ತಂದೆ-ತಾಯಿ (parents) ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಗನನ್ನು ಪೊಲೀಸರು ಮಡಿಕೇರಿಯ ಕಾಡಿನಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಿ ಶರತ್ (25) ಬಂಧಿತ ಆರೋಪಿ. ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ನಿವಾಸಿಯಾಗಿದ್ದ ಆರೋಪಿಯು ತಂದೆ ಭಾಸ್ಕರ್ (61) ಮತ್ತು ತಾಯಿ ಬಿ ಶಾಂತಾ (60) ಅವರ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ಶರತ್ ಪದವೀಧರನಾಗಿದ್ದರೂ ಕೆಲಸವಿಲ್ಲದೆ ಮನೆಯಲ್ಲಿ ಇರುತ್ತಿದ್ದ. ಅಲ್ಲದೇ, ಆಗಾಗ ಕುಡಿದು ಬಂದು ತಂದೆ, ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಜುಲೈ 17ರಂದು ತಂದೆ-ತಾಯಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.
ಕೊಲೆ ಮಾಡಿದ್ದ ಆರೋಪಿಯು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಮಡಿಕೇರಿಗೆ ತೆರಳಿದ್ದಾನೆ. ಅಲ್ಲಿನ ಕಾಡಿನಲ್ಲಿ ಎರಡು ದಿನಗಳ ಕಾಲ ಊಟವಿಲ್ಲದೆ ತಲೆಮರಿಸಿಕೊಂಡಿದ್ದಾನೆ. ಆನಂತರ ಹಸಿವಿನಿಂದ ಕಾಡಿನಿಂದ ಹೊರಗೆ ಬಂದ ವೇಳೆ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾನೆ ಎನ್ನಲಾಗಿದೆ.
ಪ್ರತಿಷ್ಠಿತ ಹೋಟೆಲ್ ಕ್ಯಾಂಟೀನ್ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಮತ್ತು ನಿವೃತ್ತ ಐಟಿಐ ಉದ್ಯೋಗಿ ಶಾಂತಾ ಅವರನ್ನು ಶರತ್ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ.