ಬೆಳಗಾವಿ: ಅಪ್ರಾಪ್ತ ಬಾಲಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಹೊರವಲಯ ಸಂಭಾಜಿ ನಗರದಲ್ಲಿ ಈ ಘಟನೆ ನಡೆದಿದೆ. ಬೀಗ ಹಾಕಿದ ಮನೆಯ ಎದುರು ಕೊಲೆಯಾದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಸಮೀರ್ ಪಠಾಣ್, ಸಿಮ್ರನ್ ದಂಪತಿಯ ಹಿರಿಯ ಪುತ್ರ ಸಾಕೀಬ್ ಪಠಾಣ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಕೊಲೆಯಾದ ಸಾಕೀಬ್ ತಂದೆ ಸಮೀರ್ ಮುಸ್ಲಿಂ ಆಗಿದ್ದರೆ, ತಾಯಿ ಸಿಮ್ರನ್ ಹಿಂದೂ ಆಗಿದ್ದರು. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಈತ ಹಿಂದಿನ ದಿನ ತಂದೆ-ತಾಯಿಯೊಂದಿಗೆ ಜಗಳವಾಡಿ ಮನೆಯಿಂದ ಹೊರಗೆ ಹೋಗಿ, ನಾನು ಇವತ್ತು ಮನೆಗೆ ಬರುವುದಿಲ್ಲ ಎಂದು ತಾಯಿಗೆ ಬೇರೆಯವರ ಫೋನ್ ನಿಂದ ಕರೆ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ತಾಯಿಗೆ ಬಂದ ಕೊನೆಯ ಕರೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಆಗ ಸ್ನೇಹಿತರೇ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಉದ್ಯಾನವನದಲ್ಲಿ ತನ್ನ ಸ್ನೇಹಿತನ ಫೋಟೋ ಗ್ಯಾಲರಿ ಓಪನ್ ಮಾಡಿ ಆರೋಪಿತನ ಸ್ನೇಹಿತೆಯ ಫೋಟೋ ನೋಡಿ ಅಶ್ಲೀಲ ಕಮೆಂಟ್ ಮಾಡಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಆರೋಪಿ ಹಾಗೂ ಮತ್ತೋರ್ವ ಸ್ನೇಹಿತ 21 ವರ್ಷದ ಜುಬೇರ್ ಜೊತೆ ಸೇರಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಸಾಕೀಬ್ ಕೊಲೆ ಮಾಡಿದ ಬಾಲಕನ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಕೊಲೆಗೆ ಸಾಥ್ ನೀಡಿದ್ದ 21 ವರ್ಷದ ಜುಬೇರ್ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ ಎನ್ನಲಾಗಿದೆ.