ಹಾಸನ: ಇಲ್ಲಿಯ ಕೆ ಹೊಸಕೊಪ್ಪಲು ಬಡಾವಣೆಯಲ್ಲಿ ಬಾಡಿಗೆಗೆ ಇದ್ದ ದಂಪತಿಗಳು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಹೊಳೆನರಸೀಪುರ ತಾಲೂಕು ಮೂಲದ ದೇವರಾಜ್(45) ಹಾಗೂ ಮಂಜುಳ(35) ಕಳೆದ 15 ವರ್ಷಗಳ ಹಿಂದೆಯೇ ವಿವಾಹವಾಗಿದ್ದರು. ಇವರು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆನಂತರ ಊರಿಗೆ ಬಂದು ಮರಳಿ, ಹಾಸನದಲ್ಲೂ ಗಾರ್ಮೆಂಟ್ಸ್ನಲ್ಲೆ ಕೆಲಸ ಮಾಡುವ ಉದ್ದೇಶದಿಂದ ಫ್ಯಾಕ್ಟರಿ ಸಮೀಪವೇ ಮನೆ ಹುಡುಕಿ ಬಾಡಿಗೆಗೆ ಮನೆ ಪಡೆದಿದ್ದರು.
ಆದರೆ, ಇತ್ತೀಚೆಗೆ ದಿಢೀರ್ ಎಂದು ನಾಪತ್ತೆಯಾಗಿದ್ದರು. ಫೋನ್ ಮಾಡಿದರೂ ಸ್ವಿಚ್ ಆಫ್ ಆಗಿದೆ. ಎಲ್ಲೋ ಹೋಗಿರಬಹುದು ಎಂದು ಸಂಬಂಧಿಕರು ತಿಳಿದಿದ್ದರು. ಆದರೆ, ಮಾರ್ಚ್ 14ರಂದು ಮನೆಯೊಳಗಿಂದ ದುರ್ವಾಸನೆ ಬರಲು ಆರಂಭಿಸಿದಾಗ ಅನುಮಾನ ಮೂಡಿದೆ. ಕೂಡಲೇ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಬಡಾವಣೆ ಠಾಣೆ ಪೊಲೀಸರು ಪರಿಶೀಲಿಸಿದಾಗ ದೇವರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಮಂಚದ ಮೇಲೆ ಹೆಣವಾಗಿದ್ದಾರೆ.
ಕುಡಿತದ ದಾಸನಾಗಿದ್ದ ದೇವರಾಜ್ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಪತ್ನಿ ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.