ಬೆಂಗಳೂರು: ಕುಡಿದ ಮತ್ತಿನಲ್ಲಿ ಗೆಳೆಯರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಗೆಳೆಯನಿಗೆ ಚಾಕು ಇರಿದು ನಂತರ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾದೇಶ್ ಬಂಧಿತ ಆರೋಪಿಯಾಗಿದ್ದರೆ, ರಾಜಕುಮಾರ್ ಕೊಲೆಯಾದ ಸ್ನೇಹಿತ. ಇಬ್ಬರೂ ಕ್ಯಾಬ್ ಚಾಲಕರಾಗಿದ್ದರು. ಇಬ್ಬರೂ ಸೇರಿಕೊಂಡು ಮದ್ಯ ಸೇವಿಸಲು ನಿರ್ಜನ ಪ್ರದೇಶಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿತ್ತು. ಮಾದೇಶನ ಕುಟುಂಬ ಹಾಗೂ ಮಕ್ಕಳ ಬಗ್ಗೆ ರಾಜಕುಮಾರ್ ನಿಂದಿಸಿದ್ದ ಎನ್ನಲಾಗಿದೆ. ಆಗ ಕೋಪಗೊಂಡ ಮಾದೇಶ ತನ್ನ ಕಾರ್ ನಲ್ಲಿದ್ದ ಚಾಕುವಿನಿಂದ ಎದೆ ಭಾಗಕ್ಕೆ ಇರಿದಿದ್ದ. ನಂತರ ತಾನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ನಂತರ ರಾಜ್ ಕುಮಾರ್ ಸಂಬಂಧಿಕರಿಗೆ ಕರೆ ಮಾಡಿ ಯಾರೋ ಅಪರಿಚಿತರು ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾನೆ.
ಆನಂತರ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆತ ಪರಾರಿಯಾಗಿದ್ದ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.