ಕೋಲಾರ: ಇಬ್ಬರು ವ್ಯಕ್ತಿಗಳ ನಡುವಿನ ದ್ವೇಷ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಕಳೆದ ತಿಂಗಳು ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಹತ್ತಿರ ಗ್ರಾಪಂ ಸದಸ್ಯ ಅನಿಲ್ ಕುಮಾರ್ ಹತ್ಯೆಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಮಿಣಸಂದ್ರ ಗ್ರಾಪಂ ಸದಸ್ಯನಾಗಿರುವ ಮೃತ ಅನಿಲ್ ಕುಮಾರ್ ಹಾಗೂ ಗ್ರಾಮದ ಅಶೋಕ್ ಮಧ್ಯೆ ಹಲವಾರು ವಿಷಯಗಳ ಕುರಿತು ಭಿನ್ನಾಭಿಪ್ರಾಯವಿತ್ತು. ಇವರಿಬ್ಬರೂ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅಶೋಕ್ ನ ಸಹೋದರನ ಪತ್ನಿ ವಿಚ್ಛೇದನ ನೀಡಿದ್ದರು. ಇದರ ಹಿಂದೆ ಅನಿಲ್ ಇದ್ದಾನೆ ಎಂದು ಅಶೋಕ್ ದ್ವೇಷ ಸಾಧಿಸುತ್ತಿದ್ದ. ಹೀಗಾಗಿಯೇ ಸುಫಾರಿ ನೀಡಿ ಕೊಲೆ ಮಾಡಿಸಿ, ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.
ಕೊಲೆ ಮಾಡುವ ಒಂದು ತಿಂಗಳು ಮುಂಚೆ ಅಶೋಕ್ ಹಾಗೂ ಕುಟುಂಬಸ್ಥರ ಹೊಸ ಮೊಬೈಲ್ ಹಾಗೂ ಸಿಬ್ ಕೂಡ ಖರೀದಿಸಿದ್ದರು. ಪತ್ನಿಯ ಒಡವೆ ಮಾರಿ ಸುಫಾರಿ ಕಿಲ್ಲರ್ಸ್ ಗಳಿಗೆ ಹಣ ನೀಡಿದ್ದ ಎಂದು ಕೂಡ ತಿಳಿದು ಬಂದಿದೆ. ಸುಫಾರಿ ಕಿಲ್ಲರ್ ರಾಹುಲ್ ಹಾಗೂ ಸಹೋದರ ಅನಿಲ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೂಡಲೇ ಪೊಲೀಸರು ಅಶೋಕ್ನ ಸಹೋದರ ಅನಿಲ್, ಪತ್ನಿ ಗೀತಾ, ಆನಂದ್, ಕಿರಣ್, ಹರಿಕಾಂತ್ ಸೇರಿದಂತೆ ಐವರನ್ನು ಬಂಧಿಸಿದರು. ಇನ್ನೊಂದೆಡೆ ಅಶೋಕ್ ನನ್ನು ಬಂಧಿಸುವ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾದಾಗ ಫೈರಿಂಗ್ ಮಾಡಿ ಬಂಧಿಸಿದ್ದಾರೆ ಎನ್ನಲಾಗಿದೆ. ಕೊಲೆ ಮಾಡಿರುವ ರಾಹುಲ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.