ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ‘ಲಕ್ಷದ್ವೀಪ’..!
ಲಕ್ಷದ್ವೀಪ.. ಭಾರತದ ದಕ್ಷಿಣಕ್ಕೆ ಅರಬ್ಬೀ ಸಮುದ್ರದಲ್ಲಿರುವ ಸುಂದರ ದ್ವೀಪ ಸಮೂಹ. ಈ ದ್ವೀಪಸಮೂಹ ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ 32ಚದರ ಕಿ.ಮೀ.ಗಳು. ಇವು 4,200ಚ. ಕಿ. ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ.
ಲಕ್ಷದ್ವೀಪವು ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದು ಸಾಕಷ್ಟು ಭಾರತೀಯ ಸೇನಾ ಕಚೇರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ನಡುಗಡ್ಡೆಗಳ ಸಮೂಹವು ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕ ಪುಟ್ಟ ಭೂಪ್ರದೇಶಗಳನ್ನು ಹೊಂದಿದ್ದು ಮಾರ್ಮಿಕವಾಗಿ ಲಕ್ಷದ್ವೀಪಗಳಿಂದ ಕೂಡಿರುವಂತೆ ಕಾಣುವುದರಿಂದ ಇದಕ್ಕೆ ಲಕ್ಷದ್ವೀಪ ಎಂಬ ಹೆಸರು ಬಂದಿದೆ. ಇನ್ನು, ಏಳನೇಯ ಶತಮಾನದಲ್ಲಿ ಇಸ್ಲಾಂ ಧರ್ಮಪ್ರಚಾರಕರು ಇಲ್ಲಿಗೆ ಬಂದು ತಮ್ಮ ಧರ್ಮದ ಪ್ರಭಾವ ಬೀರಿದರು.
ಟಿಪ್ಪು ಸುಲ್ತಾನನ ವಶದಲ್ಲಿತ್ತು ಈ ಪ್ರದೇಶ..!
ಪೋರ್ಚುಗೀಸರು ಹಾಗೂ ಮಧ್ಯಕಾಲೀನದಲ್ಲಿ ಚೋಳ ಸಾಮ್ರಾಜ್ಯವೂ ಇಲ್ಲಿ ಆಡಳಿತ ನಡೆಸಿತ್ತೆಂದು ತಿಳಿದುಬರುತ್ತದೆ. ತದನಂತರ ಟಿಪ್ಪು ಸುಲ್ತಾನನ ಕೈವಶವಾಗಿ ಕೊನೆಯದಾಗಿ ಬ್ರಿಟಿಷರ ಆಡಳಿತಕ್ಕಿದು ಒಳಪಟ್ಟಿತು. ಬ್ರಿಟಿಷರು ಭಾರತವನ್ನು ತೊರೆದ ನಂತರ ಈ ನಡುಗಡ್ಡೆಗಳ ಸಮೂಹವು ಸ್ವತಂತ್ರ ಭಾರತದ ಅಧೀನಕ್ಕೊಳಪಟ್ಟು ನಂತರ ಇದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಯಿತು. ಇಲ್ಲಿಯ ಜನರ ಧರ್ಮದ ಬಗ್ಗೆ ಅನೇಕ ಕಥೆಗಳಿದ್ದು, ಕೇರಳದ ಕೊಚ್ಚಿಯ ಕೊನೆಯ ರಾಜ ಚೆರಮಾನ್ ಪೆರುಮಾಳ್ ದ್ವೀಪಕ್ಕೆ ಬಂದಾಗ ಅರಬ್ ವ್ಯಾಪಾರಿಗಳ ಪ್ರಭಾವಕ್ಕೆ ಒಳಗಾಗಿ ಮತಾಂತರವಾಗಿದ್ದಾನೆ ಎಂಬುದು ಅವುಗಳಲ್ಲಿ ಒಂದು.
ಇಲ್ಲಿಯ ಮುಖ್ಯ ದ್ವೀಪಗಳೆಂದರೆ ಕವರಟಿ, ಕಲ್ಪೇನಿ, ಮಿನಿಕಾಯ್, ಅಗಟಿ, ಕಡಮಟ್ಟಿ, ತಿನ್ನಿಕಾರ್ ಮತ್ತು ಬಂಗಾರಂ. ಪ್ರಮುಖ ದ್ವೀಪವಾದ ಕೊಡಮಾಟ್ ಅನ್ನು ಹಿಂದೆ ಲಖ್ದೀವ್ ಮಿನಿಕಾಯ್ ದ್ವೀಪವೆಂದು ಕರೆಯುತ್ತಿದ್ದರು.
ಲಕ್ಷದ್ವೀಪ ಅನೂಹ್ಯ ನೈಸರ್ಗಿಕ ಸೌಂದರ್ಯ ಮತ್ತು ಅಪ್ಪಟ ಸ್ಪಟಿಕದಂತದ ಸಮುದ್ರ ತೀರಗಳಿಗಾಗಿ ಪ್ರಸಿದ್ದಿ ಪಡೆದಿದೆ. ಹೀಗಾಗಿ ಇಲ್ಲಿ ಸದಾ ಪ್ರವಾಸಿಗರು ಆಗನಿಸುತ್ತಿರುತ್ತಾರೆ. ಹಡಗಿನಲ್ಲಿ ಸುಮಾರು ಒಂದು ದಿನ ಪಯಣಿಸಿ ಅಥವಾ ಚಿಕ್ಕ ವಿಮಾನದಲ್ಲಿ ಮಾತ್ರವೇ ಇಲ್ಲಿ ಬರಬಹುದು. ಕಡಿಮೆ ಸ್ಥಳ ಇರುವ ಕಾರಣದಿಂದಲೇ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆಗೆ ಮಿತಿ ಇರುತ್ತದೆ. ಹಾಗಾಗಿ, ಅಧಿಕೃತ ಪ್ರವಾಸಿ ಏಜೆಂಟರ ಮೂಲಕವೇ ಇಲ್ಲಿ ಬರಬೇಕಾಗುತ್ತದೆ. ಇದಕ್ಕಾಗಿ ಕೊಚಿನ್ ನಗರದಲ್ಲಿರುವ ಕಚೇರಿಯಲ್ಲಿ ಪ್ರವಾಸಿಗರಾಗಿ ನೊಂದಾಯಿಸಿಕೊಂಡು ಅಧಿಕೃತ ಪರವಾನಗಿಯ ಮೂಲಕವೇ ಪ್ರಯಾಣಿಸಬೇಕು.
ಆಲೆಪ್ಪಿ…ದೋಣಿಮನೆಗಳು ಪ್ರವಾಸಿಗರ ಹಾಟ್ ಫೇವ್ರೇಟ್..! ಈ ಸ್ಥಳದ ವಿಶೇಷತೆಗಳು ಸಾಕಷ್ಟಿವೆ..!
ಇಲ್ಲಿ ಎಳನೀರು ಭಾರೀ ಅಗ್ಗ..!!
ಇಲ್ಲಿ ಬಾವಿ ತೋಡಿದರೂ ಸಿಗುವುದು ಉಪ್ಪು ನೀರು. ಹಾಗಾಗಿ ತಾಜಾ ನೀರಿಗೆ ಇಲ್ಲಿ ಸದಾ ಆಭಾವ. ಮಿನರಲ್ ನೀರು ಬೇಕಿದ್ದರೆ 403 ಕಿ.ಮೀ. ದೂರದ ಕೊಚ್ಚಿನ್ ನಗರದಿಂದಲೇ ಬರಬೇಕು. ಹಾಗಾಗಿ ನೀರು ಇಲ್ಲಿ ದುಬಾರಿ. ಬದಲಿಗೆ, ಇಲ್ಲಿ ಸದಾ ದೊರಕುವ ಎಳನೀರನ್ನೇ ಜನರು ನೀರಿನ ಬದಲಾಗಿ ಕುಡಿಯುತ್ತಾರೆ. ಅಂಗಡಿಗಳಲ್ಲಿಯೂ ಸದಾ ಎಳನೀರು ದೊರಕುತ್ತದೆ.
ಇಲ್ಲಿ ಕಳ್ಳತನ ನಡೆಯುವುದೇ ಇಲ್ಲ..!
ಇಲ್ಲಿ ನೀವೇನಾದರೂ ಪ್ರವಾಸಕ್ಕೆ ತೆರಳುವುದಾದರೆ ನಿಮ್ಮ ವಸ್ತುಗಳು ಕಳ್ಳತನವಾಗುವ ಬಗ್ಗೆ ಟೆನ್ಷನ್ ಬಿಟ್ಟುಬಿಡಿ. ಇಲ್ಲಿ ಕಳ್ಳತನಕ್ಕೆ ಅವಕಾಶವೇ ಇಲ್ಲ.
ಇನ್ನು, ಲಕ್ಷದ್ವೀಪದ ಮುಖ್ಯ ಆಕರ್ಷಣೆ ಇಲ್ಲಿನ ಪೂರ್ವತೀರದ ಅಟ್ಟಾಲ್ ಗಳಾಗಿವೆ. ಇವು ಹೆಚ್ಚಿನಂಶ ಮೊಣಕಾಲಿನಷ್ಟೇ ಆಳದಲ್ಲಿದ್ದು ಇಲ್ಲಿ ನೂರಾರು ಬಗೆಯ ಹವಳಗಳಿವೆ. ಇವು ಗಾಜಿನಂತೆ ಮುರಿದರೆ ತೀವ್ರ ಹರಿತವಾದ ಅಂಚಿನ ಕತ್ತಿಯಂತಿದ್ದು ಇದರ ಮೇಲೆ ಕಾಲಿಟ್ಟರೆ ಕಾಲು ಕುಯ್ದು ಹೋಗುತ್ತದೆ. ಹಾಗಾಗಿ, ಹವಳಗಳ ಮೇಲೆ ಕಾಲಿಡುವುದು ಅಪಾಯಕರ. ಅಷ್ಟೇ ಅಲ್ಲ ಭಾರತ ಸರ್ಕಾರ ಈ ಹವಳಗಳನ್ನು ಕೀಳುವುದನ್ನಾಗಲಿ ಕೊಂಡು ಹೋಗುವುದನ್ನಾಗಲಿ ನಿಷೇಧಿಸಿದೆ. ಅದರಲ್ಲೂ ಉದ್ದೇಶಪೂರ್ವಕವಾಗಿ ಹವಳಗಳಿಗೆ ಹಾನಿ ಎಸಗುವುದು ಕಂಡು ಬಂದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಕಯಾಕ್ಸ್, ವಿಂಡ್ ಸರ್ಫರ್ಗಳು ಮತ್ತು ನೌಕಾಯಾನ ದೋಣಿಗಳು ಬಾಡಿಗೆಗೆ ಲಭ್ಯವಿದೆ. ಡಾಲ್ಫಿನ್ ಡೈವ್ ಸೆಂಟರ್ ಸ್ಕೂಬಾ ಡೈವ್ ಅನ್ನು ಇಷ್ಟಪಡುವವರಿಗೆ ಆಕರ್ಷಣೆಯಾಗಿದೆ. ಈ ಹವಳದ ಸ್ವರ್ಗಕ್ಕೆ ಭೇಟಿ ನೀಡಲು ಕೋರಲ್ ರೀಫ್ ಮತ್ತು ತಾರತಾಶಿ ಪ್ರವಾಸಿ ಪ್ಯಾಕೇಜ್ಗಳನ್ನು ಪಡೆಯಬಹುದು. ಮಂಗಳೂರು ಮತ್ತು ಕೊಚ್ಚಿನ್ ನಿಂದ ಲಕ್ಷದ್ವೀಪ ಕ್ಕೆ ಕ್ರೂಸ್ ಮೂಲಕ ಒಂದು ರಾತ್ರಿ ಪ್ರಯಾಣ ಮಾಡಿ ತೆರಳಬಹುದು. ಇನ್ನು ದೇಶದ ಕೆಲವು ನಗರಗಳಿಂದ ಇಲ್ಲಿಗೆ ವಿಮಾನ ಸೌಕರ್ಯವಿದೆ.








