ಮನ್ ಕೀ ಬಾತ್ – ಒಲಂಪಿಕ್ಸ್ , ಆತ್ಮ ನಿರ್ಭರ ಭಾರತ್ , ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮೋದಿ ಮಾತು..!
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ 79ನೇ ಸಂಚಿಕೆಯ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನ ಉದ್ದೇಶಿಸಿ ಹಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಟೋಕಿಯೋ ಒಲಿಂಪಿಕ್ಸ್ ಬಗ್ಗೆ ಮಾತನಾಡಿರುವ ನಮೋ , ಒಲಂಪಿಕ್ಸ್ ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ನೀವು ಸ್ಪೂರ್ತಿ ತುಂಬಿ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಇನ್ನು ಆಗಸ್ಟ್ 15ರಂದು ಎಷ್ಟು ಜನರು ಸಾಧ್ಯವೋ ಅಷ್ಟು ಜನರು ಸೇರಿಕೊಂಡು ರಾಷ್ಟ್ರಗೀತೆಯನ್ನು ಹಾಡಿ. ರಾಷ್ಟ್ರಗಾನ ಡಾಟ್ ಕಾಮ್ ಮೂಲಕದನ್ನು ರೆಕಾರ್ಡ್ ಮಾಡಲು ಅವಕಾಶವನ್ನು ನೀಡಲಾಗಿದೆ. ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ. ಆತ್ಮ ನಿರ್ಭರ ಭಾರತ್ ನಮ್ಮ ಕನಸು ಅದನ್ನು ನಾವೆಲ್ಲರೂ ಸಾಕಾರಗೊಳಿಸೋಣ ನೀವು ಕೈಮಗ್ಗದ ಬಟ್ಟೆ ಖರೀದಿ ಮಾಡಿದರೆ ದೇಶದ ಬಡ ಜನರಿಗೆ ನೆರವಾಗಲಿದೆ. ಖಾದಿ ಮಳಿಗೆಯಲ್ಲಿ ಒಂದು ದಿನದಲ್ಲಿ 1 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂಬುದನ್ನು ತೋರಿಸಿದ್ದೀರಿ.
ಅಮೃತ ಮಹೋತ್ಸವ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಲ್ಲ. ಇದು ದೇಶದ ಎಲ್ಲಾ ಜನರ ಕಾರ್ಯಕ್ರಮವಾಗಿದೆ. ನಿಮಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾತ್ರಂತ್ರ್ಯ ಸೇನಾನಿಗಳನ್ನು ನೆನಪಿಸಿಕೊಳ್ಳಿ ಎಂದು ಮೋದಿ ಮನವಿ ಮಾಡಿದರು. ಮನ್ ಕೀ ಬಾತ್ ಆಲಿಸುತ್ತಿರುವ ಯುವ ಜನರಿಗೆ ನಾನು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಒಂದು ಸಮೀಕ್ಷೆಯ ಪ್ರಕಾರ 35 ವರ್ಷದೊಳಗಿನ ಹೆಚ್ಚು ಜನರು ಮನ್ ಕೀ ಬಾತ್ ಹೆಚ್ಚು ಕೇಳುತ್ತಾರೆ ಎಂಬುದು ತಿಳಿದು ಬಂದಿದೆ.
ಮನ್ ಕೀ ಬಾತ್ ನಲ್ಲಿ ನಾವು ದೇಶದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುತ್ತೇವೆ. ಇಲ್ಲಿ ಹೊಸ ಹೊಸ ಉದ್ಯಮದ ಐಡಿಯಾಗಳು ಸಿಗುತ್ತವೆ. ಯುವಕರು ಈ ಮೂಲಕ ಪ್ರೇರಿತರಾಗಿ ಕಾರ್ಯ ನಿರ್ವಹಣೆ ಮಾಡಲು ಅನುಕೂಲವಾಗಿದೆ. ಬಳಿಕ ಕಾರ್ಗಿಲ್ ದಿನಾಚರಣೆ ಕುರಿತು ಮಾತನಾಡಿದ ಮೋದಿ ಅವರು , ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ. ಈ ಯುದ್ಧವು ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಿಸ್ತಿನ ಸಂಕೇತವಾಗಿದೆ, ಇಡೀ ವಿಶ್ವವೇ ಇದಕ್ಕೆ ಸಾಕ್ಷಿಯಾಗಿದೆ. ಕಾರ್ಗಿಲ್ ಯುದ್ಧ ಕುರಿತ ರೋಮಾಂಚಕ ಕಥೆಯನ್ನು ನೀವು ಓದಬೇಕೆಂದು ನಾನು ಬಯಸುತ್ತೇನೆ. ಕಾರ್ಗಿಲ್ ಯುದ್ಧದ ಎಲ್ಲಾ ಧೈರ್ಯಶಾಲಿ ಹೃದಯಗಳಿಗೆ ನಾವೆಲ್ಲರೂ ನಮಸ್ಕರಿಸೋಣ ಎಂದು ಹೇಳಿದ್ದಾರೆ.
ಅಲ್ಲದೇ ಮನ್ ಕಿ ಬಾತ್ಗೆ ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರಲ್ಲಿ ಶೇ.75% ರಷ್ಟು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಆಗಿದ್ದಾರೆಂಬುದು ನಮ್ಮ ಸರ್ಕಾರ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಇದೇ ವೇಳೆ ನಾವು ತಂತ್ರಜ್ಞಾನದ ವಿಚಾರದ ಬಗ್ಗೆ ಮಾತನಾಡುತ್ತೇವೆ. ಮದ್ರಾಸ್ ಐಐಟಿಯ ವಿದ್ಯಾರ್ಥಿಗಳು 3ಡಿ ಪ್ರಿಂಟಿಂಗ್ ಯೂನಿಟ್ ಸ್ಥಾಪನೆ ಮಾಡಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನದಿಂದ ಕೆಲಸಗಳು ಬೇಗ ನಡೆಯುತ್ತಿವೆ ಎಂದು ಹೇಳಿದರು. ನಾವು ಹೊಸದನ್ನು ಕಲಿಯಬೇಕಾದರೆ ಪ್ರಯೋಗಳನ್ನು ಮಾಡಬೇಕು. ರೈತರು, ಯುವಕರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ.
ಸೇಬು ಎಂದರೆ ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಕಣ್ಣಮುಂದೆ ಬರುತ್ತವೆ. ಆದರೆ ಇಂದು ಮಣಿಪುರದಲ್ಲಿಯೂ ಸೇಬು ಬೆಳೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ತರಬೇತಿ ಮುಗಿಸಿಕೊಂಡು ಬಂದು ಇಂದು ಸೇಬು ಬೆಳೆಯುತ್ತಿದ್ದಾರೆ. ಈಗ ಹಲವು ರೈತರು ಇವರಿಂದ ಪ್ರೇರಣೆ ಪಡೆದಿದ್ದಾರೆ. ಬಾಳೆ ಮರದ ನಾರಿನಿಂದ ಇಂದು ಹ್ಯಾಂಡ್ ಬ್ಯಾಗ್ ತಯಾರು ಮಾಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ಸಿಕ್ಕಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬಾಳೆಯ ವಿವಿಧ ಉತ್ಪನ್ನಗಳನ್ನು ಬಾಳೆ ಹಿಟ್ಟಿನಿಂದ ತಯಾರು ಮಾಡುತ್ತಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ..
ಇನ್ನೂ ಚಂಡೀಗಢದಲ್ಲಿ ವ್ಯಕ್ತಿಯೊಬ್ಬರು ಚಾಟ್ ಮಾರಾಟ ಮಾಡುತ್ತಾರೆ. ಕೋವಿಡ್ ಲಸಿಕೆ ಪಡೆದವರಿಗೆ ಅದೇ ದಿನ ಉಚಿತವಾಗಿ ಚೋಲೆ, ಪಟೋರೆ ನೀಡುತ್ತಿದ್ದಾರೆ. ಲಸಿಕೆ ಪಡೆದ ಸಂದೇಶ ತೋರಿಸಿದರೆ ಉಚಿತವಾಗಿ ಚಾಟ್ ಸಹಿಯಬಹುದಾಗಿದೆ. ತಮಿಳುನಾಡಿನ ರಾಧಿಕಾ ಗುಡ್ಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸೇವೆ ನೀಡಲು ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದಾರೆ. ಈಗ 6 ಅಂಬ್ಯುಲೆನ್ಸ್ ಇದೆ, ಆಕ್ಸಿಜನ್, ಸ್ಟ್ರೇಚ್ಚರ್ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಇದರಿಂದಾಗಿ ಮಹಿಳೆಯರು, ಬಡ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ..








