ಪ್ರಣಬ್ ಮುಖರ್ಜಿ- ಗುಮಾಸ್ತನಿಂದ ದೇಶದ ಮೊದಲ ಪ್ರಜೆಯ ವರೆಗಿನ ಸಾರ್ಥಕ ಜೀವನ
ಹೊಸದಿಲ್ಲಿ, ಅಗಸ್ಟ್31: ದೇಶಕ್ಕೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಪ್ರಣಬ್ ದಾ ಇನ್ನಿಲ್ಲ. ನವ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ 84 ವರ್ಷದ ಪ್ರಣಬ್ ದಾ ಕೊನೆಯುಸಿರೆಳೆದಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಮೊದಲು ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಆ ಬಳಿಕ ಅವರ ಆರೋಗ್ಯ ಗಂಭೀರವಾಗಿಯೇ ಮುಂದುವರಿದಿದ್ದು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ದಶಕಗಳವರೆಗೆ ನಿಸ್ವಾರ್ಥ ಮತ್ತು ದಣಿವರಿಯದ ಸೇವೆ ಸಲ್ಲಿಸಿದ ಮುಖರ್ಜಿ 2012ರಿಂದ 2017 ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಪ್ರಧಾನಿ ಪದವಿಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದಾರೆ.
ಪಶ್ಚಿಮ ಬಂಗಾಳದ ಮೀರತಿಯಲ್ಲಿ 1935ರ ಡಿಸೆಂಬರ್ 11ರಂದು ಜನಿಸಿದ ಮುಖರ್ಜಿ ತಮ್ಮ ವೃತ್ತಿಜೀವನವನ್ನು ಕಲ್ಕತ್ತಾದ ಡೆಪ್ಯೂಟಿ ಅಕೌಂಟೆಂಟ್-ಜನರಲ್ (ಪೋಸ್ಟ್ ಮತ್ತು ಟೆಲಿಗ್ರಾಫ್) ಕಚೇರಿಯಲ್ಲಿ ಉನ್ನತ ವಿಭಾಗದ ಗುಮಾಸ್ತರಾಗಿ ಪ್ರಾರಂಭಿಸಿದರು. 1963 ರಲ್ಲಿ, ಅವರು ಕೋಲ್ಕತ್ತಾದ ವಿದ್ಯಾನಗರ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದ ಉಪನ್ಯಾಸಕರು (ಸಹಾಯಕ ಪ್ರಾಧ್ಯಾಪಕರು) ಆದರು ನಂತರ ಬಂಗಾಲಿ ಭಾಷೆಯ ಒಂದು ಮಾಸಪತ್ರಿಕೆಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. 1969 ರಲ್ಲಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಗಮನಸೆಳೆದ ಮುಖರ್ಜಿ ಕಾಂಗ್ರೆಸ್ ಟಿಕೆಟ್ನಲ್ಲಿ ರಾಜ್ಯಸಭೆ ಮೂಲಕ ಭಾರತೀಯ ಸಂಸತ್ತಿನಲ್ಲಿ ಪ್ರವೇಶಿಸಿದ್ದರು. ಸಕ್ರಿಯ ರಾಜಕಾರಣದ ಕೆಲವೇ ಸಮಯದಲ್ಲಿ ಶ್ರೀಮತಿ ಗಾಂಧಿಯವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ 1973 ರಲ್ಲಿ ಅವರ ಸಂಪುಟದಲ್ಲಿ ಸಚಿವರಾದರು.ಮುಂದೆ 1975, 1981, 1993 ಮತ್ತು 1999 ರಲ್ಲಿ ಹಲವು ಬಾರಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರು.
1984 ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅನನುಭವಿ ರಾಜೀವ್ ಗಾಂಧಿಯನ್ನು ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತ್ತು. 1984 ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅನನುಭವಿ ರಾಜೀವ್ ಗಾಂಧಿಯನ್ನು ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತ್ತು. ಅದೇಕೋ ಅನುಭವಿ ಮತ್ತು ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದ ಅರಿತ ಮುಖರ್ಜಿ, ಕಾಂಗ್ರೆಸ್ ನಿಂದ ದೂರ ಸರಿದು ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಅನ್ನು ಹುಟ್ಟುಹಾಕಿದರು. ಆದರೆ ರಾಜಕಾರಣದ ತಳಮಟ್ಟ ತಿಳಿಯದಿದ್ದ ಮುಖರ್ಜಿ 1989 ರಲ್ಲಿ ತನ್ನ ಪಕ್ಷವನ್ನು ಕಾಂಗ್ರೆಸ್ಸಿನೊಂದಿಗೆ ವಿಲೀನಗೊಳಿಸಿದರು.
ರಾಜೀವ್ ಗಾಂಧಿಯವರ ಹತ್ಯೆಯ ನಂತರ ಅಂದಿನ ಪ್ರಧಾನಿ , ಪಿ.ವಿ. ನರಸಿಂಹ ರಾವ್, ಪ್ರಣಬ್ ಮುಖರ್ಜಿಗೆ ಯೋಜನಾ ಆಯೋಗ (1991) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (1995) ಜವಾಬ್ದಾರಿಯನ್ನು ನೀಡಿದರು . ಮುಂದೆ ಅವರು ಸೋನಿಯಾ ಗಾಂಧಿಯನ್ನು ರಾಜಕೀಯ ಪ್ರವೇಶಕ್ಕೆ ಬಲವಾಗಿ ಬೆಂಬಲಿಸಿದರು. ದೇಶದ ರಾಜಕಾರಣದಿಂದ ಹಿಂದೆ ಸರಿದಿದ್ದ ಸೋನಿಯಾ 1998 ರಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಾಗ ಅವರಿಗೆ ಮಾರ್ಗದರ್ಶನ ನೀಡಿದರು. ಮುಖರ್ಜಿ ಯುಪಿಎ ಅಧಿಕಾರಕ್ಕೆ ಬಂದಾಗ 2004 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಕೌಶಲ್ಯಪೂರ್ಣ ಆಡಳಿತಗಾರ ಮತ್ತು ಸಕ್ರಿಯ ರಾಜಕಾರಣಿಯಾಗಿ, ಮುಖರ್ಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ಸಭೆಗಳ ಅಧ್ಯಕ್ಷತೆ ವಹಿಸುತ್ತಿದ್ದರು.
ವಿವಾದಾತ್ಮಕ ಇಂಡೋ-ಯುಎಸ್ ಪರಮಾಣು ಒಪ್ಪಂದ – 123 ಒಪ್ಪಂದ ಮತ್ತು ಪರಮಾಣು ಸರಬರಾಜುದಾರರ ಗುಂಪಿನಿಂದ ಭಾರತಕ್ಕೆ ವಿನಾಯಿತಿ ಗಳಿಸುವಲ್ಲಿ ಮುಖರ್ಜಿ ನಿರ್ಣಾಯಕ ಪಾತ್ರ ವಹಿಸಿದ್ದರು. 2012 ರಿಂದ 2017 ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಗೆ ಸರಕಾರ 2008 ರಲ್ಲಿ ಪದ್ಮವಿಭೂಷಣ್ ಮತ್ತು 2019 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಒಟ್ಟಿನಲ್ಲಿ ಗುಮಾಸ್ತನಿಂದ ಶುರು ಆದ ಬದುಕಿನ ಪ್ರಯಾಣ ದೇಶದ ಅಧ್ಯಕ್ಷ ಗಾದಿಯವರೆಗೆ ನಡೆದು ಬಂದ ರಾಜಕೀಯ ಪಯಣ … ಕೊನೆಗೊಂಡಿದೆ








