್ ಉಲ್ಲೇಖಿಸಿದೆ. ಸಂಸ್ಥೆಯು ಮೂಲ ಉದ್ದೇಶಕ್ಕೆ ಭೂಮಿ ಬಳಸದೆ ವಾಣಿಜ್ಯ ಉಪಯೋಗಕ್ಕೆ ಬಳಸಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿದೆ. 2016 ರಲ್ಲಿ ಟಿ. ಬಿ. ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ನೀಡಿದ ವರದಿಯನ್ನು ಆಧರಿಸಿ ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.








