ನಾಯಿ ಕೃತಜ್ಞ ಪ್ರಾಣಿ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. ಅದೇ ರೀತಿ ಇಲ್ಲೊಂದು ನಾಯಿ ಕೇರಳದ ಕಣ್ಣೂರು ಜಿಲ್ಲಾ ಆಸ್ಪತ್ರೆಯ ಶವಾಗಾರದ ಹೊರಗೆ ಸುಮಾರು ನಾಲ್ಕು ತಿಂಗಳಿನಿಂದ ತನ್ನ ಯಜಮಾನನಿಗಾಗಿ ಕಾಯುತ್ತ, ಅದನ್ನು ಮತ್ತೆ ಸಾಬೀತು ಪಡಿಸುತ್ತಿದೆ.
ಆದರೆ ನಾಯಿಯ ಮಾಲೀಕರನ್ನು ಗುರುತಿಸಲು ಮಾತ್ರ ಆಸ್ಪತ್ರೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ರೋಗಿಯೇ ಇದರ ಮಾಲೀಕ ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ಅದು ಶವಾಗಾರಕ್ಕೆ ಹೋಗುವ ರಾಂಪ್ ಮೇಲೆ ಕಾಯುತ್ತಿರುತ್ತದೆ ಎನ್ನಲಾಗುತ್ತಿದೆ.
ಮೊದಲಿಗೆ ಯಾರೂ ಇದನ್ನು ಗಮನಿಸಿರಲಿಲ್ಲ.
ಆದರೆ, ಅದು ನಾಲ್ಕು ತಿಂಗಳುಗಳಿಂದ ಅಲ್ಲಿಯೇ ಇರುವುದನ್ನು ಗಮನಿಸಿದ ಸಿಬ್ಬಂದಿ, ಇದು ಯಾರಿಗೋ ಕಾಯುತ್ತಿದೆ ಎಂದು ಅಂದಾಜಿಸಿದ್ದಾರೆ. ಮೊದಲು ನಾಯಿಯು ಯಾವುದೇ ಆಹಾರ ಸ್ವೀಕರಿಸುತ್ತಿರಲಿಲ್ಲ. ಆನಂತರ ಬಿಸ್ಕತ್ತು ಹಾಗೂ ಹಾಲನ್ನು ತಿನ್ನಲು ಶುರು ಮಾಡಿತು ಎನ್ನಲಾಗಿದೆ.