Saakshatv yatrika episode 4 ಅನನ್ಯ ಸೌಂದರ್ಯದ ಮುಕುಟಮಣಿ ಕ್ಯಾಲಿಫೋರ್ನಿಯಾ ( California ) ಪ್ರವಾಸಿಗರ ಪಾಲಿನ ಸೂಜಿಗಲ್ಲು :
Saakshatv yatrika episode 4 ನಾನು ಅಮೇರಿಕಾಗೆ ಭೇಟಿ ಕೊಡುವ ಮುಂಚಿನಿಂದಲೂ ಕ್ಯಾಲಿಫೋರ್ನಿಯಾದ ( California ) ಸೌಂದರ್ಯದ ಬಗ್ಗೆ ಕೇಳ್ತಾ ಇದ್ದೆ. ಅಮೆರಿಕಾದ ಉಳಿದ ರಾಜ್ಯಗಳನ್ನ ತೆಗೆದುಕೊಂಡರೆ- ನ್ಯೂಯಾರ್ಕ್ ರಾಜ್ಯದಲ್ಲಿ ನಯಾಗರಾದಂತಹ ಪ್ರಾಕೃತಿಕ ವಿಸ್ಮಯಗಳು ಮತ್ತು ನ್ಯೂಯಾರ್ಕ್ ನಗರದ ಅದ್ಭುತ ರಚನೆಗಳು, ಫ್ಲೋರಿಡಾದಲ್ಲಿ ಸಮುದ್ರ ತೀರಗಳು, ಅರ್ಕನ್ಸಾ- ಟೆನ್ನಸ್ಸಿ- ವರ್ಮೌಂಟ್- ನ್ಯೂಹ್ಯಾಂಪ್ಶೈರಿನ ಕಾಡುಗಳು, ಆರಿಝೋನಾ ಯೂಟಾಗಳ ಮರುಭೂಮಿಯ ಪಾಕೃತಿಕ ರಚನೆಗಳು ಇತ್ಯಾದಿಗಳು ಬಹು ಪ್ರಸಿದ್ಧ. ಉಳಿದೆಡೆ ಹೀಗೆ ಒಂದೆರಡು ಅಂಶಗಳಷ್ಟೇ ಇದ್ದರೆ ಕ್ಯಾಲೊಫೋರ್ನಿಯಾದಲ್ಲಿ ಇವೆಲ್ಲವೂ ಇವೆ.
ಪ್ರಾಕೃತಿಕ ವಿಸ್ಮಯಗಳ ಪಟ್ಟಿಗೆ ಬಂದರೆ ಸ್ವಿಸ್ ನೆನಪಿಸುವ ಟಾಹೋ ಸರೋವರ, ಜೋಗದ ಎರಡರಷ್ಟು ಎತ್ತರದ ಯೂಸೆಮಿಟಿ ಜಲಪಾತ ಮತ್ತು ಅಲ್ಲಿನ ಬೆರಗು ಗೊಳಿಸುವ ರಾಷ್ಟ್ರೀಯ ಉದ್ಯಾನ, ನೂರಾರು ಅಡಿ ಎತ್ತರದ ಮರಗಳಿರುವ ಸಿಕೋಯಾ ಮತ್ತು ರೆಡ್ವುಡ್ ಕಾಡುಗಳು, ಜಗತ್ತಿನ ಭೀಕರ ಮರಳುಗಾಡು ಪ್ರದೇಶಗಳಲ್ಲಿ ಒಂದಾದ ಮೃತ್ಯುಕಣಿವೆ, ನಯನ ಮನೋಹರ ಕರಾವಳಿ ಪ್ರದೇಶ ಇತ್ಯಾದಿ ಇತ್ಯಾದಿ. ಹಾಗೇ ಕೃಷಿ ಮತ್ತು ಸಂಶೋಧನಾ ಪ್ರವಾಸ ಮಾಡುವವರಿಗೂ ಮಧ್ಯ ಕಣಿವೆ ಮತ್ತು ನಾಪಾ ಕಣಿವೆಗಳಂತ ಜಾಗಗಳಿವೆ. ಅದೇ ಮಾನವ ನಿರ್ಮಿತ ರಚನೆಗಳಲ್ಲಿ ಸ್ವರ್ಣಸೇತು, ಲಾಸ್ ಎಂಜಿಲಿಸಿನ ಡಿಸ್ನಿ ಲ್ಯಾಂಡ್, ಯೂನಿವರ್ಸಲ್ ಸ್ಟೂಡಿಯೋ, ಕೆಲ ಹಾಲಿವುಡ್ ಸಿನಿಮಾ ಪ್ರಪಂಚಗಳು ಸಿಗುತ್ತವೆ.
ನೀವು ಪ್ರತಿ ವಾರ ಒಂದೊಂದು ಕಡೆ ಹೋದರು ವರ್ಷಕ್ಕೆ ಮುಗಿಯದಷ್ಟು ಜಾಗಗಳಿವೆ. ಮತ್ತು ಅಲ್ಲಿನ ಸರಕಾರ ಅವುಗಳನ್ನು ಅಷ್ಟೇ ಚಂದಕ್ಕೆ ನಿರ್ವಹಿಸುತ್ತದೆ. ಈ ಉತ್ತಮ ನಿರ್ವಹಣೆ ಹೆಚ್ಚು ಪ್ರವಾಸಿಗರ ಆಕರ್ಷಿಸುತ್ತದೆ. ಇದರಿಂದ ರಾಜ್ಯಕ್ಕೆ ಆದಾಯ ಮತ್ತು ಜನರಿಗೆವುದ್ಯೋಗಳೆರಡೂ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತವೆ. ಈ ವಿಷಯದಲ್ಲಿ ಕೇರಳ, ಮೈಸೂರು, ಅಂತಹ ಕೆಲವೇ ಜಾಗಗಳ ಬಿಟ್ಟರೆ ನಮ್ಮಲ್ಲಿ ಪ್ರವಾಸೀ ಸ್ನೇಹಿ ಮನೋಭಾವ ಕಮ್ಮಿ. ಅದೂ ಅಲ್ಲದೇ ತಲೆಬುಡವಿಲ್ಲದ ಅಭಿವೃದ್ಧಿ ಯೋಜನೆಗಳು ಕೊಡಗುವಿನಂತ ಸ್ವರ್ಗವನ್ನು ಹಾಳುಮಾಡಿರುವುದನ್ನು ಕೂಡಾ ಕಣ್ಣಾರೆ ನೋಡಿದ್ದೇವೆ.
ಇರಲಿ, ವಿಷಯಾಂತರ ಬೇಡ. ನಾವು ಲಾಸ್ ಎಂಜಲೀಸ್ ನಲ್ಲಿದ್ದಾಗ ಪ್ರತಿವಾರ ಎಲ್ಲಿ ಹೋಗೋಣ ಅನ್ನೋದೇ ದೊಡ್ಡ ಸಮಸ್ಯೆಯಾಗಿತ್ತು. ಅಷ್ಟು ಜಾಗಗಳಿದ್ದವು. ಆದರೂ ನಾವು ವಿಶ್ವವಿಖ್ಯಾತ ಡಿಸ್ನಿ ವರ್ಲ್ಡ್ ಮತ್ತು ಯೂನಿವರ್ಸಲ್ ಸ್ಟುಡಿಯೋಗೆ ಭೇಟಿ ನೀಡಲಿಲ್ಲ. ಮಗ ಸ್ವಲ್ಪ ದೊಡ್ಡವನಾದ ಮೇಲೆ ಹೋಗೋಣ ಅವನಿಗೆ ಈಗ ಏನೂ ಗೊತ್ತಾಗೊಲ್ಲ ಅನ್ನುವುದು ಒಂದು ಕಾರಣವಾದರೆ ಅಷ್ಟು ದುಡ್ಡಿರಲಿಲ್ಲ ಆವಾಗ ಅನ್ನುವುದೂ ನಿಜ.
ಇದನ್ನೂ ಓದಿ : ಅಮೇರಿಕನ್ ಯಾತ್ರೆ; ಲಾಸ್ ಏಂಜಲೀಸ್ ಜಿಡಿಪಿ ಭಾರತದ ಜಿಡಿಪಿಗಿಂತ ಹೆಚ್ಚು
ಅಲ್ಲಿದ್ದಾಗ ನಾನೆಷ್ಟೋ ಬಾರಿ ಅಂದುಕೊಂಡಿದ್ದೆ. ಕರ್ನಾಟಕದಲ್ಲೂ ವಿವಿಧ ರೀತಿಯ ನೈಸರ್ಗಿಕ ತಾಣಗಳಿವೆ, ಬೆಂಗಳೂರಂತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ ನಗರವಿದೆ, ಉತ್ತಮ ಶಿಕ್ಷಣ ಸಂಸ್ಥೆಗಳಿವೆ. ನಾವು ನಮ್ಮ ಏಳಿಗೆಗೆ ಇನ್ನು ಸ್ವಲ್ಪವೇ ಶ್ರಮ ಹಾಕಿದರೆ ಅವರಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಏಳಿಗೆ ಹೊಂದಬಹುದು (ಪಕೃತಿಯನ್ನ ಹಾಳು ಮಾಡದೆ, ಪ್ರಕೃತಿಯನ್ನ ಹಾಳುಮಾಡಿ ಆಗುವ ಅಭಿವೃದ್ಧಿ ಅಭಿವೃದ್ಧಿಯೇ ಅಲ್ಲವೆಂದು ನನ್ನ ಅನಿಸಿಕೆ). ಹಾಗಂತ ಕ್ಯಾಲಿಫೋರ್ನಿಯಾ 100% ಪರಿಪೂರ್ಣ ಅಂತ ಅಲ್ಲ. ಇಲ್ಲೂ ಬಡತನ, ಅಸಮಾನತೆಯಂತ ಸಮಸ್ಯೆಗಳು ಇವೆ. ಆದರೆ ಅವರು ಸಾಧಿಸಿದ ಏಳಿಗೆಯ ಮುಂದೆ ಅವೆಲ್ಲಾ ಚಿಕ್ಕದಾಗಿಬಿಡುತ್ತವೆ. ಅದಕ್ಕೆ ನಾನ್ಯಾವತ್ತೂ ಭವಿಷ್ಯದ ಕರ್ನಾಟಕ ವರ್ತಮಾನದ ಕ್ಯಾಲಿಫೋರ್ನಿಯಾದಂತಿರಲಿ ಎಂದು ಅಂದುಕೊಳ್ಳುತ್ತೇನೆ.
ವಿ.ಸೂ:- ಪಟದಲ್ಲಿರುವುದು ಯೂಸಮಿಟಿ ಕಣಿವೆಯ ದೃಷ್ಯ. ಅಲ್ಲಿ ಕಾಣುವ ಆ ಜಲಪಾತ ಜೋಗ ಜಲಪಾತದ ಎರಡಷ್ಟಿದೆ ಅಂದರೆ ಅವುಗಳ ಎತ್ತರ ಮತ್ತು ವಿಸ್ತಾರವನ್ನ ಊಹಿಸಿಕೊಳ್ಳಿ.
-ಗಿರಿಧರ್ ಗುಂಜಗೋಡು
ಸಾಫ್ಟವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ದಾಪುರ
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











