ಬೆಂಗಳೂರು: ಮತಯಾಚನೆ ಸಂದರ್ಭದಲ್ಲಿ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ನಗರದ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್(FIR) ದಾಖಲಾಗಿದೆ. ಆರ್ಆರ್ ನಗರ ಅಪಾರ್ಟ್ಮೆಂಟ್ ವೊಂದರಲ್ಲಿ ಮತಯಾಚನೆ ಸಂದರ್ಭದಲ್ಲಿ ಡಿಕೆಶಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಚುನಾವಣಾ ಆಯೋಗಕ್ಕೆ ಬಿಜೆಪಿ ಮಾಹಿತಿ ನೀಡಿತ್ತು. ಹೀಗಾಗಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ಡಿಕೆ ಶಿವಕುಮಾರ್ ಮತಯಾಚನೆ ಮಾಡಿದ್ದರು. ಈ ಸಂದರ್ಭದಲ್ಲಿಯೇ ಈ ಆರೋಪ ಕೇಳಿ ಬಂದಿತ್ತು. ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬಳಸಿರೋ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.
ಈ ಕುರಿತು ಬಿಜೆಪಿ ಟ್ವೀಟ್ ಮಾಡಿತ್ತು. ಡಿಕೆಶಿ ಮಾತನಾಡುತ್ತಿರುವ ವಿಡಿಯೋವನ್ನೂ ಕೂಡ ಹಂಚಿಕೊಂಡಿತ್ತು. ‘ನಾನು ಇಲ್ಲಿಗೆ ವ್ಯವಹಾರಕ್ಕಾಗಿ ಬಂದಿದ್ದೇನೆ. ಈ ಅಪಾರ್ಟ್ಮೆಂಟ್ನಲ್ಲಿ 2510 ಮನೆಗಳಿವೆ. 6424 ಮತಗಳಿವೆ. ನಿಮ್ಮ ಎರಡು ಸಮಸ್ಯೆಗಳೆಂದರೆ ಹಕ್ಕುಪತ್ರ ನಿಮಗೆ ಹಸ್ತಾಂತರವಾಗದಿರುವುದು. ಎರಡನೇಯದ್ದು ಕಾವೇರಿ ನೀರು ಸಂಪರ್ಕ ದೊರೆಯದೇ ಇರುವುದು. ನಿಮ್ಮ ಬೂತ್ ಆರ್ಆರ್ ನಗರದಲ್ಲಿದೆ. 2 ರಿಂದ 3 ಬೂತ್ನಲ್ಲಿ ನಮ್ಮ ಪರ ಮತಗಳಿವೆ. ಪ್ರಶ್ನಾರ್ಥಕವಾಗಿ ಉಳಿದಿರುವುದು ನಿಮ್ಮ ಬೂತ್ ಮಾತ್ರ. ಈಗ ಹೇಳಿ ಏನು ಮಾಡುತ್ತೀರಿ’ ಎಂದು ಡಿಕೆಶಿ ಕೇಳಿದ್ದರು. ಇದನ್ನು ಬಿಜೆಪಿ ಟ್ವೀಟ್ ಮಾಡಿತ್ತು.