ದುಷ್ಟ ಶಕ್ತಿ ಬಿಡಿಸುವುದಾಗಿ ಪಾಪಿಯೊಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. 52 ವರ್ಷದ ವ್ಯಕ್ತಿ 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮೀನಾಕ್ಷಿ ಕಾಟ್ಯಾಯನ್ ಮಾತನಾಡಿ, ಮಿರ್ಜಾಪುರದಿಂದ ಸೀತಾಮರ್ಹಿಗೆ ಭೇಟಿ ನೀಡುವುದಕ್ಕಾಗಿ ಕುಟುಂಬವೊಂದು ಬಂದಿತ್ತು. ಈ ವೇಳೆ ಮೋತಿಲಾಲ್ (52) ತಾಂತ್ರಿಕ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೇ, ಯುವತಿಗೆ ದೆವ್ವ ಹಿಡಿದಿದೆ ಎಂದು ಹೇಳಿ, ಪಾಲಕರನ್ನು ನಂಬಿಸಿದ್ದಾನೆ. ದೆವ್ವ ಬಿಡಿಸುವುದಕ್ಕಾಗಿ ಹಣ ಕೂಡ ಇಸಿದುಕೊಂಡಿದ್ದಾನೆ. ಆನಂತರ ಯುವತಿಯನ್ನು ಕರೆದುಕೊಂಡು ದರ್ವಸಿ ಗ್ರಾಮದ ದೇವಸ್ಥಾನದ ಹಿಂದಿನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಈ ವೇಳೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಸದ್ಯ ಕುಟುಂಬಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.