ತಿರುವನಂತಪುರಂ: ರಾಷ್ಟ್ರಭಕ್ತಿ ಮತ್ತು ವಂದೇ ಮಾತರಂ ಗೀತೆಯ ಸುತ್ತಲಿನ ರಾಜಕೀಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಕೇರಳಂ ವಿಶ್ವವಿದ್ಯಾಲಯದ ಉಪಕುಲಪತಿ ಮೋಹನನ್ ಕುನ್ನುಮ್ಮಲ್ ಅವರು ನೀಡಿರುವ ಹೇಳಿಕೆಯೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ವಂದೇ ಮಾತರಂ’ ಎಂದು ಹೇಳಲು ವಿರೋಧಿಸುವವರಿಗೆ ತಮ್ಮ ಸ್ವಂತ ತಾಯಿ ಯಾರೆಂಬುದೇ ತಿಳಿದಿಲ್ಲ ಎಂದು ಹೇಳುವ ಮೂಲಕ ಅವರು ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಆರ್ಎಸ್ಎಸ್ ಯುವ ಸಮಾವೇಶದಲ್ಲಿ ಗಂಭೀರ ಹೇಳಿಕೆ
ಮಣಿವಿಲಾದಲ್ಲಿ ನಡೆದ ಆರ್ಎಸ್ಎಸ್ನ ಬೃಹತ್ ಯುವ ಸಮಾವೇಶ ‘ಸಂಕಲ್ಪ 2026 ಯುವ ಸಂಗಮ’ದಲ್ಲಿ ನೆರೆದಿದ್ದ ನೂರಾರು ಯುವಕರನ್ನು ಉದ್ದೇಶಿಸಿ ಮಾತನಾಡಿದ ಉಪಕುಲಪತಿ ಮೋಹನನ್ ಕುನ್ನುಮ್ಮಲ್, ಭಾರತ ಮಾತೆಯು ತನ್ನ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಹೆತ್ತವರಿಗೆ ನೀಡಿದ್ದಾಳೆ. ವಿಕಸಿತ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ಈ ಮಕ್ಕಳನ್ನು ಅತ್ಯಂತ ಪ್ರಖರ ಬುದ್ಧಿಮತ್ತೆಯ ಮಾದರಿ ಪ್ರಜೆಗಳನ್ನಾಗಿ ಬೆಳೆಸುವ ದೊಡ್ಡ ಜವಾಬ್ದಾರಿ ಕುಟುಂಬದ ಮೇಲಿದೆ. ಅದರಲ್ಲೂ ಮುಖ್ಯವಾಗಿ ಮನೆಯ ಯಜಮಾನಿ ಅಂದರೆ ತಾಯಿಯ ಮೇಲಿದೆ. ಇದೇ ಕಾರಣಕ್ಕಾಗಿ ನಾವು ಈ ಪವಿತ್ರ ಭೂಮಿಯನ್ನು ‘ಭಾರತ ಮಾತೆ’ ಎಂದು ಪೂಜಿಸುತ್ತೇವೆ ಎಂದರು.
ತಾಯಂದಿರ ಮೌಲ್ಯ ಅರಿತವರು ವಂದೇ ಮಾತರಂ ವಿರೋಧಿಸುವುದಿಲ್ಲ
ಮುಂದುವರಿದು ಮಾತನಾಡಿದ ಅವರು, ನಾವು ಪ್ರಾರ್ಥನೆ ಮಾಡುವಾಗ ಅತ್ಯಂತ ಗೌರವದಿಂದ ‘ವಂದೇ ಮಾತರಂ’ ಎಂದು ಗಾಯನ ಮಾಡುತ್ತೇವೆ. ಆದರೆ ಇದನ್ನು ವಿರೋಧಿಸುವವರು ಅಥವಾ ಹಾಡಲು ನಿರಾಕರಿಸುವವರು ತಮ್ಮ ತಾಯಿ ಯಾರೆಂದು ತಿಳಿಯದವರು. ತಮ್ಮ ತಾಯಿ ಯಾರೆಂದು ಸ್ಪಷ್ಟವಾಗಿ ತಿಳಿದಿರುವ ಮತ್ತು ತಾಯಿಯ ಶ್ರೇಷ್ಠತೆಯನ್ನು ಅರ್ಥಮಾಡಿಕೊಂಡಿರುವ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ‘ವಂದೇ ಮಾತರಂ’ ಎಂದು ಜಪಿಸುತ್ತಾನೆ ಎಂದು ತಿರುಗೇಟು ನೀಡಿದರು.
ಉಪಕುಲಪತಿಗಳ ಈ ಪ್ರಚೋದನಾತ್ಮಕ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕೇರಳ ರಾಜ್ಯ ರಾಜಕೀಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖ ವಿದ್ಯಾರ್ಥಿ ಸಂಘಟನೆಗಳಾದ ಎಸ್ಎಫ್ಐ ಮತ್ತು ಕೆಎಸ್ಯು, ವಿಸಿ ಕುನ್ನುಮ್ಮಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ವಿಶ್ವವಿದ್ಯಾಲಯದಂತಹ ಜಾತ್ಯತೀತ ವೇದಿಕೆಯಲ್ಲಿ ಆರ್ಎಸ್ಎಸ್ ಅಜೆಂಡಾವನ್ನು ಜಾರಿಗೆ ತರಲು ವಿಸಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿವೆ. ಇನ್ನು ಆಡಳಿತಾರೂಢ ಎಲ್ಡಿಎಫ್ ಹಾಗೂ ವಿರೋಧ ಪಕ್ಷವಾದ ಯುಡಿಎಫ್ ನಾಯಕರು, ರಾಜ್ಯಪಾಲರು ಇವರನ್ನು ಉಪಕುಲಪತಿಯನ್ನಾಗಿ ನೇಮಿಸಿರುವುದನ್ನೇ ಪ್ರಶ್ನಿಸಿದ್ದು, ಇದು ಕೇರಳದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಾವೀಕರಣಗೊಳಿಸುವ ವ್ಯವಸ್ಥಿತ ಸಂಚು ಎಂದು ಕಿಡಿಕಾರಿವೆ.
ಕೇಂದ್ರ ಸರ್ಕಾರದ ಸ್ಪಷ್ಟ ಮಾರ್ಗದರ್ಶನ ಮತ್ತು ನಿರ್ದೇಶನಗಳಿದ್ದರೂ ಸಹ, ಕೇರಳಂ ರಾಜ್ಯ ಸರ್ಕಾರವು ತನ್ನ ಅಧಿಕೃತ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡದೆ ಕೈಬಿಟ್ಟಿತ್ತು. ಈ ವಿಚಾರವಾಗಿ ಈಗಾಗಲೇ ಸಿಪಿಎಂ ಸರ್ಕಾರ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದ್ದು, ಇದೀಗ ವಿವಿ ಉಪಕುಲಪತಿಗಳ ಹೇಳಿಕೆಯು ಈ ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.






