ರಾಷ್ಟ್ರ ರಾಜಧಾನಿ ಸೇರಿದಂತೆ ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗಳು ತುಂಬಿ ಹರಿಯುತ್ತದ್ದು ಭೂ ಕುಸಿತ ಉಂಟಾಗುತ್ತಿದೆ. ಹಿಮಾಚಲ ಪ್ರದೇಶ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಬಿಲಾಸ್ಪುರ್, ಸೋಲನ್, ಶಿಮ್ಲಾ, ಸಿರ್ಮೌರ್, ಉನಾ, ಹಮೀರ್ಪುರ್, ಮಂಡಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಅಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಬಿಯಾಸ್ ಹಾಗೂ ಉಹಲ್ ನದಿಗಳು ತುಂಬಿ ಹರಿಯುತ್ತಿವೆ. ಬಿಯಾಸ್ – ಸಟ್ಲೆಜ್ ಲಿಂಕ್ ಯೋಜನೆಯ ಪಾಂಡೋಹ್ ಆಣೆಕಟ್ಟೆಯ ನೀರನ್ನು ಕೂಡ ಹೊರಗೆ ಬಿಡಲಾಗಿದೆ. ಬಿಯಾಸ್ ನದಿಯ ಮೇಲಿದ್ದ ಸೇತುವೆಯೊಂದು ಕೊಚ್ಚಿ ಹೋಗಿದೆ. ಅಲ್ಲದೇ 100 ವರ್ಷಗಳಷ್ಟು ಹಳೆಯದಾದ ಪಾಂಡೋ ಸೇತುವೆ ಕೂಡ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಮಂಡಿ ಜಿಲ್ಲೆಯ ಬಿಯಾಸ್ ನದಿಯ ರಭಸಕ್ಕೆ ಆಟೋ ಬಂಜಾರ್ ಸಂಪರ್ಕಿಸುವ 40 ವರ್ಷಗಳ ಹಳೆಯ ಸೇತುವೆ ಕೊಚ್ಚಿ ಹೋಗಿದೆ. ಭಾರೀ ಮಳೆ ಮತ್ತು ತೀವ್ರ ಜಲಾವೃತದಿಂದಾಗಿ ಶಿಮ್ಲಾ ಕಲ್ಕಾ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.