ಉದ್ಯಮಿಯೊಬ್ಬರನ್ನು (Businessman) ನಾಗರ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಉತ್ತರಾಖಂಡ (Uttarakhand) ಪೊಲೀಸರು (Police) ಬಂಧಿಸಿದ್ದಾರೆ. ಅಲ್ಲದೇ, ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಉತ್ತರ ಪ್ರದೇಶದ (Uttar Pradesh) ಹಾವಾಡಿಗ ರಮೇಶ್ನಾಥ್ ಎಂಬಾತ ಬಂಧಿತ ಆರೋಪಿ. ಡಾಲಿ ಆರ್ಯ ಹಾಗೂ ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ಎಂಬುವವರು ಆರೋಪಿಗಳಾಗಿದ್ದು ಅವರಿಗೆ ಕುಟುಂಬಸ್ಥರು ಕೂಡ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜು.15 ರಂದು ತೀನ್ಪಾನಿ ಪ್ರದೇಶದ ಬಳಿ ಅಂಕಿತ್ ಚೌಹಾಣ್ (30) ಎಂಬಾತನ ಶವ ಕಾರಿನೊಳಗೆ ಪತ್ತೆಯಾಗಿತ್ತು. ಆತನ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಾವಿನ ವಿಷ ಸೇರಿ ಸಾವನ್ನಪ್ಪಿರುವುದು ಗೊತ್ತಾಗಿತ್ತು. ಆತನ ಮೊಬೈಲ್ ಪರಿಶೀಲಿಸಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು.
ಮಹಿಳೆಯ ಕರೆಯ ವಿವರಗಳನ್ನು ಆಧರಿಸಿ ಆಕೆಯ ಫೋನ್ನ್ನು ಟ್ರ್ಯಾಕ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಹಿಳೆ ಹಾವಾಡಿಗನನ್ನು ಸಂಪರ್ಕಿಸಿರುವುದು ತಿಳಿದು ಬಂದಿದೆ. ಆರಂಭದಲ್ಲಿ ಕಾರಿನಲ್ಲಿ ವಿಷಾನಿಲ ಹೊರ ಸೂಸುವಿಕೆಯಿಂದ ಈ ಸಾವು ಸಂಭವಿಸಿದೆ ಎಂದು ಊಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ನಂತರ ತನಿಖೆಯ ದಾರಿ ಬದಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ನೈನಿತಾಲ್ ಪಂಕಜ್ ಭಟ್ ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.