ಮಣಿಪುರ : ಇಡೀ ದೇಶವೇ ತಲೆ ಕೆಳಗೆ ಮಾಡುವಂತಾಗಿದ್ದ ಅಮಾನವೀಯ ಘಟನೆಯೊದು ಮಣಿಪುರದಲ್ಲಿ (Manipur) ನಡೆದಿತ್ತು. ಪಾಪಿಗಳು, ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಗುರುವಾರ ಬೆಳಿಗ್ಗೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ತೌಲಬ್ ಜಿಲ್ಲೆಯಲ್ಲಿ ಆತನನ್ನು ಬಂಧಿಸಲಾಗಿದ್ದು, ಹುಯಿರೆಮ್ ಹೆರಾದಾಸ್ ಸಿಂಗ್ (32) ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಈತ ಹಸಿರು ಟೀ ಶರ್ಟ್ ಧರಿಸಿದ್ದ. ಈತ ಮಹಿಳೆಯೊಬ್ಬರನ್ನು ಎಳೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
77 ದಿನಗಳಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಘಟನೆಯಲ್ಲಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸೇನೆ ಫೀಲ್ಡ್ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಹೀಗಾಗಿ ಇಲ್ಲಿ ಹಲವಾರು ತಲೆ ತಗ್ಗಿಸುವಂತಹ ಘಟನೆಗಳು ಕೂಡ ನಡೆಯುತ್ತಿವೆ. ಹೀಗಾಗಿ ಇಡೀ ದೇಶವೇ ಈ ಘಟನೆಗೆ ಮಮ್ಮಲು ಮರಗುವಂತಾಗುತ್ತಿದೆ.
ಶಾಂತಿಭದ್ರತೆಯ ಕಾರಣದಿಂದ ಈ ವೀಡಿಯೋವನ್ನು ಯಾರೂ ಶೇರ್ ಮಾಡದಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಎಲ್ಲಾ ವೀಡಿಯೋಗಳನ್ನು ತೆಗೆದು, ನೆಲದ ಕಾನೂನು ಪಾಲಿಸುವಂತೆ ಟ್ವಿಟ್ಟರ್ ಸಂಸ್ಥೆಗೆ ಸೂಚಿಸಲಾಗಿದೆ.