ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ಬ್ಯಾಡಗಿ ಮೆಣಸಿಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿಪುಡಿ ಕೋಟ್ಯಾಂತರ ರೂ. ವ್ಯಾಪಾರ ಮಾಡುತ್ತಿದ್ದಾನೆ ಎನ್ನಲಾಗಿದೆ.
ಧ್ವನಿ ಪರೀಕ್ಷೆಗೆಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ನಾನು ನೂರಾರು ಕೋಟಿ ರೂ.ಗೆ ಬಾಳ್ತೀನಿ. ನಾನು ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ. ನಾಸೀರ್ ಹುಸೇನ್ ಬೆಂಬಲಿಗನಾಗಿದ್ದ ನಾಶಿಪುಡಿ, ಮುಂಬರುವ ಚುನಾವಣೆಯಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದ. ಇವರ ಕುಟುಂಬಸ್ಥರು ಸುಮಾರು 50 ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಎ1 ಆರೋಪಿಯಾಗಿ ಬಂಧನವಾಗಿದ್ದಾನೆ.
ನಿನ್ನೆ ಬಂಧಿಸಿರುವ ಪೊಲೀಸರು, ಕೋರಮಂಗಲದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದರು. ನ್ಯಾಯಾಧೀಶರು ಮಾರ್ಚ್ 6 ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಹೀಗಾಗಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬಂಧಿತರ ಪೈಕಿ ನಾಶಿಪುಡಿ, ಮುನಾವರ್ ಸ್ನೇಹಿತರಾಗಿದ್ದರೆ ಮಹಮ್ಮದ್ ಇಲ್ತಾಜ್ ಗೂ ಇನ್ನಿಬ್ಬರಿಗೂ ಪರಿಚಯವೇ ಇಲ್ಲ. ಬಂಧಿತ ಮೂವರ ಮೊಬೈಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಈಗ ಮುಂದಾಗಿದ್ದಾರೆ.
ಎಫ್ಎಸ್ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ದೃಢಪಡುತ್ತಿದ್ದಂತೆ ವಿಧಾನಸೌಧ ಪೊಲೀಸರು 40ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿ, 15 ಜನರ 15 ಮಂದಿ ಧ್ವನಿಯ ಮಾದರಿಯನ್ನು ಸಂಗ್ರಹಿಸಿದ್ದರು. ಸದ್ಯ ವರದಿಯಂತೆ ಮೂವರನ್ನು ಬಂಧಿಸಲಾಗಿದೆ.