ಬೆಂಗಳೂರು : ಪಿಡಿಓಗಳು ಎಲ್ಲರನ್ನೂ ರಾಕ್ಷಸರು ಅಂತ ಹೇಳಿಲ್ಲ. ಕೆಲವರನ್ನಷ್ಟೇ ರಾಕ್ಷಸರು ಎಂದಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಒಳ್ಳೆಯ ಪಿಡಿಓಗಳಿಗೆ ರಾಕ್ಷಸರು ಅಂತ ಹೇಳುವ ಚಟ ನನಗಿಲ್ಲ ಎಂದು ಪಿಡಿಓಗಳು ರಾಕ್ಷಸರು ಎಂಬ ತಮ್ಮ ಹೇಳಿಕೆಗೆ ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಸಣ್ಣದಾಗಿ ನಡೆದುಕೊಂಡು, ಯಾರ ಬಗ್ಗೆಯಾದರೂ ಅಪಚಾರ ಮಾಡಿದ್ದರೆ ನಾನು ನೇಣು ಹಾಕಿಕೊಳ್ಳೋಕೆ ತಯಾರಿದ್ದೇನೆ. ಬಡವರಿಗಾಗಿ ಶಾಸಕರ ಸಲಹೆಯನ್ನು ಸ್ವೀಕರಿಸಬೇಕು. ಅವರು ಹೇಳಿದಂತೆ ಅವರ ಸಲಹೆಗಳನ್ನು ನಾನು ಕಾರ್ಯರೂಪಕ್ಕೆ ತರಬೇಕು. ಇಲ್ಲ ಅಂದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ. ಸಚಿವನಾಗಿ ಒಂದು ವರ್ಷ ಎರಡು ತಿಂಗಳು ಆಗುತ್ತಿದೆ. ಗೊಂದಲದ ಗೂಡಾಗಿದ್ದ ವಸತಿ ಇಲಾಖೆಯನ್ನ ಲಾಜಿಕಲ್ ಎಂಡ್ ಗೆ ತಂದಿದ್ದೇವೆ. 188 ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯ 5.40 ಲಕ್ಷ ಮನೆಗಳು ಮಂಜೂರಾಗಿದ್ದವು. ಆದರೆ ಬಹಳಷ್ಟು ಜಿಲ್ಲೆಗಳಲ್ಲಿ ಅನರ್ಹ ಫಲಾನುಭವಿಗಳು ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಅವಾಸ್ ಯೋಜನೆ ಮಿಸ್ ಯೂಸ್ ಆಗ್ತಾ ಇತ್ತು. ಪಿಡಿಓಗಳು ಮಾಡಿರುವ ತಪ್ಪುಗಳಿವು. ಪಿಡಿಓಗಳು ಹೇಳಿದ್ದು ಎಲ್ಲವೂ ಸರಿ ಇರೋದಿಲ್ಲ. ಕೆಲವು ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಇರ್ತಾರೆ ಎಂದಿದ್ದೇನೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅದರಲ್ಲಿ ಏನ್ ತಪ್ಪಿದೆ ಎಂದು ಸಿಎಂ ಕೇಳಿದ್ರು. ಪಿಡಿಓಗಳು ಎಲ್ಲರನ್ನೂ ರಾಕ್ಷಸರು ಅಂತ ಹೇಳಿಲ್ಲ. ಕೆಲವರನ್ನಷ್ಟೇ ರಾಕ್ಷಸರು ಎಂದಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಒಳ್ಳೆಯ ಪಿಡಿಓಗಳಿಗೆ ರಾಕ್ಷಸರು ಅಂತ ಹೇಳುವ ಚಟ ನನಗಿಲ್ಲ ಎಂದರು.
ಬಡವರ ಪರವಾಗಿ ನಾನು ಪಿಡಿಓಗಳ ಬಳಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ವಿ. ಸೋಮಣ್ಣ, ನನಗೆ ಯಾರ ಒತ್ತಡವೂ ಇಲ್ಲ. ನಾನು ಕೆಲ ಗೌರವಯುತ ಪಿಡಿಓಗಳಿಗೆ ಆಗಿರುವ ನೋವಿನ ಹಿನ್ನೆಲೆಯಲ್ಲಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಒಂದಂತೂ ನಿಜ ವಿ.ಸೋಮಣ್ಣ ಇನ್ನೂ ಬದುಕಿದ್ದಾನೆ ಎಂದು ಹೇಳಿದ್ದಾರೆ.
https://youtu.be/OEsS0wOJz7M








