Agriculture : ಉದ್ಯಮಿಗಳ ಪಾಲಾಗುವ ಭೂಮಿಗೆ ರೈತನೇ ಒಡೆಯನಾಗುವ ಕಾನೂನಿಗೆ ಒತ್ತಾಯ..!!
ವಾಣಿಜ್ಯೋದ್ಯಮಕ್ಕಾಗಿ ಅದೆಷ್ಟೋ ರೈತರು ತಮ್ಮ ಭೂಮಿಯನ್ನ ಕಳೆದುಕೊಂಡು ಸರಿಯಾದ ಹಣವೂ ಸಿಗದೇ ಸಂಕಟ ಪಟ್ಟಿದ್ದಾರೆ.. ತಮ್ಮದೇ ಭೂಮಿ ಕಳೆದುಕೊಂಡಿದ್ದಾರೆ..
ಇದೀಗ ಉದ್ಯಮಿಗಳ ಪಾಲಾಗುವ ಭೂಮಿಗೆ ರೈತನೇ ಒಡೆಯನಾಗಲಿ..
ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಾಣಿಜ್ಯೋದ್ಯಮಿಗಳಿಗೆ ನೀಡುವ ಸರ್ಕಾರ ಆ ಭೂಮಿಗೆ ಖಾಯಂ ಆಗಿ ರೈತನೇ ಮಾಲೀಕನಾಗಿರಬೇಕೆಂಬ ಕಾನೂನು ಜಾರಿಗೆ ತರುವಂತೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಸಲಹೆ ನೀಡಿದ್ದಾರೆ..
ಗುರುವಾರ ತರಳಬಾಳು ಮಠಕ್ಕೆ ಭೇಟಿ ನೀಡಿದ್ದ ಜೆ.ಪಿ.ನಡ್ಡಾ ಅವರೊಂದಿಗೆ ರೈತರ ಹಿತಾಸಕ್ತಿ ಕುರಿತು ಮಾತುಕತೆ ನಡೆಸಿದರು. ಇದೇ ವೇಳೆ ಇಂತಹ ಕಾನೂನು ಜಾರಿಗೆ ತಂದರೆ ರೈತರು ಅತಂತ್ರ ಸ್ಥಿತಿಯ ಆತಂಕದಿಂದ ಅವರಿಗೆ ರಕ್ಷಣೆ ಸಿಗಬಹುದು ಎಂದು ಹೇಳಿದ್ದಾರೆ.
ರೈತನ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರವಾಗಿ ಒಂದಷ್ಟು ಹಣವನ್ನು ನೀಡಲಾಗುತ್ತಿದೆ. ಆದರೆ, ಹಣ ರೈತರ ಕೈಯಲ್ಲಿ ಬಹಳ ದಿನ ಉಳಿಯುವುದಿಲ್ಲ. ಬದಲಿಗೆ ರೈತರ ಭೂಮಿಯಲ್ಲಿ ಸ್ಥಾಪನೆಯಾಗುವ ಉದ್ದಿಮೆಯಿಂದ ಪ್ರತಿ ವರ್ಷ ರೈತರಿಗೆ ನಿಶ್ಚಿತ ಮೊತ್ತ ದೊರೆಯಬೇಕು. ಸ್ವಾಧೀನಕ್ಕೊಳಪಡುವ ಭೂಮಿಯಲ್ಲಿ ಉದ್ದಿಮೆ ಸ್ಥಾಪಿಸುವ ವಾಣಿಜ್ಯೋದ್ಯಮಿ ಮತ್ತು ರೈತರ ಮಧ್ಯೆ ಅಂತಹ ಒಪ್ಪಂದ ಆಗಬೇಕು.
ಕಾನೂನಿಯಲ್ಲಿ ಆ ರೀತಿ ಬದಲಾವಣೆ ತರಬೇಕು ಎಂದು ತಿಳಿಸಿದರು.
ಭೂಮಾಲಿಕ ರೈತರ ಅವಲಂಬಿತರಿಗೆ ಕೆಲವು ಉದ್ದಿಮೆದಾರರು ಚಿಕ್ಕಪುಟ್ಟ ನೌಕರಿ ನೀಡುತ್ತಾರೆ. ಆದರೆ, ಅವರಿಗೆ ನಿವೃತ್ತಿ ವೇತನ ದೊರೆಯುವುದಿಲ್ಲ. ಆಗ ಅವರು ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹೀಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಮಾಲೀಕರನ್ನು ಖಾಯಂ ಆಗಿ ಭೂ ಒಡೆಯರಾಗಿ ಉಳಿಸಿಕೊಳ್ಳುವ ಕಾಯ್ದೆ ಜಾರಿಗೆ ತರಬೇಕು. ಇಂತಹ ಕಾಯಿದೆ ದುಬೈ ಮುಂತಾದ ದೇಶಗಳಲ್ಲಿ ಜಾರಿಯಲ್ಲಿದೆ ಎಂದರು.