ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವೇಳೆ ಪೊಲೀಸ್ ಪೇದೆ ಸಮಯ ಪ್ರಜ್ಞೆ ಮೆರೆದು ಪ್ರಾಣ ಉಳಿಸಿರುವ ಘಟನೆ ನಡೆದಿದೆ.
ಕೀಟನಾಶಕ ಸೇವಿಸಿ ಗದ್ದೆಯಲ್ಲಿ ಬಿದ್ದಿದ್ದ ಯುವಕನನ್ನು ಹೆಗಲ ಮೇಲೆ ಹಾಕಿಕೊಂಡು ಓಡೋಡಿ ಬಂದು ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ್ದಾರೆ. ಸದ್ಯ ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೆಲಂಗಾಣದ ಕರೀಂನಗರ ಜಿಲ್ಲೆಯ ವೀಣವಂಕ ಮಂಡಲದ ಬೇಟಿಗಲ್ ಗ್ರಾಮದ ಸುರೇಶ್ ಎಂಬ ಯುವಕ ಮನೆಯಲ್ಲಿ ಜಗಳ ಮಾಡಿಕೊಂಡು ಜಮೀನಿಗೆ ಬಂದು ಕೀಟನಾಶಕ ಸೇವಿಸಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡುವವರು ಇದನ್ನು ಗಮನಿಸಿ 100ಕ್ಕೆ ಕರೆ ಮಾಡಿದ್ದಾರೆ. ಪೊಲೀಸ್ ಪೇದೆ ಜೈಪಾಲ್ ಮತ್ತು ಗೃಹರಕ್ಷಕ ದಳದ ಕಿನ್ನೇರ ಸಂಪತ್ ಸ್ಥಳಕ್ಕೆ ಆಗಮಿಸಿದ್ದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಕೂಡಲೇ ಜೈಪಾಲ್, ಸುರೇಶ್ನನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ಹೊಲದ ಗದ್ದೆಗಳ ನಡುವೆ ಸುಮಾರು ಎರಡು ಕಿ.ಮೀವರೆಗೆ ಓಡಿ ಗ್ರಾಮಕ್ಕೆ ಕರೆ ತಂದಿದ್ದಾರೆ.
ನಂತರ ಕುಟುಂಬಸ್ಥರಿಗೆ ಮಾಹಿತಿ ನೀಡಿ ಆಟೋದಲ್ಲಿ ಜಮ್ಮಿಕುಂಟಾ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆತನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಾರಂಗಲ್ ಎಂಜಿಎಂಗೆ ಸ್ಥಳಾಂತರಿಸಿದರು. ಪೊಲೀಸ್ ಪೇದೆ ಯುವಕನನ್ನು ರಕ್ಷಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.