ಆನೇಕಲ್: ವ್ಯಕ್ತಿಯೊಬ್ಬರನ್ನು ಕೇವಲ ಒಂದು ಅಡಿ ಜಾಗಕ್ಕಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸರು (Hebbagodi Police) ಬಂಧಿಸಿದ್ದಾರೆ. ಹಳೆ ವೈಷಮ್ಯದ ನೆಪದಲ್ಲಿ ಜಾಗದ ವಿಚಾರವಾಗಿ ಕಿರಿಕ್ ಮಾಡಿ ಪಕ್ಕದ ಮನೆಯ ರಮೇಶ್ ಎಂಬುವವರನ್ನು ಜಗದೀಶ್, ಮೋಸಿಸ್, ಕೃಷ್ಣಪ್ಪ ಅಲಿಯಾಸ್ ಜೋಸೆಫ್ ಕೊಲೆ ಮಾಡಿದ್ದರು ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಗದೀಶ್, ಮೋಸಿಸ್ ಇಬ್ಬರೂ ಹೆಬ್ಬಗೋಡಿ ಸ್ಟೇಷನ್ನಲ್ಲಿ ರೌಡಿ ಶೀಟರ್ಗಳಾಗಿದ್ದು ಕೊಲೆ, ಕಳ್ಳತನ, ದರೋಡೆ, ಹಲ್ಲೆ ಇತ್ಯಾದಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಕುರಿತು ಮಾಹಿತಿ ಸಿಕ್ಕಿದೆ.
ಒಂದು ವರ್ಷದ ಹಿಂದೆ ಪಟಾಕಿ ಹೊಡೆಯುವ ವಿಚಾರಕ್ಕೆ ಈ ಎರಡು ಗುಂಪುಗಳ ಮಧ್ಯೆಗಲಾಟೆ ನಡೆದಿತ್ತು. ಆ ಸಂದರ್ಭದಲ್ಲಿ ಜೋಸೆಫ್, ಶೋಭಿತ, ಜಗದೀಶ್ ಹಾಗೂ ಮೋಸಿಸ್ ಎಂಬುವವರು ಮೃತ ರಮೇಶ್ ಪತ್ನಿ ಕಾವ್ಯಳ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ರಮೇಶ್ ಪತ್ನಿ ಕಾವ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಆಗ ಪೊಲೀಸರು ಜಗದೀಶ್ ಹಾಗೂ ಮೋಸಿಸ್ ನನ್ನು ಜೈಲಿಗೆ ಕಳುಹಿಸಿದ್ದರು.
ಆಗ ಜೈಲಿನಿಂದ ಬೇಲ್ ಮೇಲೆ ಬಂದ ಜಗದೀಶ್ ಹಾಗೂ ಮೋಸಿಸ್ ಪ್ರತಿ ದಿನ ರಮೇಶ್ ಕುಟುಂಬಕ್ಕೆ ಟಾರ್ಚರ್ ನೀಡುತ್ತಿದ್ದರು. ಆದರೆ, ಹೆಬ್ಬಗೋಡಿಯಲ್ಲಿ ವಾಸವಾಗಿದ್ದ ರಮೇಶ್ ತನ್ನ ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಲು ಮುಂದಾಗಿದ್ದರು. ಆದರೆ ಈ ಆರೋಪಿಗಳು ಹಳೆ ವೈಷಮ್ಯದ ನೆಪದಲ್ಲಿ ಜಾಗದ ವಿಚಾರವಾಗಿ ರಮೇಶ್ ಕುಟುಂಬದ ಜೊತೆ ಜಗಳ ಮಾಡಿ ಕೊಲೆ ಮಾಡಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.