ರಾಷ್ಟ್ರಪತಿ ಬದಲು ರಾಷ್ಟ್ರಪತ್ನಿ ಎಂದ ಕಾಂಗ್ರೆಸ್ ನಾಯಕ – ಕಲಾಪದಲ್ಲಿ ಕೋಲಾಹಲ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಕರೆಯುವ ಮೂಲಕ ಕಾಂಗ್ರೆಸ್ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ರಾಷ್ಟ್ರಪತ್ನಿ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು, ತಮ್ಮ ಪಕ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರಾಷ್ಟ್ರಪತಿ ಎನ್ನುವ ಬದಲು ರಾಷ್ಟ್ರಪತ್ನಿ ಎಂದಿದ್ದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ಈ ಪದವನ್ನು ಬಳಸುವುದರಿಂದ ದ್ರೌಪದಿ ಮುರ್ಮು ಅವರನ್ನ ಅವಮಾನಿಸಲಾಗುತ್ತಿದೆ. ಇದು ಭಾರತದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಕೂಡಲೇ ರಾಷ್ಟ್ರಪತಿ ಮುರ್ಮು ಮತ್ತು ಮತ್ತು ದೇಶದ ಕ್ಷಮೆಯಾಚಿಸಬೇಕು. ‘ಇತಿಹಾಸ ಸೃಷ್ಟಿಸಿದ ಬಡ ಕುಟುಂಬದ ಬುಡಕಟ್ಟು ಮಹಿಳೆಯನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನ ಹೆಸರಿಸಿದಾಗಿನಿಂದಲೂ ಕಾಂಗ್ರೆಸ್, ಮುರ್ಮು ಅವರನ್ನು ‘ದುರುದ್ದೇಶಪೂರ್ವಕವಾಗಿ’ ಗುರಿಯಾಗಿಸಿ ಅವಮಾನಿಸುತ್ತಿದೆ. ಕಾಂಗ್ರೆಸ್ನ ನಾಯಕರು ಅವರನ್ನು ‘ಕೈಗೊಂಬೆ’ ಮತ್ತು ‘ರಬ್ಬರ್ ಸ್ಟಾಂಪ್’ ಎಂದು ಕರೆದಿದ್ದರು ಎಂದು ಬಿಜೆಪಿ ಎಂದು ಆರೋಪಿಸಿದರು.