ಕಲಬುರಗಿ : ಪತಿಯ ಪಾಲಿನ ಆಸ್ತಿ ಕೇಳಿದ್ದಕ್ಕೆ ಚಿಕ್ಕಮ್ಮನನ್ನೇ ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ಕಲಬುರಗಿ (Kalaburagi) ನಗರದಲ್ಲಿ ನಡೆದಿದೆ.
ವಿಜಯಲಕ್ಷ್ಮಿ ಮಠಪತಿ ಕೊಲೆಯಾದ ಮಹಿಳೆ. ಇವರು ಮೂಲತಃ ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದವರು. ಕಳೆದ ಕೆಲವು ವರ್ಷಗಳಿಂದ ಪತಿಯೊಂದಿಗೆ ಕಲಬುರಗಿ ನಗರದಲ್ಲಿ ನೆಲೆಸಿದ್ದರು. ಪತಿ ಮಲ್ಕಯ್ಯಸ್ವಾಮಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ವಿಜಯಲಕ್ಷ್ಮಿ ಮನೆಗೆಲಸ ಮಾಡಿಕೊಂಡಿದ್ದರು. ಇವರಿಗೆ ನಾಲ್ಕು ಮಕ್ಕಳಿದ್ದಾರೆ.
ಮಲ್ಕಯ್ಯಸ್ವಾಮಿ ಹಾಗೂ ಆತನ ಸಹೋದರನ ಮಕ್ಕಳಿಗೂ ಆಸ್ತಿಯ ವಿಷಯದಲ್ಲಿ ವೈಷಮ್ಯ ಇತ್ತು. ಹೀಗಾಗಿ ಆರೋಪಿಗಳು ಇವರ ವಿರುದ್ಧ ಹಗೆ ಸಾಧಿಸುತ್ತಿದ್ದರು. ಎಂದಿನಂತೆ ಮಲ್ಕಯ್ಯಸ್ವಾಮಿ ಕೆಲಸಕ್ಕೆ ಹೋದ ವೇಳೆ ವಿಜಯಲಕ್ಷ್ಮಿ ಮಕ್ಕಳ ಜೊತೆ ಮನೆಯಲ್ಲಿದ್ದರು. ಈ ಸಮಯದಲ್ಲಿ ಮಲ್ಕಯ್ಯಸ್ವಾಮಿಯ ಸಹೋದರ ಮಕ್ಕಳಾದ ರೇವಣಸಿದ್ದಯ್ಯ, ಮಡೆಪ್ಪಾ, ಸಿದ್ರಾಮಯ್ಯ ಬಂದಿದ್ದಾರೆ. ಬಂದವರೇ ಆಸ್ತಿ ಕೇಳುತ್ತೀರಾ, ನಮಗೆ ಪದೇ ಪದೇ ತೊಂದರೆ ಕೊಡುತ್ತೀರಾ ಎಂದು ಕೇಳಿ, ವಿಜಯಲಕ್ಷ್ಮಿಗೆ ಚಾಕು ಮತ್ತು ತಲವಾರ್ನಿಂದ ಇರಿದು ಕೊಲೆ ಮಾಡಿದ್ದಾರೆ.
ವಿಜಯಲಕ್ಷ್ಮಿ ಪತಿ ಮಲ್ಕಯ್ಯಸ್ವಾಮಿಗೆ ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದಲ್ಲಿ ಒಂಬತ್ತು ಎಕರೆ ಪಿತ್ರಾರ್ಜಿತ ಆಸ್ತಿಯಿದೆ. ಈ ಆಸ್ತಿಯನ್ನು ಮಲ್ಕಯ್ಯಸ್ವಾಮಿ ಸಹೋದರ ಮಕ್ಕಳೇ ಅನುಭವಿಸುತ್ತಿದ್ದರು. ಹೀಗಾಗಿ ತಮಗೆ ಸೇರಬೇಕಿದ್ದ ಆಸ್ತಿಯನ್ನು ವಿಜಯಲಕ್ಷ್ಮಿ ಅನೇಕ ಬಾರಿ ಕೇಳಿದ್ದರು. ನ್ಯಾಯಾಲಯ ಕೂಡಾ ಜಮೀನಿನಲ್ಲಿ ವಿಜಯಲಕ್ಷ್ಮಿ ಪತಿಗೆ ಹಕ್ಕಿದೆ ಎಂದು ಆದೇಶಿಸಿತ್ತು. ಆದರೆ, ಇವರು ಮಾತ್ರ ಆಸ್ತಿ ಬಿಟ್ಟುಕೊಟ್ಟಿರಲಿಲ್ಲ. ಸದ್ಯ ಪಾಪಿಗಳು ಭೂಮಿಯ ಆಸ್ತಿಗಾಗಿ ಮಹಿಳೆಯನ್ನೇ ಕೊಲೆ ಮಾಡಿದ್ದಾರೆ. ಈ ಕುರಿತು ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.