ಆನೆಯ ಶವ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆ
ಕಾಡಾನೆಯನ್ನು ಕೊಂದು ಬಳಿಕ ದಂತ ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಅಲ್ಲದೇ ಆನೆಯನ್ನ ಹೂತಿದ್ದ ಸ್ಥಳದಿಂದ ದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಅರಣ್ಯ ತನಿಖಾ ದಳದ ಡಿಸಿಎಫ್ ರವೀಂದ್ರ ನೇತೃತ್ವದಲ್ಲಿ ಸ್ಥಳ ಮಹಜರ್ ಮಾಡಲಾಗಿದ್ದು, ನೆನ್ನೆ ಆನೆ ದಂತ ಮಾರಾಟಮಾಡಲು ಮುಂದಾಗಿದ್ದ ವೇಳೆ ಮೂರು ಆರೋಪಿಗಳ ಬಂಧನ ಮಾಡಲಾಗಿದೆ. ಹಾಸನದ ವೀರಾಪುರದ ಚಂದ್ರೇಗೌಡ(48) ನಾಗರಾಜ್(42) ತಿಲಕ್ (39), ತಮ್ಮಯ್ಯ ಹಾಗೂ ಪಾಪಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮದ 8ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ.
ಕೃಷಿಗೆ ಕಾಡಾನೆಗಳ ಉಪಟಳ ತಪ್ಪಿಸಲು ಆರೋಪಿಗಳು ಆನೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಅದರಂತೆ ಜಮೀನಿಗೆ ವಿದ್ಯುತ್ ಬೇಲಿ ಹಾಕಿದ್ದರು ವಿದ್ಯತ್ ತಂತಿ ತಗುಲಿ ಆನೆ ಮೃತ ಪಟ್ಟಿತ್ತು. ಆರೋಪಿಗಳು ಆನೆಯ ದಂತವನ್ನು ಬೇರ್ಪಡಿಸಿ ಆನೆಯನ್ನ ರಾತ್ರೋರಾತ್ರಿ ಜಮೀನಿನಲ್ಲಿ ಹೂತು ಹಾಕಿದ್ದರು.
ದಂತವನ್ನು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಾರಾಟ ಮಾಡಲು ಯತ್ನ ಮಾಡುತ್ತಿದ್ದಾಗ ಬೆಂಗಳೂರು ಪೊಲೀಸರು ಹಾಗೂ ಹಾಸನ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಹಾಸನದ ವೀರಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹೂತು ಹಾಕಲಾಗಿದ್ದ ಆನೆಯ ಮೃತದೇಹವನ್ನ ಜೆಸಿಬಿ ಮೂಲಕ ಹೊರ ತೆಗೆಯಲಾಗಿದೆ.
ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಂದ ಇನ್ನಷ್ಟು ಮಾಹಿತಿಕಲೆ ಹಾಕುತ್ತಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.