ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ ಮಹಿಳೆಯೊಬ್ಬರು ತಮ್ಮ ಕುಟುಂಬವನ್ನೇ ಬಲಿ ಪಡೆದಿರುವ ಘಟನೆಯೊಂದು ನಡೆದಿದೆ.
ತೆಲಂಗಾಣದ ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲದ ನಾರಾಯಣಪುರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಜಗಳದಿಂದ ಮನಸ್ತಾಪಗೊಂಡು ತನ್ನ ಕುಟುಂಬಸ್ಥರಿಗೆ ಇಲಿ ಪಾಷಾಣ ಬೆರೆಸಿದ ಚಹಾ ನೀಡಿ ಸಾವಿಗೆ ಕಾರಣವಾಗಿದ್ದಾಳೆ. ಈ ಪೈಕಿ ಮೂವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ತಾಂಡಾ ನಿವಾಸಿ ರವಿ ನಾಯಕ್ ಹಾಗೂ ವಸಂತ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ನಾಲ್ವರು ಗಂಡು ಮಕ್ಕಳಿದ್ದರು. ಕೊನೆಯ ಇಬ್ಬರು ಅವಳಿ ಮಕ್ಕಳು. ಈ ಪೈಕಿ ಮೂವರು ತಂದೆ-ತಾಯಿಯೊಂದಿಗೆ ಬೆಳೆಯುತ್ತಿದ್ದರೆ, ಓರ್ವ ಮಗ ಅಜ್ಜಿಯ ಮನೆಯಲ್ಲಿ ಬೆಳೆಯುತ್ತಿದ್ದ. ಸಂಸಾರ ದೊಡ್ಡದಿದ್ದ ಹಿನ್ನೆಲೆಯಲ್ಲಿ ರವಿನಾಯಕ್ ಹೈದರಾಬಾದ್ ನಲ್ಲಿ ನೆಲೆಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ.
ಹೀಗಾಗಿ ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದ.
ಹೀಗೆ ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದ. ಆತ ಮರಳಿ ಹೋಗುವಾಗ, ಪತ್ನಿ ತನ್ನ ತವರು ಮನೆಗೆ ಹೋಗುವುದಾಗಿ ಹೇಳಿದ್ದಾಳೆ. ಇದಕ್ಕೆ ಪತಿ ಒಪ್ಪಿಗೆ ನೀಡಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ. ನಂತರ ಮಲಗಿದ್ದಾರೆ. ಆದರೆ, ಬೆಳಿಗ್ಗೆ ಎದ್ದ ಕೂಡಲೇ ವಸಂತ, ಇಲಿ ಪಾಷಾಣದ ಚಹಾ ಮಾಡಿ ಕೊಟ್ಟಿದ್ದಾಳೆ. ಕುಡಿಯುತ್ತಿದ್ದಂತೆ ವಾಂತಿ ಆರಂಭವಾಗಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಸಾವನ್ನಪ್ಪಿದ್ದರೆ, ಪತಿ ಹಾಗೂ ಪತ್ನಿಯ ಸ್ಥಿತಿ ಗಂಭೀರವಾಗಿದೆ.