ಬೆಂಗಳೂರು: ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಊಟದಲ್ಲಿ ಹುಳು ಪತ್ತೆಯಾಗಿರುವ ಘಟನೆ ನಡೆದಿದೆ.
ಮೊಸರನ್ನದಲ್ಲಿ ಹುಳ ಕಂಡುಬಂದಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರ ವಾಟ್ಸಾಪ್ ಗ್ರೂಪ್ಗಳಲ್ಲಿ ಹುಳ ಇರುವ ಫೋಟೋ ಹರಿದಾಡಿದೆ. ಆಹಾರದಲ್ಲಿ ಅಕ್ಕಿಯಂತೆ ಕಂಡುಬರುವ ಹುಳ ಇರುವ ಫೋಟೋ ವೈರಲ್ ಆಗಿದೆ.
ಈ ಹಿಂದೆ ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಇಲಿ ಕಂಡುಬಂದಿತ್ತು. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ಕೆಲ ಸಂಘ, ಸಂಸ್ಥೆಗಳು ಸೇರಿ ಸೆ.26 ಬೆಂಗಳೂರು ಬಂದ್ ಮಾಡಿದ್ದವು. ಆಗ ನಿಯೋಜನೆಗೊಂಡಿದ್ದ ಪೊಲೀಸರಿಗೆ ಹೋಟೆಲ್ನಿಂದ ತಿಂಡಿ ಸರಬರಾಜು ಮಾಡಲಾಗಿದ್ದು, ಅದರಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದರು.
ಆ ವೇಳೆ ಬೆಂಗಳೂರಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಪ್ರತಿಕ್ರಿಯಿಸಿದ್ದು, ಹೋಟೆಲ್ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಹೇಳಿದ್ದರು.