ವಿಶ್ವ ಕ್ರಿಕೆಟ್ ಗೆ ಟೀಮ್ ಇಂಡಿಯಾ ಕ್ರಿಕೆಟ್ ಗುರು….!
ಗೆಲುವು… ಯಾವತ್ತೂ ಹಾಗೇ ಸುಮ್ಮನೆ ಒಲಿದು ಬರುವುದಿಲ್ಲ. ಅಲ್ಲಿ ಅವಮಾನವಿರುತ್ತೆ. ನೋವಿರುತ್ತೆ.. ಹತಾಶೆ ಇರುತ್ತೆ. ಸೋಲಿರುತ್ತೆ.. ಟೀಕೆ ಟಿಪ್ಪಣಿಗಳಿರುತ್ತೆ.. ಹಿಯಾಳಿಕೆಯ ಮಾತುಗಳಿರುತ್ತೆ.. ಆದ್ರೆ ಇದನ್ನೆಲ್ಲಾ ಮೆಟ್ಟಿ ನಿಂತು ಮುಖದಲ್ಲಿ ಮಂದಾಹಾಸದ ನಗು ಬೀರಿದಾಗ ಆಗುವಂತಹ ಖುಷಿ ಇದೆಯಲ್ವಾ ಅದನ್ನು ಬಣ್ಣಿಸಲು ಸಾಧ್ಯವಿಲ್ಲ.
ಹೌದು, ಆಸ್ಟ್ರೇಲಿಯಾದ ಬ್ರಿಸ್ಬೇನ್ ನ ಗಬ್ಬಾ ಮೈದಾನದಲ್ಲಿ ಟೀಮ್ ಇಂಡಿಯಾ ಹುಡುಗರಿಗೂ ಆಗಿದ್ದು ಕೂಡ ಇದೇ ಅನುಭವ. ರಹಾನೆ ಹುಡುಗರ ಗೆಲುವಿನ ಆಲಾಪಣೆಯನ್ನು ವರ್ಣಿಸಲು ಸಾಧ್ಯವಿಲ್ಲ. ಆಸ್ಟ್ರೇಲಿಯನ್ನರು ಕನಸಿನಲ್ಲೂ ಈ ರೀತಿಯ ಸೋಲು ಅನುಭವಿಸುತ್ತೇವೆ ಅಂತ ಅಲೋಚನೆ ಕೂಡ ಮಾಡಿರಲಿಕ್ಕಿಲ್ಲ. ಆದ್ರೆ ಟೀಮ್ ಇಂಡಿಯಾ ಹುಡುಗರು ಗೆಲುವಿಗಾಗಿ ಆರಾಧನೆ ಮಾಡಿದ್ರು.
ಮೊದಲ ಟೆಸ್ಟ್ ನ ಹೀನಾಯ ಸೋಲಿನ ಅಪಮಾನ.. ಎರಡನೇ ಟೆಸ್ಟ್ ನಲ್ಲಿ ಸೇಡು ತೀರಿಸಿಕೊಂಡ ಗೆಲುವು.. ಮೂರನೇ ಟೆಸ್ಟ್ ನಲ್ಲಿ ಸೋಲಲೇಬಾರದು ಅನ್ನೋ ಹಠ.. ಇದ್ರ ನಡುವೆ, ಮಾತಿನ ಚಕಮಕಿ, ಟೀಕೆ, ಆರೋಪ, ಕುತಂತ್ರ, ಗಾಯದ ನೋವು, ಅನುಭವದ ಕೊರತೆ, ಹೀಗೆ ಇನ್ನೇನೂ ಸರಣಿ ಕೈ ಜಾರಿ ಹೋಗುತ್ತೆ.. ಮತ್ತೊಂದು ಸರಣಿ ಸೋಲಿನ ಆತಂಕದಲ್ಲೇ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಹಾನೆ ಬಳಗ ಕಣಕ್ಕಿಳಿದಿತ್ತು.
ಅದಕ್ಕೆ ತಕ್ಕಂತೆ ಮೊದಲ ಇನಿಂಗ್ಸ್ ನ ಹಿನ್ನೆಡೆ, ಗೆಲುವಿಗಾಗಿ ಕಠಿಣ ಸವಾಲು.. ಟೀಮ್ ಇಂಡಿಯಾ ಮುಂದೆ ಇದ್ದದ್ದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೊಂದೇ ದಾರಿ.
ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿಕೊಂಡು ಐದನೇ ದಿನ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾಗೆ ಶುಬ್ಮನ್ ಗಿಲ್ ಗೆಲುವಿನ ಆಸೆ ಮೂಡುವಂತೆ ಬ್ಯಾಟಿಂಗ್ ಮಾಡಿದ್ದರು. ರೋಹಿತ್ ಶರ್ಮಾ ವಿಕೆಟ್ ಬೇಗನೇ ಕಳೆದುಕೊಂಡ್ರೂ ಚೇತೇಶ್ವರ ಪೂಜಾರ ಅಳೆದು ತೂಗಿ ಬ್ಯಾಟ್ ಮಾಡುತ್ತಾ ರನ್ ದಾಖಲಿಸಿದ್ರು. ರಹಾನೆ ಗೆಲುವಿಗಾಗಿ ಬ್ಯಾಟಿಂಗ್ ಮಾಡಲು ಹೋಗಿ ಬೇಗನೇ ಔಟಾದ್ರು.
ಆದ್ರೆ ರಿಷಬ್ ಪಂತ್ ಎಲ್ಲವನ್ನೂ ಉಲ್ಟಪಲ್ಟಾ ಮಾಡಿಬಿಟ್ಟಿದ್ದರು. ಒಂದೆರಡು ಜೀವದಾನ ಪಡೆದುಕೊಂಡ ಪಂತ್, ಆಸ್ಟ್ರೇಲಿಯನ್ನರ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ರು. ವಾಷಿಂಗ್ಟನ್ ಸುಂದರ್ ಸಮಯೋಚಿತ ಆಟದಿಂದ ಆಸ್ಟ್ರೇಲಿಯನ್ನರು ಸೋಲಿನ ದವಡೆಗೂ ಸಿಲಕಿದ್ರು.
ಅಷ್ಟಕ್ಕೂ ಆಗಿದ್ದೇನು… ಆಸ್ಟ್ರೇಲಿಯನ್ನರು ಯಂಗ್ ಇಂಡಿಯಾವನ್ನು ಲಘುವಾಗಿ ಪರಿಗಣಿಸಿದ್ರು. ಸ್ಲೆಡ್ಜಿಂಗ್ ಮಾಡಿ ಟೀಮ್ ಇಂಡಿಯಾವನ್ನು ಸೋಲಿಸಬಹುದು ಎಂದು ಅಂದು ಕೊಂಡಿದ್ದ ಆಸ್ಟ್ರೇಲಿಯಾ ಆಟಗಾರರಿಗೆ ಟೀಮ್ ಇಂಡಿಯಾದ ಬಿಸಿ ರಕ್ತದ ಹುಡುಗರು ತಕ್ಕ ಉತ್ತರ ನೀಡಿದ್ರು.
ಹಾಗೇ ನೋಡಿದ್ರೆ, ಟೀಮ್ ಇಂಡಿಯಾದ ಟೆಸ್ಟ್ ತಂಡ ಅನುಭವಿ ತಂಡವಲ್ಲ. ಎಲ್ಲಾ ಹೊಸ ಹುಡುಗರು.. ರೋಹಿತ್ , ರಹಾನೆ, ಪೂಜಾರ ಬಿಟ್ರೆ ಅನುಭವಿ ಆಟಗಾರರೇ ಇಲ್ಲ. ಆದ್ರೆ ಸೋಲು, ಅವಮಾನಕ್ಕೆ ಸೇಡು ತೀರಿಸಿಕೊಳ್ಳಬೇಕು ಅನ್ನೋ ಹಠ, ಛಲ ಮಾತ್ರ ಪ್ರತಿ ಆಟಗಾರರಲ್ಲೂ ಇತ್ತು. ಇದೇ ಟೀಮ್ ಇಂಡಿಯಾದ ಗೆಲುವಿನ ಗುಟ್ಟು..
ರಹಾನೆ ಅನ್ನೋ ಕೂಲ್ ಕ್ಯಾಪ್ಟನ್ ನ ರಣತಂತ್ರದ ಜೊತೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಮೆಚ್ಚಲೇಬೇಕು. ಮಹಮ್ಮದ್ ಸಿರಾಜ್, ನಟರಾಜನ್, ಸೈನಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್ ನಂತಹ ಅನನುಭವಿ ಬೌಲರ್ ಗಳು, ಪಂತ್, ಗಿಲ್, ಮಯಾಂಕ್ ಅಗರ್ ವಾಲ್ ನಂತಹ ಯವ ಬ್ಯಾಟ್ಸ್ ಮೆನ್ ಗಳು, ರೋಹಿತ್ ಮತ್ತು ಪೂಜಾರ ಬ್ಯಾಟಿಂಗ್ ಅನುಭವವನ್ನು ನಂಬಿಕೊಂಡು ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲಿಸಿದ್ದ ರೀತಿ ಮಾತ್ರ ಅನನ್ಯ.
ಟೀಮ್ ಇಂಡಿಯಾದ ಯಶಸ್ಸಿನ ಹಿಂದಿದೆ ಕನ್ನಡಿಗರ ಶ್ರಮ…!
ಅಂದ ಹಾಗೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ವಿಜಯ ಸಾಧಿಸಿರಬಹುದು. ಏಕದಿನ ಸರಣಿಯಲ್ಲಿ ಸೋಲು ಕಂಡ್ರೂ ಟಿ-ಟ್ವೆಂಟಿ ಮತ್ತು ಟೆಸ್ಟ್ ಸರಣಿಯ ಗೆಲುವಿನ ಹಿಂದೆ ಕನ್ನಡಿಗರ ಕೊಡುಗೆ ಅಪಾರ.
ನಿಜ, ಯಂಗ್ ಟೀಮ್ ಇಂಡಿಯಾ ಆಟಗಾರರ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಹೊಸ ಸ್ವರೂಪ ಕೊಟ್ಟಿದ್ದು ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್. ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಬಹುತೇಕ ಆಟಗಾರರು ಇಂದು ಟೀಮ್ ಇಂಡಿಯಾದಲ್ಲಿ ಮಿಂಚು ಹರಿಸುತ್ತಿದ್ದಾರೆ. ಗುರು ದ್ರಾವಿಡ್ ನ ಮಾರ್ಗದರ್ಶನ, ನಿಸ್ವಾರ್ಥ ಮನಸ್ಸು ಟೀಮ್ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸುನೀಲ್ ಜೋಶಿಗೆ ವರದಾನವಾಗಿತ್ತು.
ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಬೆಂಚ್ ಸ್ಟ್ರೆಂತ್ ತುಂಬಾನೇ ವೀಕ್ ಆಗಿರುತ್ತಿತ್ತು. ಕಾರಣ ಆಂತರಿಕ ಲಾಬಿ ಕೂಡ. ಆದ್ರೆ ಜೋಶಿ ಹಾಗೇ ಮಾಡಲಿಲ್ಲ. ಆಡುವ 11ರ ಬಳಗದಷ್ಟೇ ಪ್ರತಿಭಾನ್ವಿತ ಆಟಗಾರರನ್ನು ಬೆಂಚ್ ಸ್ಟ್ರೇಂತ್ ಮಾಡಿಕೊಂಡ್ರು. ಗಾಯದ ಸಮಸ್ಯೆ ಬಂದ್ರೂ ಅವರ ಸ್ಥಾನವನ್ನು ತುಂಬುವಂತಹ ಆಟಗಾರರನ್ನು ಆಯ್ಕೆ ಮಾಡಿದ್ರು. ಇದು ಅಂತಿಮವಾಗಿ ಫಲ ಕೊಟ್ಟಿತ್ತು.
ಹಾಗೇ ಒಂದು ಮಾತು.. ಸಾಮಾನ್ಯವಾಗಿ ಕ್ರಿಕೆಟ್ ಅನ್ನೋದು ಶ್ರೀಮಂತರ ಆಟ ಅನ್ನೋ ಮಾತಿದೆ. ಆದ್ರೆ ಅದೆಲ್ಲಾ ಸುಳ್ಳು ಅನ್ನೋದು ಕಾಲ ಕಾಲಕ್ಕೆ ಸಾಬೀತಾಗುತ್ತಿದೆ. ಟೀಮ್ ಇಂಡಿಯಾದಲ್ಲಿ ಆಡುವಂತಹ ಬಹುತೇಕ ಆಟಗಾರರು ಮಧ್ಯಮ ಹಾಗೂ ಬಡ ಕುಟುಂಬದಿಂದ ಬಂದವರು. ಕ್ರಿಕೆಟ್ ಆಡಿ ಶ್ರೀಮಂತರಾಗುತ್ತಿದ್ದಾರೆ. ಬಡತನದ ಬವನೆಯಲ್ಲಿ ಬದುಕು ಕಟ್ಟಿಕೊಂಡ ಹುಡುಗರು ಟೀಮ್ ಇಂಡಿಯಾ ಆಸ್ತಿಯಾಗುತ್ತಿದ್ದಾರೆ. ಒಂದೊಂದು ಅವಕಾಶಕ್ಕಾಗಿ ತಾಳ್ಮೆಯಿಂದ ಕಾದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್.
ಐಪಿಎಲ್ ಅನ್ನೋ ಚಿನ್ನದ ಮೊಟ್ಟೆ ಆಟಗಾರರಿಗೆ ದುಡ್ಡು ಮಾತ್ರ ಕೊಟ್ಟಿಲ್ಲ. ಹೆಸರು, ಜನಪ್ರಿಯತೆಗಿಂತ ಹೆಚ್ಚಾಗಿ ಪ್ರತಿಭೆಗೆ ಮನ್ನಣೆ ಕೊಟ್ಟಿದೆ. ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನ ಸ್ವರೂಪವನ್ನು ಬದಲಾಯಿಸಿರುವ ಐಪಿಎಲ್ ಟೆಸ್ಟ್ ಕ್ರಿಕೆಟ್ ಗೂ ಹೊಸ ರೂಪವನ್ನು ಕೊಟ್ಟಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯನ್ನು ಗಮನಿಸಿದಾಗ ಟೆಸ್ಟ್ ಕ್ರಿಕೆಟ್ ಬೋರ್ ಅಂತ ಹೇಳುವ ಹಾಗಿಲ್ಲ. ಅಷ್ಟೊಂದು ರೋಚಕತೆಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
ಕಡೆಯದಾಗಿ, ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸುವುದು ಸುಲಭದ ಮಾತಲ್ಲ. ಆಸ್ಟ್ರೇಲಿಯನ್ನರ ತಂತ್ರಗಾರಿಕೆ, ಗೇಮ್ ಪ್ಲಾನ್ ಉಳಿದ ತಂಡಗಳಿಗಿಂತ ಭಿನ್ನವಾಗಿರುತ್ತೆ. ಗೆಲುವಿಗಾಗಿ ಅವರು ಏನು ಬೇಕಾದ್ರೂ ಮಾಡಲು ರೆಡಿ ಇರುತ್ತಾರೆ. ಆಕ್ರಮಣಕಾರಿ ಆಟದ ಜೊತೆ ಸ್ಲೆಡ್ಜಿಂಗ್ ಮಾಡುತ್ತಾ ಎದುರಾಳಿ ಆಟಗಾರರ ಏಕಾಗ್ರತೆಯನ್ನು ಭಂಗ ಮಾಡುತ್ತಾರೆ. ಬಾಡಿ ಲೈನ್ ಬೌಲಿಂಗ್ ಮಾಡುತ್ತಾ ಬ್ಯಾಟ್ಸ್ ಮೆನ್ ಗಳನ್ನು ದಂಗುಬಡಿಸುತ್ತಾರೆ. ಇಂತಹ ಅಪಾಯಕಾರಿ ತಂಡದ ಎದುರು ಕೆಚ್ಚೆದೆಯಿಂದ ನಿಂತು ಆಡುವಂತಹ ಟೀಮ್ ಇಂಡಿಯಾ ಆಟಗಾರರು 56 ಇಂಚಿಗೇನೂ ಕಮ್ಮಿ ಏನಿಲ್ಲ.
ಒಟ್ಟಿನಲ್ಲಿ ಭಾರತ ಬದಲಾಗುತ್ತಿದೆ. ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ಗೆ ಗುರು ಎಂಬುದರಲ್ಲಿ ಎರಡು ಮಾತಿಲ್ಲ. ಅದು ದುಡ್ಡು, ಅಧಿಕಾರ ಮತ್ತು ಆಟದಲ್ಲಿ… ಎಲ್ಲದರಲ್ಲೂ ಮಾದರಿ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










